ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಾದ್ಯಂತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಭರದಿಂದ ನಡೆಯುತ್ತಿದ್ದು, ಅಪರಾಧವೆಂದು ತಿಳಿದಿದ್ದರೂ ಮದ್ಯ ಮಾರಾಟಗಾರರಿಗೆ ಕಾನೂನಿನ ಭಯವೇ ಇಲ್ಲ. ಇದಕ್ಕೆಲ್ಲ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೇ ಕಾರಣ ಎಂದು ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಆರೋಪಿಸಿದರು.
ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಅಬಕಾರಿ ನಿರೀಕ್ಷಕ ನಾಯಿಕ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣಪತಿ ರಾಠೋಡ ಮಾತನಾಡಿ, “ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದನ್ನು ತಡೆಯುವಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಸುಮಾರು ಮೂರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರಿಗೆ ಕಾನೂನಿನ ಭಯ ಅಥವಾ ಅಧಿಕಾರಿಗಳ ಬಗ್ಗೆ ಕಿಂಚಿತ್ತೂ ಭಯವಿಲ್ಲದಂತಾಗಿದೆ” ಎಂದರು.
“ತಾಲೂಕಿನ ಪ್ರತಿ ಹಳ್ಳಿಯಲ್ಲೂ ಅಕ್ರಮವಾದ ಮದ್ಯ ಮಾರಾಟ ಹೆಚ್ಚಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಅದಕ್ಕೆ ಅಬಕಾರಿ ಅಧಿಕಾರಿಗಳೇ ನೇರಹೊಣೆ ಹೊರಬೇಕಾಗುತ್ತದೆ. ಈ ಕೂಡಲೇ ಅಕ್ರಮ ಮದ್ಯ ತಡೆಗಟ್ಟಲು ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅಸಹಾಯಕತೆ ತೋರಿದರೆ, ತೀವ್ರ ಪ್ರತಿಭಟನೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಿಂದ ವಿಶ್ವ ಆತ್ಮಹತ್ಯೆ ತಡೆ ಕಾರ್ಯಕ್ರಮ
ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಜಾಧವ, ಕಾರ್ಯದರ್ಶಿ ಲಕ್ಷ್ಮಣ್ ಚಡಚಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದುರ್ಗಪ್ಪ ಬೂದಿಹಾಳ, ಚಡಚಣ ತಾಲೂಕು ಅಧ್ಯಕ್ಷ ಚಂದ್ರಕಾಂತ್ ನಗರೇ, ಅಣ್ಣಪ್ಪ ಪೂಜಾರಿ, ಕೆಆರ್ಎಸ್ ಪಕ್ಷದ ಹಲವಾರು ಸೈನಿಕರು ಇದ್ದರು.