ಅಲ್ಪಸಂಖ್ಯಾತರ ಇಲಾಖೆಯ ಸಕಾಪ್ ರೋಜಾ ವಸತಿ ನಿಲಯದ ಅವ್ಯವಸ್ಥೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ವಿಜಯಪುರ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕರಿಗೆ ಮನವಿ ಸಲ್ಲಿಸಿದರು.
ವಿಜಯಪುರ ನಗರದ ಬಸ್ ಸ್ಟ್ಯಾಂಡ್ ಹತ್ತಿರದಲ್ಲಿರುವ ಪಕ್ಕದ ರಸ್ತೆಯ ಸಕಾಪ್ ರೋಜಾದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಪದವಿ ಪೂರ್ವ ಬಾಲಕರ ವಸತಿ ನಿಲಯ ಐವತ್ತು ವರ್ಷಗಳ ಹಳೆ ಬಾಡಿಗೆ ಬಿಲ್ಡಿಂಗ್. ನಿನ್ನೆ ರಾತ್ರಿ ಮಳೆಯಿಂದ ಸೋರಿ ವಸತಿ ನಿಲಯದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ಘಟನೆಯನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕವು ವಿದ್ಯಾರ್ಥಿಗಳ ನಿಯೋಗದೊಂದಿಗೆ ಜಿಲ್ಲಾ ಪಂಚಾತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ದಲಿತ ವಿದ್ಯಾರ್ಥಿ ಪರಿಷತ್ನ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, “ಸುಮಾರು 30 ರಿಂದ 40 ವರ್ಷದ ಹಳೆಯ ಬಾಡಿಗೆ ಕಟ್ಟಡ ಇದಾಗಿದೆ. ರಾತ್ರಿ ಇಡೀ ನಿನ್ನೆ ನಗರದಲ್ಲಿ ಮಳೆ ಬಂದಿರುವುದರಿಂದ ಕೊಠಡಿಗಳೆಲ್ಲ ಮಿಂದಿದ್ದು, ವಿದ್ಯಾರ್ಥಿಗಳು ಮಲಗಲು ಆಗದೆ ಕೂರಲೂ ಆಗದೆ, ಭಯಭೀತರಾಗಿ ತೊಂದರೆಯನ್ನು ಅನುಭವಿಸಿದ್ದಾರೆ. ಅಧಿಕಾರಿಗಳ ಗಮನಕ್ಕೆ ಇದ್ದರೂ ನಾಲ್ಕು ವರ್ಷದಿಂದ ವಿದ್ಯಾರ್ಥಿಗಳಿಗೆ ಇದನ್ನೇ ವಸತಿ ನಿಲಯವನ್ನಾಗಿಸಿ ಸೋರುವಂತಹ, ಸರಿಯಾದ ಕೋಣೆಗಳ ವ್ಯವಸ್ಥೆ ಇಲ್ಲದ, ಕಿಟಕಿಗಳಿಲ್ಲದೆ, ತಗಡಿನ ಶೆಡ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಸಲುವಾಗಿ ಸುಮಾರು ಸಾರಿ ಹೋರಾಟ ಕೂಡಾ ಮಾಡಿದ್ದೇವೆ.
ಆದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಉದ್ದೇಶಪೂರ್ವಕವಾಗಿ ಇದು ಹಳೆಯ ಕಟ್ಟಡವೆಂದು ಗೊತ್ತಿದ್ದರೂ ತಮ್ಮ ಲಾಭಿಗೋಸ್ಕರ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡುತ್ತಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಎತ್ತಿ ತೋರುತ್ತಿದೆ. ಈ ಅಧಿಕಾರಿಗಳ ದುರ್ನಡತೆಯಿಂದ ಸರ್ಕಾರದ ಹಣವನ್ನು ಲೂಟಿ ಮಾಡುವುದಕ್ಕಾಗಿ ತಮ್ಮ ಲಾಭಿಗೋಸ್ಕರ ಸರ್ಕಾರಕ್ಕೂ ಮತ್ತು ವಿದ್ಯಾರ್ಥಿಗಳಿಗೂ ಮೋಸವೆಸಗಿದ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ಕಾರ್ಯರೂಪಕ್ಕೆ ಬಾರದೆ ಇದ್ದರೆ ದೊಡ್ಡಪ್ರಮಾಣದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಸಕ ಬಸನಗೌಡ ದದ್ದಲ್ ರಾಜೀನಾಮೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಆಗ್ರಹ
ಈ ಸಂದರ್ಭದಲ್ಲಿ ಸತೀಶ್ ಅಂಜುಟಗಿ, ಯುವರಾಜ್ ಓಲೇಕಾರ್, ಬಾಲರಾಜ್, ಮಾದೇಶ್ ಚಲವಾದಿ, ಆನಂದ ಮುದೂರ ಯಮನೂರಿ ಸೇರಿದಂತೆ ಇತರರು ಇದ್ದರು.
