ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮದ ಹೊರವಲಯದಲ್ಲಿ ಸಾರ್ವಜನಿಕ ರಸ್ತೆಯಲ್ಲುಯೇ ನಗರಸಭೆಯವರು ಕಸ ಹಾಕುತ್ತಿದ್ದು ಇದೀಗ ಈ ಕಸದ ರಾಶಿ ಬಹುದೊಡ್ಡದಾಗಿ ಬೆಳೆದಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಓಡಾಡಲು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ನಗರಸಭೆ ಮೇಲೆ ಅಸಮಾಧಾನಗೊಂಡಿದ್ದಾರೆ.
ನಿರಂತವಾಗಿ ಕಸವನ್ನು ಸುರಿಯಲಾಗುತ್ತಿದ್ದು, ಆ ಪ್ರದೇಶದಲ್ಲಿ ದೊಡ್ಡಮಟ್ಟದ ತಿಪ್ಪೆಯಾಗಿದೆ. ಇದರ ಅಕ್ಕ ಪಕ್ಕದಲ್ಲಿರುವ ಹೊಲಗಳಲ್ಲಿ ರೈತರು ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆ. ಈ ಕಸ ಹೆಚ್ಚಾಗಿರುವುದರಿಂದ ಹೊಲದಲ್ಲಿರುವ ಪೈರಿನಮೇಲೆ ಪರಿಣಾಮ ಬೀರುತ್ತಿದ್ದು, ರೈತರಿಗೆ ಬೆಳೆ ನಷ್ಟವಾಗುವ ಆತಂಕ ಕಾಡುತ್ತಿದೆ. ನಗರಸಭೆ ಸಿಬ್ಬಂದಿ ಕೆಲವೊಮ್ಮೆ ಬೆಂಕಿ ಹಚ್ಚಿ ಕಸವನ್ನು ಸುಡುತ್ತಾರೆ. ಇದುಸಹ ರೈತರಿಗೆ ತೆಲೆನೋವಾಗಿದೆ. ಗಾಳಿಗೆ ಹೊಲದಲ್ಲಿ ಬೆಳೆದ ಬೆಳೆಗೆ ಬೆಂಕಿ ಹತ್ತಿಕೊಂಡರೆ ಬೆಳೆ ನಾಶವಾಗುತ್ತೇನೊ ಎಂದು ಚಿಂತೆ ಕಾಡುತ್ತಿದೆ.
ಈ ಬಗ್ಗೆ ಮಾತನಾಡಿದ ಗ್ರಾಮದ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಮುಖ್ಯವಾಗಿ ಆ ಕಸದ ಜಾಗದ ಪಕ್ಕದಲ್ಲಿ ಜಾನುವಾರುಗಳಿಗೆ ಮೇವಿನ ಬಣವೆಗಳನ್ನು ರೈತರು ಹಾಕಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಆ ಕಸದ ತಿಪ್ಪೆ ಗುಂಡಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ನಂದಿಸಲು ಅಗ್ನಿಶಾಮಕ ದಳಕ್ಕೆ ಕೂಡಲೇ ಕರೆ ಮಾಡಿದರೆ ಅಗ್ನಿಶಾಮಕ ದಳದ ಸಿಬ್ಬಂದಿ ವಿಜಯನಗರ ಜಿಲ್ಲೆಗೆ ಒಂದೇ ಅಗ್ನಿಶಾಮಕ ಇರುವುದು. ಅಗ್ನಿಶಾಮಕ ವಾಹನ ಒಂದೇ ಇರುವುದು ಅದು ಬೇರೆ ಕಡೆ ಹೋಗಿದೆ. ನಾವು ಯಾವ ಕಡೆ ಹೋಗೋಣ, ಎಂದು ಅವರು ಪ್ರತಿ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಈ ಭಾಗದ ರೈತರು ಕಬ್ಬು ಬೆಳೆಗಾರರು ಹೆಚ್ಚಾಗಿ ಕಬ್ಬು ಬೆಳೆದುಕೊಂಡಿದ್ದಾರೆ. ಆ ಕಬ್ಬುಗಳನ್ನು ಕಡಿಯಲು ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ವಲಸೆ ಬಂದಿರುವ ಜನರು ಆ ಕಸದ ಪಕ್ಕದಲ್ಲಿಯೇ ತಾತ್ಕಾಲಿಕವಾದ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅದು ಕೂಡ ಪ್ಲಾಸ್ಟಿಕ್ ನಿಂದ ನಿರ್ಮಾಣವಾಗಿರುವಂತಹವು. ಆ ಪ್ಲಾಸ್ಟಿಕ್ಗೆ ಒಂದು ವೇಳೆ ಎರಡು ದಿನಗಳಿಂದ ಕಸಕ್ಕೆ ಬೆಂಕಿ ಹಚ್ಚಿದ್ದು ಆ ಮನೆಗಳಿಗೆ ತಗಲಿದ್ದರೆ ಇಡೀ ಆ ಜನರೆಲ್ಲಾ ಈ ಬೆಂಕಿಗೆ ಸುಟ್ಟು ಹೋಗುತ್ತಿದ್ದರು. ಇದನ್ನು ಯಾರು ಖಂಡಿಸಬೇಕು? ಕೂಡಲೇ ಆ ಬೆಂಕಿ ಹತ್ತಿದ್ದ ಸ್ಥಳದಲ್ಲಿ ಸ್ಥಳೀಯರೇ ಬೆಂಕಿ ನಂದಿಸಲು ಪ್ರಯತ್ನಿಸಿದರು ಎಂದು ತಿಳಿಸಿದರು.
ಹೊಸೂರು ಗ್ರಾಮದ ಮತ್ತೊಬ್ಬ ರೈತ ಖಾಜಾಸಾಬ್ ಮಾತನಾಡಿ, ಆ ಜಾಗ ಸಾರ್ವಜನಿಕ ಸ್ಥಳ. ಅಲ್ಲಿ ನಗರಸಭೆಯವರು ಕಸವನ್ನು ಹಾಕುವುದಕ್ಕೆ ಅನುಮತಿ ಇಲ್ಲ. ಆದರೂಕೂಡ ಅವರಿಗೆ ಎಷ್ಟು ಬಾರಿ ಹೇಳಿದರೂ ಪದೆ ಪದೇ ಆ ಸ್ಥಳದಲ್ಲಿ ಕಸವನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದ ನಾವು ಆ ಜಾಗದಲ್ಲಿ ಓಡಾಡುವುದಕ್ಕೆ ಆಗುತ್ತಿಲ್ಲ.
ಜೊತೆಗೆ ಆ ದಾರಿಯಲ್ಲಿ ನಮ್ಮ ಹೊಸೂರು ಗ್ರಾಮದ ಗ್ರಾಮ ದೇವತೆ ಹೊಸೂರಮ್ಮ ದೇವಿ ದೇವಸ್ಥಾನಕ್ಕೇ ಹೋಗುವ ರಸ್ತೆ ಇದೆ. ಆ ದೇವಸ್ಥಾನಕ್ಕೆ ಹಲವಾರು ಭಕ್ತರು ಇದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಬೇರೆ ಬೇರೆ ಊರಿನ ಜನರು ದೇವಸ್ಥಾನಕ್ಕೆ ಹೋಗುವ ದಾರಿ ನೋಡಿದರೆ ಇಲ್ಲಿಗೆ ಬರುವವರು ನಗರಸಭೆಗೆ ಶಾಪ ಹಾಕುತ್ತಾರೆ. ಆದರೆ, ತಿಪ್ಪೆಗುಂಡಿ ಕಸದಿಂದ ಅಲ್ಲಿ ಹೋಗುವುದಕ್ಕೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಇದನ್ನು ನಗರಸಭೆ ಅವರು ಎಚ್ಚೆತ್ತುಕೊಂಡು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥ ಖಲಂದರ್ ಮಾತನಾಡಿ, ಈ ಬಾರಿ ಬರಗಾಲ ಉಂಟಾಗಿ ರೈತರ ಗೋಳು ಕೇಳುವವರೇ ಇಲ್ಲ. ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಉತ್ಸವ ಕಾರ್ಯಕ್ರಮಗಳು ಮಾಡುತ್ತದೆ. ರೈತರಿಗೆ ಕೊಡುವುದಕ್ಕೆ ಆಗುವುದಿಲ್ಲ ಮತ್ತೆ ಭಾಷಣದಲ್ಲಿ ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊಲದ ಪಕ್ಕದಲ್ಲಿ ತಿಪ್ಪೆಗುಂಡಿ, ಕಸ ಹಾಕಿ ಹೋದರೆ ನಮಗೆ ತುಂಬಾ ನಷ್ಟ ವಾಗುತ್ತದೆ. ಊರಿನ ಜನಕ್ಕೆ ಅನಾರೋಗ್ಯದ ಸಮಸ್ಯೆ ಉಂಟಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದರು.
ಆದಷ್ಟು ಬೇಗ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಈ ಕಸದಿಂದ ರಸ್ತೆಗೆ ಮುಕ್ತಿ ನೀಡಿ, ಸುಗಮ ಸಂಚಾರ, ಆರೋಗ್ಯಕರ ವಾತಾವರಣ ನಿರ್ಮಿಸಬೇಕು ಎಂಬುದು ಹೊಸೂರು ಗ್ರಾಮಸ್ಥರ ಆಗ್ರಹ.