ವೈವಿಧ್ಯತೆಯ ಮಧ್ಯೆ ಸಾಮರಸ್ಯದ ಬದುಕಿನ ಮುನ್ನೋಟವನ್ನು ಪ್ರತಿನಿಧಿಸುವ ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ನಮ್ಮಯ ದೈನಂದಿನ ಬದುಕಿನ ನಿಜವಾಸ್ತವವನ್ನು ತೋರಿಸುತ್ತದೆ ಎಂದು ಸಿನೆಮಾದ ನಿರ್ದೇಶಕ ಶಶಾಂಕ ಸೋಗಲ್ ಅಭಿಪ್ರಾಯಪಟ್ಟರು.
ಆವಿಷ್ಕಾರ, ಎಐಡಿಎಸ್ಒ, ಎಐಡಿವೈಒ ಹಾಗೂ ಎಐಎಂಎಸ್ಎಸ್ ಸಂಘಟನೆಗಳ ನೇತೃತ್ವದಲ್ಲಿ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ‘ವಿಜಯಪುರದ 13ನೇ ಸಾಂಸ್ಕೃತಿಕ ಜನೋತ್ಸವ’ದ ಎರಡನೇ ದಿನ ಡೇರ್ ಡೆವಿಲ್ ಮುಸ್ತಾಫಾ ಸಿನೆಮಾ ಪ್ರದರ್ಶನದ ನಂತರದ ಸಂವಾದದಲ್ಲಿ ಮಾತನಾಡಿದರು.
“ಪೂರ್ಣಚಂದ್ರ ತೇಜಸ್ವಿಯವರ ಆಶಯ ಈಗಲೂ ಪ್ರಸ್ತುತವಾಗಿದೆ. ನಮ್ಮ ಸಿನಿಮಾ ಕೇವಲ ಮನರಂಜನೆಗಲ್ಲದೆ ಜನರಿಗೆ ಒಂದು ಸಂದೇಶ ತಲುಪಿಸುವ ಉದ್ದೇಶ ಹೊಂದಿದೆ. ಡೇರ್ಡೆವಿಲ್ ಮುಸ್ತಫಾ ಕಥೆ ನನ್ನಲ್ಲಿರುವ ಪೂರ್ವಾಗ್ರಹ ಪೀಡಿತವನ್ನು ಹೊಡೆದು ಹಾಕಿತು. ಹಾಗೆಯೇ ಜನರಲ್ಲಿರುವ ಪೂವಾಗ್ರಹ ಪೀಡಿತವನ್ನು ಹೊಡೆದೋಡಿಸಿ ಜನರು ಪರಸ್ಪರ ಸಾಮರಸ್ಯದಿಂದ ಬದುಕುವ ಸಂದೇಶ ನೀಡಲು ಈ ಸಿನಿಮಾ ತೆಗೆಲಾಯಿತು. ನನ್ನ ಸಿನೆಮಾಗಳಲ್ಲಿ ಹೀರೋ, ವಿಲನ್ಗಳು ಇರುವುದಿಲ್ಲ. ಜನರಿಗೆ ವಿಚಾರಗಳು ತಲುಪಿಸುವ ನಿಟ್ಟಿನಲ್ಲಿ ನನ್ನ ಸಿನಿಮಾಗಳು ಇರುತ್ತವೆ” ಎಂದರು.
“ಸಿನಿಮಾಗಳು ಜನತೆಯ ನೈಜ ಸಮಸ್ಯೆಗಳನ್ನು ಚಿತ್ರಿಸುವುದರ ಜತೆಗೆ ಸಮಾಜದಲ್ಲಿ ಹೊಸ ಬದಲಾವಣೆಯನ್ನು ನಿರೀಕ್ಷಿಸುವಂತಿರಬೇಕು. ಈ ಸಿನೆಮಾ ಅಂತಹ ಸೌಹಾರ್ದತೆಯನ್ನು ಜಾಗೃತಗೊಳಿಸುವ ಕೆಲಸ ಮಾಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೇಂದ್ರಕ್ಕೆ ಇಚ್ಛಾಶಕ್ತಿ ಇದ್ದಿದ್ದರೆ ಶ್ರೀಗಳಿಗೆ ʼಭಾರತ ರತ್ನʼ ದೊರಕುತಿತ್ತು: ಗೃಹ ಸಚಿವ ಪರಮೇಶ್ವರ್
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಕೇಂದ್ರ ಬಿಂದುವಾದ ನಾಯಕ ನಟ ಶಿಶಿರ ಬೈಕಾಡಿ ಮಾತನಾಡಿ, “ನಮ್ಮೆಲ್ಲ ಪೂರ್ವಗ್ರಹಗಳನ್ನು ಒಂದೆಡೆ ಇಟ್ಟು ಮುಕ್ತ ಮನಸ್ಸಿನಿಂದ ಸಿನಿಮಾವನ್ನು ವೀಕ್ಷಿಸಬೇಕು. ಸಿನಿಮಾಗಳು ಕೇವಲ ಮನರಂಜನೆಯ ಸಾಧನಗಳಾಗದೇ ನಮ್ಮನ್ನು ಚಿಂತನೆಗೆ ಹಚ್ಚುವಂತಿರಬೇಕು. ಜತೆಗೆ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುವಂತಿರಬೇಕು” ಎಂದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಎಐಎಂಎಸ್ಎಸ್ ಜಿಲ್ಲಾ ಚಾಲಕಿ ಶಿವಬಾಳಮ್ಮ ಕೊಂಡಗೂಳಿ ಇದ್ದರು.
