ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಜೂನ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಯುವಜನರ ಆಗ್ರಹ ದಿನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದರು.
ವಿಜಯಪುರ ನಗರದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ, “ಎಐಡಿವೈಒ ಸಂಘಟನೆಯು ಕೊಲ್ಕತ್ತಾದಲ್ಲಿ 1966 ಜೂನ್ 26ರಂದು ಸ್ಥಾಪನೆಯಾಗಿ 59ವಸಂತಗಳನ್ನು ಪೂರೈಸಿ 60ನೇ ವರ್ಷಕ್ಕೆ ಕಾಲಿಡುತ್ತಿದೆ” ಎಂದರು.
“ಯುವಜನರ ಸಮಸ್ಯೆಗಳ ವಿರುದ್ಧ ಹೊರಟಾಗಳನ್ನು ರೂಪಿಸುತ್ತ ಇಂದು 24 ರಾಜ್ಯಗಳಲ್ಲಿ ಸಂಘಟನೆ ವಿಸ್ತಾರಗೊಂಡಿದೆ. ನಮ್ಮ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಘಟನೆ ಸಕ್ರಿಯವಾಗಿದೆ. 60ನೇ ವರ್ಷದ ಸಂದರ್ಭದಲ್ಲಿ ಯುವಜನರ ಹಲವು ಗಂಭೀರ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ರಾಜ್ಯದ ಯುವಜನರ ಧ್ವನಿಯಾಗಿ ಈ ಯುವಜನ ಆಗ್ರಹ ದಿನವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
“ಇಂದು ದೇಶದಲ್ಲಿ ನಿರುದ್ಯೋಗ ಯುವಪಡೆಯೇ ಸೃಷ್ಟಿಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವುದೇ ಪಕ್ಷಗಳು ಯುವ ಶಕ್ತಿಯನ್ನು ಸೂಕ್ತ ರಿತಿಯಲ್ಲಿ ಬಳಸಿಕೊಂಡಿಲ್ಲ. ಬದಲಿಗೆ ತಮ್ಮ ವೋಟ್ ಬ್ಯಾಂಕ್ ಮಾಡಿಕೊಳ್ಳಲು ಪ್ರಯತ್ನಿಸಿವೆ” ಎಂದು ಆರೋಪಿಸಿದರು.
“ರಾಜ್ಯದ 44 ಇಲಾಖೆಗಳಲ್ಲಿ 2.75 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತು ಪ್ರಯತ್ನ ನಡೆಯುತ್ತಿಲ್ಲ. ಕೆಲವು ಕುಂಟು ನೆಪಗಳನ್ನು ಹೇಳುತ್ತ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ಇನ್ನೊಂದೆಡೆ ಕೆಪಿಎಸ್ಸಿ ಅಧ್ಯಕ್ಷರ-ಸದಸ್ಯರ ಒಳಜಗಳ, ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಅರ್ಜಿದಾರರಿಗೆ ಬೇಸರ ತರಿಸಿದೆ” ಎಂದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ಪಟ್ಟಣ-ಜಾರಕಿಹೊಳಿ ರಾಜಕೀಯ ಸಂಘರ್ಷ: ಕಿಡಿ ಹೊತ್ತಿಸಿತೇ ಅಧಿಕಾರಿಗಳ ನೇಮಕಾತಿ?
“ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಎಸ್ಎಸ್ಎಲ್ಸಿ ಫಲಿತಾಂಶ ಅಧೋಗತಿಗೆ ಇಳಿದಿದೆ. ಕೇವಲ ಶಿಕ್ಷಕರ ಮೇಲೆ ಗೂಬೆ ಕೂರಿಸುತ್ತ, ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಕ ಮಾಡದೆ ಇರುವುದು ಇಂತಹ ಕೆಟ್ಟ ಫಲಿತಾಂಶಕ್ಕೆ ಕಾರಣವಾಗಿದೆ” ಎಂದು ಹೇಳಿದರು.
“ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇರುವುದು, ಶಾಲೆಗಳಲ್ಲಿ ಆ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಅಡಚಣೆಯಾಗಿದೆ” ಎಂದು ದೂರಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ, ಶ್ರೀಕಾಂತ ಕೊಂಡಗೊಳಿ ಇದ್ದರು.