ವಿಶ್ವದಾದ್ಯಂತ ರೈಲ್ವೆ, ಗಾಜು, ಬಟ್ಟೆ, ಹಳಿ ನಿರ್ಮಾಣ, ಗಣಿ ಸೇರಿದಂತೆ ಪ್ರತಿಷ್ಠಿತ ಕೈಗಾರಿಕಾ ವಲಯಗಳ ಹಿಂದೆ ಅನೇಕ ಕಾರ್ಮಿಕರ ಶ್ರಮ, ತ್ಯಾಗವಿದೆ ಅಂತಹವರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ ಹೇಳಿದರು.
ವಿಜಯಪುರ ನಗರದ ಬುದ್ಧವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ವಿವಿಧ ಅಪಾಯಕಾರಿ ಕಾರ್ಖಾನೆಗಳಲ್ಲಿ ದಿನಕ್ಕೆ 14 ರಿಂದ 18 ಗಂಟೆಗಳವರೆಗೆ ಕಾರ್ಮಿಜನನಕರನ್ನು ದುಡಿಸಿಕೊಳ್ಳುವ ಮಾನವ ವಿರೋಧಿ ಪರಿಸ್ಥಿತಿ ಇತ್ತು. ಇದರ ವಿರುದ್ಧ ಅಮೆರಿಕ ದೇಶದ ಕಾರ್ಮಿಕ ಸಂಘಟನೆಗಳ ನಾಯಕರು ಸಮರ ಸಾರಿದರು. ದಿನಕ್ಕೆ 8 ಗಂಟೆಗಳ ಕೆಲಸದ ಬೇಡಿಕೆ ಇಟ್ಟರು. 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ, 8 ಗಂಟೆ ಮನರಂಜನೆ ಎಂಬ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನೂರಾರು ಜನ ನಾಯಕರು ತಮ್ಮ ಅಮೂಲ್ಯ ಪ್ರಾಣ ತ್ಯಾಗ ಮಾಡಿದರು. ಅವರನೆಲ್ಲ ನಾವಿಂದು ಸ್ಮರಿಸಬೇಕು” ಎಂದರು.
ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಬಿ ಭಗವಾನ ರೆಡ್ಡಿ ಮಾತನಾಡಿ, “ಇಂದಿನ ಬಂಡವಾಳಶಾಹಿಗಳು ಪುನಃ ಕಾರ್ಮಿಕ ವಿರೋಧಿ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿಯವರು ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಹೇಳ್ತಾ ಇರೋದು ಆಧುನಿಕ ಜೀತ ಪದ್ಧತಿಯನ್ನು ಸೂಚಿಸುತ್ತದೆ. ಇಂತಹ ಕಾರ್ಮಿಕ ವಿರೋಧಿ ನೀತಿ ಖಂಡನೀಯ. ಇದರ ವಿರುದ್ಧ ಪ್ರಬಲ ಚಳವಳಿ ಕಟ್ಟಲು ಯುವಕರು ಮುಂದೆ ಬರಬೇಕೆಂದು” ಕರೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಬಸವ ವೃತ್ತದಲ್ಲಿ ದವಿಪ ವತಿಯಿಂದ ʼಬಸವ ಜಯಂತಿʼ ಆಚರಣೆ
ಈ ವೇಳೆ ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಮಾದೇವಿ ಧರ್ಮಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ನಿಂಗಮ್ಮ ಮಠ, ಸಾವಿತ್ರಿ ನಾಗರತ್ತಿ, ಚಾಂದ ಶಶಿಕಲಾ ಮ್ಯಾಗೇರಿ, ಮಮದಾಪೂರ, ಆಲಮಟ್ಟಿ ಗಾರ್ಡನ್ ನೌಕರರು, ಬಿಸಿಯೂಟ-ವಸತಿ ನಿಲಯದ ಕಾರ್ಮಿಕರು ಇದ್ದರು.