ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ 14ನೇ ʼಸಾಂಸ್ಕೃತಿಕ ಜನೋತ್ಸವʼದ ಅಂಗವಾಗಿ ನಗರದ ಕಂದಗಲ್ ರಂಗ ಮಂದಿರದಲ್ಲಿ ಬಿ.ಸುರೇಶ್ ನಿರ್ದೇಶನದ ‘ದೇವರ ನಾಡಲ್ಲಿ’ ಚಿತ್ರ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಿತ್ರ ವೀಕ್ಷಿಸಿದ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್, “ಸಮಾಜದಲ್ಲಿ ನಡೆಯುತ್ತಿರುವ ಕೋಮುವಾದ ಪರಿಣಾಮ ಬೀರುವುದು ಬಡ ಜನರ ಮೇಲೆಯೇ ಹೊರತು ಶ್ರೀಮಂತ ವ್ಯಕ್ತಿಗಳ ಮೇಲಲ್ಲ. ಪ್ರಗತಿಪರ ಧೋರಣೆಯನ್ನು, ಕೋಮು ಸೌಹಾರ್ದತೆಯ ಬದುಕನ್ನು ನಡೆಸಲು ಪೂರಕವಾಗುವಂತಹ ಸಂದೇಶವನ್ನು ಈ ಸಿನಿಮಾ ಮೂಲಕ ನಿರ್ದೇಶಕರು ತೋರಿಸಿದ್ದಾರೆ” ಎಂದು ಹೇಳಿದರು.
ಆವಿಷ್ಕಾರ ಸಂಘಟನೆಯ ಭರತ್ ಕುಮಾರ್ ಹೆಚ್ ಟಿ ಮಾತನಾಡಿ, “ಸಾಮಾನ್ಯವಾಗಿ ಒಂದು ಕಲೆಯನ್ನ ಅಭಿವ್ಯಕ್ತ ಪಡಿಸುವಾಗ ಕಲಾವಿದ ಅಥವಾ ನಿರ್ದೇಶಕನಾಗಿರಲಿ ತಮ್ಮದೇ ಆದ ವಿಧಾನವನ್ನು ಅನುಸರಿಸಿಕೊಂಡು ಸಂದೇಶವನ್ನು ಕೊಡುತ್ತಾರೆ. ಸಿನಿಮಾದಲ್ಲಿರುವ ಉತ್ತಮವಾದ ಸಂದೇಶವೇನೆಂದರೆ, ಯಾವುದೇ ದೇಶದಲ್ಲಾಗಿರಲಿ, ಯಾವುದೇ ಸಮಾಜದಲ್ಲಾಗಿರಲಿ ಸಮಾಜಘಾತುಕ ಚಟುವಟಿಕೆಗಳಿಗೆ ಬಲಿಪಶುವಾಗುತ್ತಿರುವವರು ಯಾರೋ ಶ್ರೀಮಂತ, ಎಂಎಲ್ಎ, ಎಂಪಿ ಮಕ್ಕಳಲ್ಲ. ಬದಲಾಗಿ ಜನಸಾಮಾನ್ಯರ ಮಕ್ಕಳು ಬಲಿಯಾಗುತ್ತಾರೆನ್ನುವ ಸನ್ನಿವೇಶಗಳು ಸಿನಿಮಾದಲ್ಲಿವೆ. ಈ ಸಿನಿಮಾದಲ್ಲಿ ಮುಖ್ಯವಾಗಿ ನಾಯಕಿ ಕೊನೆಯಲ್ಲಿ ನ್ಯಾಯದ ಪರವಾಗಿ ನಿಲ್ಲುವ ಸನ್ನಿವೇಶದಿಂದ ನಾವು ಸಹ ಉನ್ನತ ಮೌಲ್ಯ, ಉನ್ನತ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಸಂದೇಶ ಬಹಳ ಸುಂದರವಾಗಿ ಬಂದಿದೆ.” ಎಂದರು.
ಇದನ್ನೂ ಓದಿ: ವಿಜಯಪುರ | ಹರೀಶ್ ಡಿ.ಕೆ. ಅವರಿಗೆ ಪಿಎಚ್.ಡಿ ಪದವಿ
ಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ, ಎಐಎಂಎಸ್ಎಸ್ ಜಂಟಿ ಜಿಲ್ಲಾ ಕಾರ್ಯದರ್ಶಿ ಶಿವರಂಜನಿ ಕೆ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.