ಭೀಮಸಿ ಕಲಾದಗಿಯವರು ಶೋಷಣೆಗೊಳಗಾದ ಕಾರ್ಮಿಕರ ಬದುಕು ಕಟ್ಟುವ ಕೆಲಸವನ್ನು ತಮ್ಮ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಅಂಥವರನ್ನು ಕಳೆದುಕೊಂಡ ವಿಜಯಪುರ ಜಿಲ್ಲೆ ನಷ್ಟ ಅನುಭವಿಸುವಂಥಾಗಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು ಬಸವರಾಜ ಹೇಳಿದರು.
ವಿಜಯಪುರ ನಗರದ ಎಪಿಎಂಸಿಯ ನೀಲಕಂಠೇಶ್ವರ ಕಾರ್ಯಾಲಯದಲ್ಲಿ ಭಾರತ ಕಮ್ಯುನಿಸ್ಟ್( ಮಾರ್ಕ್ಸ್ ವಾದಿ) ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ದಿ. ಭೀಮಸಿ ಕಲಾದಗಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾಮಾಜಿಕ ಕಳಕಳಿ ಮತ್ತು ಬದ್ಧತೆಯಿಂದ ಕಾರ್ಮಿಕ ಹೋರಾಟವನ್ನು ಕಟ್ಟಿದವರು. ಬೀಡಿ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರು ಹಾಗೂ ದೇವದಾಸಿ ಮಹಿಳೆಯರನ್ನೂ ಕೂಡ ಸಂಘಟಿಸಿ ಅವರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದವರು ಭೀಮಸಿ ಕಲಾದಗಿಯವರು. ಅವರ ಸಾಮಾಜಿಕ ಬದ್ಧತೆ, ನೈತಿಕ ಮೌಲ್ಯಗಳು ನಮಗೆ ಸ್ಪೂರ್ತಿದಾಯಕವಾಗಿವೆ. ಪ್ರಸ್ತುತ ಸಂದರ್ಭದಲ್ಲಿ ಅವರ ಸ್ಪೂರ್ತಿದಾಯಕ ಹೋರಾಟವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಣತೊಡುವುದೇ ಅವರಿಗೆ ಕೊಡುವ ನಿಜವಾದ ಗೌರವ” ಎಂದರು.

ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, “ಬರಿಗಾಲಿನ ಸರಳ ವ್ಯಕ್ತಿತ್ವ ಹೊಂದಿರುವ ಭೀಮಸಿ ಕಲಾದಿಗಿಯವರು ನನಗೆ ಸ್ಪೂರ್ತಿ. ನಾನು ಪಕ್ಷಕ್ಕೆ ಬಂದಾಗ 23 ವರ್ಷ. ರಾಜ್ಯದ ತುಂಬಾ ಅಂಗನವಾಡಿ ನೌಕರರ ಸಂಘಟನೆಯನ್ನು ಕಟ್ಟಲು ನನಗೆ ಪ್ರೇರೇಪಿಸಿ ಮಾರ್ಗದರ್ಶನ ಮಾಡಿದವರು ಅವರು. ಭೀಮಸಿ ಕಲಾದಿಗಿ ಅವರ ಸಹಪಾಠಿಗಳಾದ ಉಗ್ರಪ್ಪ, ಎನ್ ಕೆ ಉಪಾಧ್ಯ, ಹರಕೇರಿ ಒಟ್ಟಾಗಿ ಸೇರಿ ವಿಜಯಪುರದಲ್ಲಿ ನಗರಸಭೆ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಬಲಿಷ್ಠ ಹೋರಾಟ ಮಾಡಿದ್ದಾರೆ” ಎಂದು ಸ್ಮರಿಸಿಕೊಂಡರು.

ಹಿರಿಯ ಪತ್ರಕರ್ತ ಅನಿಲ ಹೊಸಮನಿ ಮಾತನಾಡಿ, “ಮಾನವೀಯ ಹೃದಯವಂತ ಮನುಷ್ಯ ಭೀಮಸಿ ಕಲಾದಗಿ ಅಂಥವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ” ಎಂದು ವಿಷಾದ ವ್ಯಕ್ತಪಡಿಸಿದರು.
“ವಿಜಯಪುರ ನಾಗರಿಕರ ವೇದಿಕೆ ಮತ್ತು ಗೆಳೆಯರ ಬಳಗದಿಂದ ಭೀಮಸಿ ಕಲಾದಿಗಿಯವರ ಹೋರಾಟದ ಬದುಕಿನ ಚಿತ್ರಣ ಕೊಡುವ ಪುಸ್ತಕ ತರಲು ನಿರ್ಧರಿಸಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕುಸುಗಲ್ ಸರ್ಕಾರಿ ಶಾಲೆಯೆಂದರೆ ಅಧಿಕಾರಿಗಳಿಗೆ ತಾತ್ಸಾರ: ಗ್ರಾಮಸ್ಥರ ಆಕ್ರೋಶ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ದ ರಾಜ್ಯ ಉಪಾಧ್ಯಕ್ಷ ಬಿ ಎಸ್ ಸೊಪ್ಪಿನ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಅಧ್ಯಕ್ಷ ಎಂ ಬಿ ನಾಡಗೌಡ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಶಾಂತ ಘಂಟಿ, ಬಿ ಡಿ ಪಾಟಿಲ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಇಳಗೆರಿ, ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ ಭಗವಾನ್ ರೆಡ್ಡಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ರಜಪೂತ, ಸುವರ್ಣ ಬಡೀಗೆರ, ಭಾರತಿ ವಾಲಿ, ಸರಸ್ವತಿ ಮಠ, ಡಿವೈಎಫ್ಐ ರಮೇಶ ತಳವಾರ ಹಾಗೂ ಜಿಲ್ಲೆಯ ಪ್ರಗತಿಪರ ಸಂಘಟನೆಯ ಮುಖಂಡರು, ಸಾಹಿತಿಗಳು ಸೇರಿದಂತೆ ಇತರರು ಇದ್ದರು.