ಸಂಗನಾಳ ದಲಿತ ಯುವಕನ ಹತ್ಯೆ ಹಾಗೂ ಯಾದಗಿರಿ ಪಿಎಸ್ಐ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಮುಖಂಡರು, ಕಾರ್ಯಕರ್ತರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಹಶೀಲ್ದಾರ್ ವೈ ಎಸ್ ಸೋಮನಕಟ್ಟಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಗುರುರಾಜ ಗುಡಿಮನಿ ಮಾತನಾಡಿ, “ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಬಸಪ್ಪ ಬಂಡಿಹಾಳ ಅವರು ಅದೇ ಗ್ರಾಮದ ಮುದುಕಪ್ಪ ಹಡಪದ ಅವರ ಕಟಿಂಗ್ ಸಲೂನ್ಗೆ ಹೋದ ಸಂದರ್ಭದಲ್ಲಿ ಅಂಗಡಿ ಮಾಲೀಕ ಮುದುಕಪ್ಪ ಅವರು ಜಾತಿ ನಿಂದನೆ ಮಾಡುವ ಜತೆಗೆ, ʼನೀನು ಇಲ್ಲಿಗೆ ಬರಬೇಡ, ನಿನಗೆ ಕ್ಷೌರ ಮಾಡುವುದಿಲ್ಲʼವೆಂದು ಹೇಳಿದಾಗ ಇಬ್ಬರಲ್ಲೂ ವಾಗ್ವಾದ ನಡೆದಿದೆ. ಈ ವೇಳೆ ಕಟಿಂಗ್ ಮಾಡುವ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ಶೋಚನೀಯವಾಗಿದೆ” ಎಂದು ತೀವ್ರವಾಗಿ ಖಂಡಿಸಿದರು.
ಯಾದಗಿರಿಯ ಪಿಎಸ್ಐ ಪರಶುರಾಮ ಚಲವಾದಿ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಶಾಸಕ ಚನ್ನಾರೆಡ್ಡಿ ಪಾಟೀಲ ಮತ್ತು ಅವರ ಪುತ್ರ ಪಂಪನಗೌಡ ಅವರು ₹40 ಲಕ್ಷ ಲಂಚದ ಬೇಡಿಕೆ ಇಟ್ಟಿರುವುದರಿಂದ ಕಿರುಕುಳದಿಂದಾಗಿ ಮಾನಸಿಕವಾಗಿ ನೊಂದು ಪಿಎಸ್ಐ ಸಾವನ್ನಪ್ಪಿರುವುದು ಘೋರ ದುರಂತ. ಇವರ ಪತ್ನಿ ದೂರು ನೀಡಿದರೂ ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸ್ ಇಲಾಖೆಯು ಕೂಡಲೇ ಅವರನ್ನು ಬಂಧಿಸಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣವನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅರಣ್ಯ ಭೂಮಿ ಅತಿಕ್ರಮಣ ಆರೋಪ; ವಿಷದ ಬಾಟಲಿ ಹಿಡಿದು ರೈತ ಮಹಿಳೆಯರ ಪ್ರತಿಭಟನೆ
“ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಭಯ ಭೀತರಾಗಿದ್ದಾರೆ. ವರ್ಗಾವಣೆಯ ಬೇಡಿಕೆ ಕಿರುಕುಳಕ್ಕೆ ಕಡಿವಾಣ ಹಾಕಬೇಕು. ಎರಡೂ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಯಮನೂರಪ್ಪ ಬಂಡಿಹಾಳ ಕುಟುಂಬಕ್ಕೆ ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರು ಮಾಡಬೇಕು. ಅವರ ಕುಟುಂಬಕ್ಕೆ ಡಾ. ಅಂಬೇಡ್ಕರ್ ನಿಗಮದಿಂದ ಸಾಲ ಸೌಲಭ್ಯ ನೀಡಬೇಕು. ಈ ಘಟನೆಯಲ್ಲಿನ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ದಲಿತ ಬಾಂಧವರಿಗೆ ಹೋಟೆಲ್ ಹಾಗೂ ಕಟಿಂಗ್ ಸಲೂನ್ಗಳಲ್ಲಿ ಮುಕ್ತ ಪ್ರವೇಶ ನೀಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಮನೂರಿ ಚಲವಾದಿ, ಚಂದ್ರಶೇಖರ ನಾಲತವಾಡ, ಬಸವರಾಜ ದೊಡ್ಡಮನಿ, ಬಾಬುನಾಲತವಾಡ, ಗಂಗಾಧರ ಆರೇರ, ಚಂದ್ರಶೇಖರ ನಾಡಗೇರಿ ಸೇರಿದಂತೆ ಇತರರು ಇದ್ದರು.