ಮೂವತ್ತು ತಿಂಗಳ ನಂತರ ಕೊನೆಗೂ ನಾಲತವಾಡ ಪಟ್ಟಣ ಪಂಚಾಯಿತಿಗೆ ಆಡಳಿತ ಮಂಡಳಿ ರಚನೆಯಾಗಿದ್ದು, ಅಧಿಕಾರ ಹಿಡಿದಿರುವ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಪಟ್ಟಣ ಅಭಿವೃದ್ಧಿಯಲ್ಲಿ ಸಾಲು ಸಾಲು ಸವಾಲುಗಳು ಎದುರಾಗಿವೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತ್ ಈವರೆಗೆ ಅಲ್ಲಿಯ ಅಧಿಕಾರಿ ಆಡಳಿತದಲ್ಲಿತ್ತು. ಇದರಿಂದ ಪಟ್ಟಣದಲ್ಲಿ ಮೂಲಸೌಕರ್ಯಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿತ್ತು. ಸದ್ಯ ಇದೀಗ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಮಂಡಳಿ ರಚನೆಯಾಗಿದ್ದು, ತರಕಾರಿ ಮಾರುಕಟ್ಟೆ ಸಮಸ್ಯೆ, ಕುಡಿಯುವ ನೀರು, ಹದಗೆಟ್ಟ ರಸ್ತೆಗಳು, ಚರಂಡಿ ಸ್ವಚ್ಛತೆ, ಸ್ಥಗಿತಗೊಂಡ ಸಿಸಿ ಕ್ಯಾಮೆರಾಗಳ ದುರಸ್ತಿ ಮಾಡಿಸುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜವಾಬ್ದಾರಿ ಅವರ ಹೆಗಲ ಮೇಲಿದೆ.
ನಗರದ ಸಿಸಿ ಕ್ಯಾಮೆರಾಗಳು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದ ಕಳ್ಳರ ದಾಂಧಲೆ ಹೆಚ್ಚಾಗತೊಡಗಿದ್ದು, ಇದಕ್ಕೆ ಕಡಿವಾಣ ಹಾಕುವರೇ ಕಾದು ನೋಡಬೇಕು.
ಬೇಕಿದೆ ಬೆಳಕಿನ ವ್ಯವಸ್ಥೆ: ಹಲವು ವಾರ್ಡ್ಗಳಲ್ಲಿ ಹೆಸರಿಗೆ ಮಾತ್ರ ಬೀದಿದೀಪಗಳಿದ್ದು, ಬೆಳಕಿನ ವ್ಯವಸ್ಥೆಯಿಲ್ಲದಂತಾಗಿದೆ. ಕೆಲವು ಕಂಬಗಳಲ್ಲಿ ಬಲ್ಬ್ಗಳು ಒಡೆದುಹೋಗಿವೆ. ಕೆಲವು ಕಡೆ ಬಲ್ಬ್ಗಳೇ ಇಲ್ಲ. ಹೊಸ ಬಲ್ಬ್ಗಳನ್ನು ಅಳವಡಿಸಬೇಕು. ಪ್ರಮುಖ ಸ್ಥಳಗಳಲ್ಲಿ ಐಮಾಸ್ಟ್ ಲೈಟ್ ಅಳವಡಿಸವ ಕಾರ್ಯವಾಗಬೇಕಿದೆ.
ಚರಂಡಿಗಳ ಸಮಸ್ಯೆ : ಪಟ್ಟಣದಲ್ಲಿ ಚರಂಡಿಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಚರಂಡಿಗಳ ನಿರ್ಮಾಣ ಅವೈಜ್ಞಾನಿಕತೆಯಿಂದ ಕೂಡಿದೆ. ಮಳೆಗಾಲದಲ್ಲಿ ಚರಂಡಿ ನೀರು ಹರಿದು ಹೋಟೆಲ್, ತರಕಾರಿ ಗೂಡಂಗಡಿಗಳಿಗೆ ನುಗ್ಗುತ್ತಿದ್ದು, ವ್ಯಾಪಾರಸ್ಥರ ನಿದ್ರೆಗೆಡಿಸುತ್ತಿದೆ. ವ್ಯಾಪಾರಸ್ಥರು ವ್ಯಾಪಾರ ಮಾಡಲು ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದ ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿವ ಕೆಲಸವಾಗಬೇಕಿದೆ.

ನೀರಿನ ಸಮಸ್ಯೆ : ಅಂದಾಜು 20 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಎರಡು ನೀರು ಸಂಗ್ರಹಗಾರ ಟ್ಯಾಂಕ್ಗಳಿವೆ. ಆದರೆ ಸಾರ್ವಜನಿಕರಿಗೆ ಬೇಕಾಗುವಷ್ಟು ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸಲು ಸಂಪೂರ್ಣ ಸ್ಪಷ್ಟವಾದ ಯೋಜನೆಯ ಅಗತ್ಯವಿದೆ.
ಸಿಬ್ಬಂದಿಗಳ ಕೊರತೆ : ಹಲವು ವರ್ಷಗಳಿಂದ ಪಟ್ಟಣ ಪಂಚಾಯತಿಯಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಕೆಲಸಗಳಾಗದೆ ತೊಂದರೆಗೊಳಗಾಗಿದ್ದಾರೆ. ಸಮಯ ಪಾಲನೆಯಲ್ಲಿ ಲೋಪಗಳಿದ್ದು, ಸಿಬ್ಬಂದಿಗಳ ಚುರುಕುಗೊಳಿಸುವಿಕೆ ಅಗತ್ಯವಿದೆ.
ಶೌಚಾಲಯಗಳ ಸಮಸ್ಯೆ : ಕುಂಬಾರನಗರ, ಹರಿಜನಕೇರಿಯಲ್ಲಿ ನಿರ್ಮಿಸಲಾದ ಶೌಚಾಲಯಗಳು ಬೀಗ ಜಡಿಯಲಾಗಿದೆ. ಅವುಗಳ ಸ್ಥಿತಿ ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಹಾಗಾಗಿ ಮಹಿಳೆಯರು ಶೌಚಾಲಯಕ್ಕೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಉತ್ತಮ ಬೆಲೆ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆಗಾರರು
ನೂತನ ಅಧ್ಯಕ್ಷೆ ವಿಜಯಲಕ್ಷ್ಮಿ ಇಲಕಲ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಪಕ್ಷಭೇದ ಮರೆತು ಎಲ್ಲರನ್ನೊಳಗೊಂಡು ಕುಂಠಿತವಾಗಿರುವ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಪ್ರತಿಯೊಂದು ಸಮಸ್ಯೆಗಳ ಕುರಿತು ಸಿಬ್ಬಂದಿಗಳ ಜತೆಗೆ ಚರ್ಚಿಸಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು