ಮನರೇಗಾ ಯೋಜನೆಯ ಸಮರ್ಪಕ ಜಾರಿಗಾಗಿ ಹಾಗೂ ಸತತ 100 ದಿನಗಳ ಕೆಲಸಕ್ಕಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ(ಕೆಪಿಆರ್ಎಸ್) ವಿಜಯಪುರ ಜಿಲ್ಲಾ ಸಮಿತಿಯಿಂದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರಿ ಮಾತನಾಡಿ, “ವಿಜಯಪುರ ಜಿಲ್ಲೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ವಲಸೆ ಹೋಗುವ ಕೂಲಿಕಾರರ ಜಿಲ್ಲೆಯಾಗಿದೆ. ಮನರೇಗಾ ಬಡವರ ಪಾಲಿಗೆ ವರದಾನವಾಗಬೇಕಾಗಿದೆ. ಯೋಜನೆ ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಲು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಯೋಜನೆ ದಾರಿ ತಪ್ಪಿದ್ದು, ಜಿಲ್ಲಾ ಪಂಚಾಯತ್ ಸಿಇಒ ಅವರ ಅಲಕ್ಷ್ಯತನ ಹಾಗೂ ಕೆಳಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನರೇಗಾ ಯೋಜನೆ ಹಳ್ಳ ಹಿಡಿದಿದೆ” ಎಂದು ಹೇಳಿದರು.
“ಜಿಲ್ಲೆಯ ಹಲವಾರು ಗ್ರಾಮ ಪಂಚಾಯತ್ಗಳ ಕೆಲಸಕ್ಕಾಗಿ ಫಾರ್ಮ್ ನಂ: 6ರ ಅರ್ಜಿಸಲ್ಲಿಸಿದ್ದರೂ ಕೆಲಸ ನೀಡುತ್ತಿಲ್ಲ. ಕೆಲಸ ನೀಡದಿರುವಾಗ ನಿರುದ್ಯೋಗ ಭತ್ಯೆಗಾಗಿ ಖಚಿತ ಆದೇಶ ಜಾರಿಮಾಡದೆ ಯೋಜನೆ ಮಹತ್ವವನ್ನು ಹಾಳುಮಾಡಿದ್ದಾರೆ. ಇದಕ್ಕೆ ಸಿಇಒ ಅವರೇ ನೇರ ಕಾರಣಾಗಿದ್ದಾರೆ” ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಎಸ್ಬಿಐ ಎಟಿಎಂ ದರೋಡೆ ಪ್ರಕರಣ; ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧನ
ಇದೇ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ಡಿವೈಫ್ಐ ಜಿಲ್ಲಾಧ್ಯಕ್ಷ ರಮೇಶ ತಳವಾರ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷಣ ಹಂದ್ರಾಳ, ಈರಣ್ಣ ಬೆಳ್ಳುಡಿ, ಹುಳಗಪ್ಪ ಛಲವಾದಿ, ಶಾಂತಪ್ಪ ಹೊಸಮನಿ ಇದ್ದರು.