ನಮ್ಮ ವಾರ್ಡ್ನಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ನನ್ನ ವಾರ್ಡ್ನಲ್ಲಿ ಡಾಕ್ಟರ್, ಇಂಜಿನಿಯರ್ಗಳು ನನಗೆ ಇಂಗ್ಲಿಷ್ನಲ್ಲಿಯೇ ಬಯ್ಯುತ್ತಿದ್ದಾರೆ ಎಂದು ಪಾಲಿಕೆ ಸದಸ್ಯ ಮಳುಗೌಡ ಪಾಟೀಲ್ ಅಳಲು ತೋಡಿಕೊಂಡ ಪ್ರಸಂಗ ವಿಜಯಪುರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ್ ಸಮ್ಮುಖದಲ್ಲಿ ಹಾಗೂ ಮೇಯರ್ ಮೆಹಜಬೀನ್ ಹೊರ್ತಿ ಅಧ್ಯಕ್ಷತೆಯಲ್ಲಿ ನಡೆದ ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರು ತಮ್ಮ ಅಳಲು ತೋಡಿಕೊಂಡರು.
ಸದಸ್ಯ ಮಳುಗೌಡ ಪಾಟೀಲ್, ನನ್ನ ವಾರ್ಡ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದೆ. ನನ್ನ ವಾರ್ಡ್ನಲ್ಲಿ ಡಾಕ್ಟರ್, ಇಂಜನಿಯರ್ಗಳೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಸಮಸ್ಯೆಯಿಂದ ಬೇಸರಗೊಂಡಿರುವ ಅವರು ನನಗೆ ಕರೆ ಮಾಡಿ ಇಂಗ್ಲಿಷ್ನಲ್ಲಿ ಬಯ್ಯುತ್ತಿದ್ದಾರೆ. ಯಾವ ರೀತಿ ಉತ್ತರಿಸಲಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ವಿಮಲಾ ರಫೀಕ್ಅಹ್ಮದ್ ಖಾಣೆ, ವಾರ್ಡ್ ನಂ.24ರಲ್ಲಿ ಕುಡಿಯುವ ನೀರಿನಲ್ಲಿ ಡ್ರೈನೇಜ್ ನೀರು ಪೂರೈಕೆಯಾಗುತ್ತಿದೆ ಎಂದು ಗಂಭೀರವಾಗಿ ದೂರಿದರು. ಈ ರೀತಿ ನೀರು ಪೂರೈಕೆಯಾದರೆ ಜನರು ಯಾವ ರೀತಿ ಬದುಕಬೇಕು ಎಂದು ಪ್ರಶ್ನಿಸಿದರು.
ಆಗ ಸಚಿವ ಡಾ. ಎಂ.ಬಿ. ಪಾಟೀಲ್ ಸಹ ಆತಂಕ ವ್ಯಕ್ತಪಡಿಸಿ ಅಧಿಕಾರಿಗಳಿಂದ ವಿವರಣೆ ಕೇಳಿ, ಈ ಹಿಂದೆ ಡ್ರೈನೇಜ್ ಲೈನ್ ಲಿಂಕ್ ಆಗಿದ್ದ ಕಾರಣ ಈ ರೀತಿಯ ಸಮಸ್ಯೆ ಉಂಟಾಗಿದೆ, ಈ ಸಮಸ್ಯೆ ನಿವಾರಣೆಯಾಗಿದೆ ಎಂದರು.
ಆಗ ವಿಮಲಾ ಕಾಣೆ, ಕೆಲವೊಂದು ವಾರ್ಡಗಳಲ್ಲಿ ಯಥೇಚ್ಚವಾಗಿ ರಾತ್ರಿ ಸಮಯದಲ್ಲಿ ನೀರು ಪೂರೈಕೆಯಾಗುತ್ತದೆ, ರಸ್ತೆಗೆ ಹರಿದು ಹೋಗುತ್ತಿದೆ, ಗಾಡಿ ತೊಳೆಯಲು ಸಹ ಈ ನೀರು ಬಳಕೆಯಾಗುತ್ತಿದೆ. ಆದರೆ, ನಮ್ಮ ವಾರ್ಡನಲ್ಲಿ ಮಾತ್ರ ಕುಡಿಯಲು ನೀರಿಲ್ಲ, ಹೀಗಾಗಿ ಒಂದು ಟೈಂಲೈನ್ ಫಿಕ್ಸ್ ಮಾಡಿ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ಅಧಿಕಾರಿಗಳು ಫೋನ್ ರಿಸೀವ್ ಮಾಡುವುದೇ ಇಲ್ಲ, ಈ ರೀತಿಯಾದರೆ ಯಾವ ರೀತಿ ಜನರ ಸಮಸ್ಯೆಯನ್ನು ಹೇಳಬೇಕು ಎಂದು ಸದಸ್ಯ ರಾಹುಲ್ ಜಾಧವ ಅಸಮಾಧಾನ ಹೊರಹಾಕಿದರು. ದೌಲತಕೋಟಿ ಬಳಿ ಸರ್ಕಾರಿ ಉರ್ದು ಶಾಲೆ ಕುಸಿದು ಇಬ್ಬರು ಮಕ್ಕಳಿಗೆ ಗಾಯವಾಗಿದೆ, ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದೆ, ಸಚಿವರು ಈ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಎಂದು ಸದಸ್ಯೆ ಶಾಹೀನ್ ಬಾಂಗಿ ಸಭೆಯ ಗಮನ ಸೆಳೆದರು.
ಜಲಮಂಡಳಿ ಅಧಿಕಾರಿ ಗೈರು: ಕರೆ ಮಾಡಿ ವಾರ್ನ್ ಮಾಡಿದ ಸಚಿವರು
ಕುಡಿಯುವ ನೀರಿನ ಗಂಭೀರ ಸಮಸ್ಯೆ ಚರ್ಚೆ ನಡೆಯುತ್ತಿದ್ದಾಗ ಜಲಮಂಡಳಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಸಭೆಗೆ ಹಾಜರಾಗಿರಲಿಲ್ಲ. ಜಲಮಂಡಳಿ ಅಧ್ಯಕ್ಷರ ಸಭೆಗೆ ಹೋಗಿದ್ದಾರೆ ಎಂದು ಉಳಿದ ಅಧಿಕಾರಿಗಳು ಸಮಜಾಯಿಷಿ ನೀಡಲು ಬಂದಾಗ ಗರಂ ಆದ ಸಚಿವರು, ಇಲ್ಲಿ ಜನರ ಸಮಸ್ಯೆ ಇದೆ, ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ಇದೆ, ಈ ಹೊತ್ತಿನಲ್ಲಿ ನಿಗಮ ಮಂಡಳಿ ಅಧ್ಯಕ್ಷರಿಗೆ ಹೂಗುಚ್ಚ ನೀಡಲು ಹೋಗಿದ್ದಾರಾ? ಎಂದು ಸ್ವತಃ ಅಧಿಕಾರಿಗೆ ಕರೆ ಮಾಡಿ ಕಿಡಿಕಾರಿದರು.
ಇಲ್ಲಿ ಗಂಭೀರವಾಗಿ ಸಭೆ ನಡೆಯುತ್ತಿದೆ, ಕುಡಿಯುವ ನೀರು 11 ದಿನವಾದರೂ ಪೂರೈಕೆಯಾಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ನೀವು ಸಭೆಯ ಉದ್ದೇಶ ಹೇಳಿ ಹೋಗುವುದು ತಪ್ಪಿಸಬಹುದಿತ್ತಲ್ಲ ಎಂದು ಅಸಮಾಧಾನ ಹೊರಹಾಕಿದರು. ಆಗ ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಇದ್ದರೆ ಅವರ ಕೈಗೆ ಫೋನ್ ಕೊಡಿ ಎಂದ ಸಚಿವ ಡಾ.ಎಂ.ಬಿ. ಪಾಟೀಲರು, ನಿಮ್ಮ ಅಧಿಕಾರಿಯ ವರ್ತನೆ ಬೇಜಾರು ತಂದಿದೆ, ಅವರನ್ನು ವರ್ಗಾವಣೆ ಅಲ್ಲ ಅಮಾನತ್ತು ಮಾಡಬೇಕಾಗುತ್ತದೆ, ಈ ಗಂಭೀರ ಸಮಸ್ಯೆ ಬಿಟ್ಟು ಅಲ್ಲಿಗೆ ಬರುವ ಔಚಿತ್ಯ ಇರಲಿಲ್ಲ ಅವರಿಗೆ ಇಲ್ಲಿ ಬಂದು ಕೆಲಸ ಮಾಡಲು ಹೇಳಿ ಎಂದು ಎಚ್ಚರಿಕೆ ನೀಡಿದರು.
ಪಾಲಿಕೆ ಆಯುಕ್ತರ ವಿರುದ್ಧ ಎಂಬಿಪಿ ಗರಂ
ಸಭೆಯಲ್ಲಿಯೇ ಪಾಲಿಕೆ ಆಯುಕ್ತರ ವಿರುದ್ಧವು ಗರಂ ಆದ ಸಚಿವ ಎಂ.ಬಿ. ಪಾಟೀಲ್, ಕುಡಿಯುವ ನೀರಿಗೆ ಸಂಬಂಧಿಸಿದಂತೆ ತುರ್ತಾಗಿ ಆಗಬೇಕಿರುವ ಎಲ್ಲ ಕಾಮಗಾರಿಗಳು ಒಂದೇ ವಾರದಲ್ಲಿ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿದರು. ಮುಂದಿನ ವಾರದಲ್ಲಿ ಪಾಲಿಕೆ ಹಾಗೂ ಸರ್ವಸದಸ್ಯರೊಂದಿಗೆ ಮತ್ತೆ ಸಭೆ ನಡೆಸುತ್ತೇನೆ ಅಷ್ಟರಲ್ಲಿ ತುರ್ತು ಕಾಮಗಾರಿಗಳು ಪೂರ್ಣಗೊಳ್ಳದಿದ್ದಲ್ಲಿ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ವಿವಿಧ ವಾರ್ಡ್ಗಳಲ್ಲಿರುವ ಖಾಸಗಿ ಬೋರವೆಲ್ಗಳನ್ನು ಗುರುತಿಸಿ ಬಾಡಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಸ್ವಚ್ಛಗೊಂಡಿರುವ ಪುರಾತನ ಬಾವಿಗಳ ನೀರನ್ನು ಗೃಹಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಕಾರ್ಯಯೋಜನೆ ರೂಪಿಸಿ ತುರ್ತು ಅನುಷ್ಠಾನಗೊಳಿಸಬೇಕು ಎಂದು ಸಚಿವ ಎಂ.ಬಿ. ಪಾಟೀಲ ನಿರ್ದೇಶನ ನೀಡಿದರು.
ವಿಜಯಪುರ ನಗರದಲ್ಲಿ ಐತಿಹಾಸಿಕ ತಾಜ್ ಬಾವಡಿ ಸೇರಿದಂತೆ ಅನೇಕ ಪುರಾತನ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಎಲ್ಲ ಬಾವಡಿಗಳ ನೀರನ್ನು ಕುಡಿಯುವ ನೀರು ಹೊರತುಪಡಿಸಿ ಸ್ನಾನ, ಬಟ್ಟೆ ಒಗೆಯಲು ಬಳಸಬಹುದಾಗಿದೆ, ಸರಿಸುಮಾರು ಐದು ಎಂಎಲ್ಡಿಯಷ್ಟು ನೀರು ಸದ್ಭಳಕೆ ಮಾಡಿಕೊಳ್ಳಬಹುದಾಗಿದ್ದು, ಭೂತನಾಳ ಕೆರೆ ಜಲಮೂಲದ ಹೊರೆಯನ್ನು ಸಂಪೂರ್ಣವಾಗಿ ತಗ್ಗಿಸಬಹುದಾಗಿದೆ, ಈ ನಿಟ್ಟಿನಲ್ಲಿ ಪಾಲಿಕೆ ಮುಂದಾಗಬೇಕು ಎಂದರು.