ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತೆರೆದಿದೆ. ಆದರೆ, ಸ್ವಂತ ಕಟ್ಟಡವಿದೆ, ಇಲಾಖೆಯ ಒಂದೇ ಕಟ್ಟಡದಲ್ಲಿ ಬಾಲಕ, ಬಾಲಕಿಯರ ವಾಸ್ತವ್ಯ ಮತ್ತು ತರಗತಿ ನಡೆಯುತ್ತಿದೆ.
ಇರುವ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದ ಅಭಾವ ಉಂಟಾಗಿದ್ದು, ತಗಡಿನ ಶೆಡ್ನಲ್ಲಿ ಪಾಠ, ಹೊರಾಂಗಣದಲ್ಲಿ ಲಗೇಜು, ಒಂದೇ ಕೊಠಡಿಯಲ್ಲಿ 25ರಿಂದ 30 ವಿದ್ಯಾರ್ಥಿಗಳು ವಾಸಮಾಡುತ್ತಿದ್ದಾರೆ. ವಸತಿ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಎರಡು ವರ್ಷಗಳಿಂದ ಶೃಂಗಾರತೋಟ ಗ್ರಾಮದ ಸಮೀಪ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಟ್ಟಡ ನಿರ್ಮಾಣಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
2017-18ನೇ ಶೈಕ್ಷಣಿಕ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭವಾಗಿತ್ತು. ಆರಂಭದಲ್ಲಿ ಪಟ್ಟಣದ ಕೆಎಚ್ಬಿ ಬಡಾವಣೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತಿತ್ತು. 2022-23ನೇ ಸಾಲಿನಲ್ಲಿ ವಸತಿ ಇಲಾಖೆಯ, ವಸತಿ ನಿಲಯದ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು.
ಇಲ್ಲಿ 6ರಿಂದ 10ನೇ ತರಗತಿವರೆಗೆ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 8 ಕಾಯಂ ಶಿಕ್ಷಕರು, 3 ಅತಿಥಿ ಶಿಕ್ಷಕರು, 8 ಜನ ಡಿ ದರ್ಜೆಯ ನೌಕರರು ಸೇರಿದಂತೆ 19 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ವಸತಿ ನಿಲಯ ಎರಡು ಅಂತಸ್ತಿನ ಕಟ್ಟಡವಾಗಿದ್ದು, ನೆಲಮಹಡಿಯಲ್ಲಿರುವ 6 ಕೋಣೆಗಳಲ್ಲಿ ಬಾಲಕರು, ಮೇಲ್ಭಾಗದ ಕೋಣೆಗಳಲ್ಲಿ ಬಾಲಕಿಯರು ಉಳಿದುಕೊಂಡಿದ್ದಾರೆ. ಜಾಗ ಸಾಲದೆ ಅಡುಗೆ ಕೋಣೆ, ಊಟದ ಹಾಲ್ನಲ್ಲೂ ವಿದ್ಯಾರ್ಥಿಗಳು ಮಲಗುತ್ತಾರೆ.
ಶಾಲೆಯ ಸಿಬ್ಬಂದಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಟ್ಟಡದ ಹಿಂಭಾಗದಲ್ಲಿ ನಿರ್ಮಿಸಿರುವ ತಗಡಿನ ಚಪ್ಪರ, ತಗಡಿನ ಛಾವಣಿಗಳಲ್ಲಿ 8ರಿಂದ 10ನೇ ತರಗತಿಗಳಿವೆ. ವಿದ್ಯಾರ್ಥಿಗಳು ಉಳಿದುಕೊಳ್ಳುವ ಕೊಠಡಿಯಲ್ಲಿಯೇ 6ಮತ್ತು 7ನೇ ತರಗತಿ ನಡೆಸಲಾಗುತ್ತಿದೆ. ಮಕ್ಕಳ ಲಗೇಜ್, ಕಚೇರಿಗೆ ಸಂಬಂಧಿಸಿದ ವಸ್ತುಗಳನ್ನು ಹೊರಾಂಗಣದಲ್ಲಿ ಇರಿಸಲಾಗಿದೆ.
ಆದಷ್ಟು ಬೇಗ ಶೃಂಗಾರತೋಟ ಸಮೀಪದ ನಿರ್ಮಾಣವಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಶೀಘ್ರ ಪೂರ್ಣಗೊಂಡು, ಹಸ್ತಾಂತರಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುತ್ತಿದ್ದಾರೆ ಪೋಷಕರು.