ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಕಂತು ತುಂಬಿದ್ದರೂ ಫಸಲ ಬೀಮಾ ಯೋಜನೆಯಡಿ ಪರಿಹಾರ ನೀಡಿಲ್ಲ ಎಂದು ವಿಜಯಪುರ ರೈತರು ವಿಮಾ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ರೈತರು ವಿಮಾ ಕಂಪನಿ ವಿರುದ್ದ ಧಿಕ್ಕಾರ ಕೂಗಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಇಂದು ಮನವಿ ಸಲ್ಲಿಸಿದರು.
“ಇಂಗಳೇಶ್ವರ ಗ್ರಾಮದ ರೈತರು ಫಸಲ್ ಬೀಮಾ ಯೋಜನೆಯಡಿಯಲ್ಲಿ ಪ್ರತಿ ಎಕರೆಗೆ ಸಾವಿರಾರು ರೂಪಾಯಿಯಂತೆ ವಿಮಾ ಕಂತು ಕಟ್ಟಿದರೂ ಕಳೆದ 5 ವರ್ಷಗಳಿಂದ ನಯಾ ಪೈಸೆ ಪರಿಹಾರ ಬರದ ಕಾರಣ ಇಂಗಳೇಶ್ವರ ಗ್ರಾಮದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿಮಾ ಕಂಪನಿ ಒಂದು ರೀತಿ ಮಟ್ಕಾ ಅಡ್ಡೆ ಆಡುವ ಅಡ್ಡೆಯಾಗಿ ಪರಿಣಮಿಸಿದೆ. ಇಂಗಳೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರೆಬಿನಾಳ ಗ್ರಾಮದ ರೈತರಿಗೆ ತೊಗರಿ ಪರಿಹಾರ ಬಂದಿದೆ. ಆದರೆ ಇಂಗಳೇಶ್ವರಕ್ಕೆ ಮಾತ್ರ ಪರಿಹಾರ ಹಣ ಬಿಡುಗಡೆಗೊಳಿಸದೆ ಇರುವುದು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸ ರಾಜ್ಯ ವಿಮಾ ಕಂಪನಿ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ” ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ದೂರಿದರು.
“ಈ ರೀತಿ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಸರ್ಕಾರದ ಹಿಡಿತದಲ್ಲಿರಬೇಕಾದ ವಿಮಾ ಕಂಪನಿಯೇ, ಸರ್ಕಾರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎನ್ನುವಂತಾಗಿದೆ. ವಿಮಾ ಕಂಪನಿಯವರು ರೈತರಿಂದ ವಿಮೆ ಕಂತು ಕಟ್ಟಿಸಿಕೊಂಡು ಪರಿಹಾರ ಕೊಡದಿದ್ದರೆ ವಿಮಾ ಕಂಪನಿ ಏತಕ್ಕೆ ಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಶೀಘ್ರದಲ್ಲಿ ಇಂಗಳೇಶ್ವರ ಗ್ರಾಮದ ರೈತರಿಗೆ ತೊಗರಿ ಪರಿಹಾರ ಕೊಡದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರ | ಯುಗಾದಿ ಸಂಭ್ರಮದಲ್ಲಿದ್ದ ಮೂವರು ಬಾಲಕರು ನೀರುಪಾಲು
ಈ ಸಂದರ್ಭದಲ್ಲಿ ರುದ್ರಯ್ಯ ಹಿರೇಮಠ, ನಿಂಗಯ್ಯ ಆಚನೂರ, ಈರಪ್ಪ ಕಡಗೋಲ, ಕಲ್ಲಪ್ಪ ಕಾಳಗಿ, ಶಿವಾನಂದ ಬಾಗೇವಾಡಿ, ಸಿದ್ದಪ್ಪ ಶೇಖಣ್ಣವರ, ರೇವಣಸಿದ್ದ ಶೇಖಣ್ಣವರ, ಸಿದ್ದಪ್ಪ ಜಕ್ಕನ್ನವರ, ದುಂಡಪ್ಪ ಹದಿಮೂರ, ಸಿದ್ದಿಂಗಪ್ಪ ನಂದಿ, ರಾವಯ್ಯ ಹಿರೇಮಠ, ಪರಪ್ಪ ಬಾಗೇವಾಡಿ, ಭೀಮಪ್ಪ ಬಾಗೇವಾಡಿ, ರುದ್ರಯ್ಯ ಹಿರೇಮಠ, ಸಿದ್ದಪ್ಪ ಪತ್ತಾರ, ಶ್ರೀಶೈಲ ಸಜ್ಜನ, ಮಲ್ಲಿಕಾರ್ಜುನ ಸಜ್ಜನ, ಸಂಗಪ್ಪ ಚೌಕಿಮಠ, ಶರಣಪ್ಪ ಉಕ್ಕಲಿ, ಕಲ್ಯಾಣಿ ಕಾಳಗಿ ಸೇರಿದಂತೆ ಇತರರು ಇದ್ದರು.