ಡಾ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಜಾಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ವಿದ್ಯಾರ್ಥಿ ಒಕ್ಕೂಟ ದೇವರಹಿಪ್ಪರಗಿ ತಾಲೂಕು ಘಟಕ(ಪ್ರೊ. ಬಿ ಕೃಷ್ಣಪ್ಪ ಬಣ)ದಿಂದ ಪಂಜಿನ ಮೆರವಣಿಗೆ ನಡೆಸಿದರು.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಪ್ರಕಾಶ ಸಿಂದಗಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಡಿಎಸ್ಎಸ್ ಜಿಲ್ಲಾ ಸಂಘಟನೆಯ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, “ಡಾ. ಬಿ ಆರ್ ಅಂಬೇಡ್ಕರ್ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಬಿಜೆಪಿಯವರಿಗೆ ಈ ಸಂವಿಧಾನ ಬದಲಿಸುವ, ಮೀಸಲಾತಿ ರದ್ದುಗೊಳಿಸುವ ಹಿಡನ್ ಅಜೆಂಡಾ ಇದೆ” ಎಂದು ಆರೋಪಿಸಿದರು.
“ಕೇಂದ್ರ ಗೃಹ ಸಚಿವರು ರಾಜ್ಯ ಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ದೇಶದ ಜನರ ಕ್ಷಮೆಯಾಚಿಸಿ ನೈತಿಕ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅಮಿತ್ ಶಾ ಹೇಳಿಕೆಗೆ ಖಂಡನೆ; ಸಂವಿಧಾನ ಸಂರಕ್ಷಣಾ ಸಮಿತಿ ಜ.6ರಂದು ಬಂದ್ಗೆ ಕರೆ
ಈ ವೇಳೆ ಜಿಲ್ಲಾ ಸಂಘಟನೆ ಸಂಚಾಲಕ ಶರಣು ಶಿಂದೆ, ಪರಶುರಾಮ ದಿಂಡವಾರ, ಲಕ್ಕಪ್ಪ ಬಡಿಗೇರ, ತಾಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಮುಖಂಡರಾದ ರಾವುತ ಮಾಸ್ತರ ತಳಕೇರಿ, ಬಸವರಾಜ ಇಂಗಳಗಿ, ಪರಶುರಾಮ ಬಡಿಗೇರ, ಪ್ರಕಾಶ ಶಾಂತಗಿರಿ, ಯಮನಪ್ಪ ಭೂತಾಳಿ, ರಮೇಶ ಬನಸೋಡೆ, ರಾಘವೇಂದ್ರ ಪಡಗಾನೂರ, ಪ್ರಕಾಶ ಮಣೂರ, ಸುನೀಲ ಕನಮಡಿ, ಮಹೇಶ ಗುಡಿಮನಿ, ಸುನಂದಾಸೊನ್ನಳ್ಳಿ, ಶಂಕರಗೌಡ, ಹಿರೇಗೌಡ ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ವಿವಿಧ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಇದ್ದರು.