ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದು ಸರಕಾರಿ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ಸರಕಾರ ಒದಗಿಸಿ ಕೊಡುತ್ತಿದ್ದರೂ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಗಮನ ಹರಿಸದಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಬಂಗಾರಗುಂಡಿ – ಕಪನೂರು ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು ಮಕ್ಕಳು ಸೇರಿದಂತೆ ಶಿಕ್ಷಕರು ನಿತ್ಯವೂ ಜೀವ ಭಯದಲ್ಲಿ ದಿನದೂಡುವಂತಾಗಿದೆ.
ಪುನರ್ ವಸತಿ ಕೇಂದ್ರವಾದ ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಹುತೇಕ ಶಾಲಾ ಕೋಣೆಗಳು ಹಳೆಯದಾಗಿದ್ದು ಯಾವ ಸಮಯದಲ್ಲೂ ಕುಸಿಯಬಹುದು ಎನ್ನುವ ಭಯ ಎಲ್ಲರನ್ನೂ ಕಾಡುತ್ತಿದೆ.
ಶಾಲೆಯ ಹಳೆ ಕಟ್ಟಡದ ಏಳು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಮಳೆ ನೀರು ಹಿಂಗಿ ಗೋಡೆಗಳು ಹಾಗೂ ಚಾವಣಿಯ ಪದರ ಕಳಿಚಿ ಬೀಳುತ್ತಿದೆ. ಮಳೆ ಬಂದರಂತೂ ಎಲ್ಲ ತರಗತಿಗಳ ವಿದ್ಯಾರ್ಥಿಗಳನ್ನು ತರಗತಿ ನೋಡದೆ ಒಂದರಿಂದ ಮೂರನೇ ವರ್ಗದ ಮಕ್ಕಳನ್ನು ಒಂದೆಡೆ, ನಾಲ್ಕು 5ನೇ ತರಗತಿಯ ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ ಕೂರಿಸಿ, ಆರು ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಒಂದೆಡೆ ಸೇರಿಸಿ ಪಾಠ ಹೇಳಬೇಕಾದ ಸ್ಥಿತಿ ಇದೆ. ಕೂಡಲೇ ಹೊಸ ಕೋಣೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸ್ಥಳೀಯ ಗ್ರಾಮಸ್ಥರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ, ಆದರೆ, ಕೂತು ಪಾಠ ಕೇಳಲು ಶುದ್ಧ ಗಾಳಿ ಬೆಳಕು ಇರುವ ಸುಸ್ಥಿತಿಯ ಕೊಠಡಿಗಳಿಲ್ಲ. ಅಪಾಯಕಾರಿಯಾಗಿರುವ ಕೊಠಡಿಗಳತ್ತ ಮಕ್ಕಳು ಹೋಗದಂತೆ ತಡೆಯುವುದೇ ಶಿಕ್ಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಯದ ವಾತಾವರಣದಲ್ಲಿ ನಿತ್ಯ ಶಿಕ್ಷಕರು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಬಂಗಾರ ಗುಂಡಿ ಹಾಗೂ ಕಪನೂರ ಎರಡು ಗ್ರಾಮಗಳ ವ್ಯಾಪ್ತಿಯಲ್ಲಿರುವ ಈ ಶಾಲೆಯಲ್ಲಿ ಪ್ರಸಕ್ತ ವರ್ಷ 98 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಒಟ್ಟು 14 ಕೋಣೆಗಳಲ್ಲಿ ಏಳು ಕೋಣೆ ಸಂಪೂರ್ಣ ಶಿಥಿಲಗೊಂಡಿದೆ. ಉಳಿದ ನಾಲ್ಕು ಕೋಣೆಗಳ ಮೇಲ್ಛಾವಣಿ ಮಳಿಗೆಯು ಸೋರುತ್ತಿವೆ.
ಮಳೆ ಬಂದರೆ ಐದು ಕೊಠಡಿಗಳ ಗೋಡೆಗಳು ಸಂಪೂರ್ಣ ಒದ್ದೆಯಾಗಿ ನೀರಾಗುತ್ತವೆ. ಈ ಹಳೆಯ ಕೋಣೆಗಳನ್ನು ನೆಲಸಮಗೊಳಿಸಿ, ಉಳಿದವುಗಳನ್ನು ರಿಪೇರಿ ಮಾಡಲು ಕೋರಿ ಈ ಹಿಂದಿನ ಎಸ್ಡಿಎಂಸಿ ಸದಸ್ಯರು ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ವ್ಯಾಪಕ ಚರ್ಚೆಗೆ ಕಾರಣವಾದ ಕಾಂಗ್ರೆಸ್ನ ಮಾಜಿ ಸಂಸದ ಜನಾರ್ದನ ಪೂಜಾರಿ ಹೇಳಿಕೆ
ಶಿಥಿಲಗೊಂಡ ಕಟ್ಟಡದ ಸಮೀಪಕ್ಕೆ ವಿದ್ಯಾರ್ಥಿಗಳು ಹೋಗದಂತೆ ಎಚ್ಚರಿಕೆ ನೀಡಿದ್ದರೂ, ವಿಶ್ರಾಂತಿ ಸಮಯದಲ್ಲಿ ಹಾಗೂ ಬಿಡುವಿನ ವೇಳೆ ಹಾಳಾದ ಕೊಠಡಿಗಳ ಅಡಿಯಲ್ಲಿ ಮಕ್ಕಳ ಆಟವಾಡುತ್ತಾರೆ. ಹೀಗಾಗಿ ಶಿಕ್ಷಕರಿಗೆ ಇದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈಗಂತೂ ಜೋರು ಗಾಳಿ ಮಳೆ ಬರುತ್ತಿದ್ದು ಯಾವ ಕ್ಷಣದಲ್ಲಿ ಶಾಲೆ ಮೇಲ್ಛಾವಣಿಯ ಪದರ ಕುಸಿದು ಮಕ್ಕಳ ತಲೆಯ ಮೇಲೆ ಬೀಳುವುದು ಎಂಬ ಆತಂಕದಲ್ಲಿ ಪಾಲಕರು ಮತ್ತು ಶಿಕ್ಷಕರು ಕಾಲ ಕಳೆಯುತ್ತಿದ್ದಾರೆ. ಶಿಥಿಲಗೊಂಡ ಕೋಣೆಗಳನ್ನು ನೆಲಸಮಗೊಳಿಸಿ, ನೂತನ ಕೋಣೆಗಳನ್ನು ನಿರ್ಮಿಸಬೇಕು ಎಂದು ಸ್ಥಳೀಯರು ಸೇರಿದಂತೆ ಮಕ್ಕಳ ಪೋಷಕರ ಆಗ್ರಹವಾಗಿದೆ.
ಶಾಲೆ ದುಃಸ್ಥಿತಿ ಬಗ್ಗೆ ಕಳೆದ ಮೂರು ವರ್ಷಗಳಿಂದಲೂ ಮಕ್ಕಳು ಮತ್ತು ಶಿಕ್ಷಕರು, ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯುತ್ತಲೇ ಇದ್ದಾರೆ. ಆದರೆ, ಇವರಲ್ಲಿ ಒಬ್ಬರಿಗೂ ಕಿವಿ ಕೇಳಿಸುತ್ತಿಲ್ಲ ಕಣ್ಣು ಕಾಣಿಸುತ್ತಿಲ್ಲ ಎಂಬುದು ಶಾಲೆಯ ದುಸ್ಥಿತಿ ನೋಡಿದರೆ ತಿಳಿಯುತ್ತದೆ ಎಂಬುದು ಈ ಭಾಗದ ಜನರ ವಾದ.

ಈ ಬಗ್ಗೆ ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಬಿ ಎಸ್ ಸಾವಳಗಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಇನ್ನೂ ಅನುದಾನ ಬಂದಿಲ್ಲ. ತಾಲೂಕಿನಲ್ಲಿ ಸಾಕಷ್ಟು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಸದ್ಯ ಕೊಠಡಿಗಳ ದುರಸ್ತಿಗೆ ಹಣ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದ್ದು, ಶಾಲಾ ಕೊಠಡಿಗಳು ದುರಸ್ತಿಯಾಗಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯ ದಲಿತ ಮುಖಂಡ ಗುಂಡಪ್ಪ ಛಲವಾದಿ ಮಾತನಾಡಿ, ಶಾಲೆಯ ಹಳೆಯ ಕೊಠಡಿಗಳನ್ನು ನೆಲಸಮ ಮಾಡಬೇಕು. ಶುದ್ಧ ಗಾಳಿ ಬೆಳಕು ಇರುವ ಹೊಸ ಕೋಣೆಗಳು ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಆಗ್ರಹಿಸಿದರು.
ಗಾಳೆಪ್ಪ ಪೂಜಾರಿ ಮಾತನಾಡಿ, ಶಿಕ್ಷಕರು ಉತ್ಸಾಹದಿಂದ ಪಾಠ ಮಾಡುತ್ತಿದ್ದಾರೆ. ಆದರೆ ಮಳೆ ಬಂದರೆ ಕೋಣೆಗಳು ಸೋರಿ ಕಲಿಕೆಗೆ ಅಡ್ಡಿಯಾಗುತ್ತಿದೆ. ಈ ದಿನ ಡಾಟ್ ಕಾಮ್ನ ವರದಿಯನ್ನಾನ್ನಾದರೂ ನೋಡಿ, ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಿ ಶಾಲೆಯ ಕೊಠಡಿಗಳ ಸಮಸ್ಯೆ ಬಗೆಹರಿಸುವವರೇ ಎಂದು ಕಾದು ನೋಡುತ್ತೇವೆ” ಎಂದು ತಿಳಿಸಿದರು.
