ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮಾದಿಗ ಸಮುದಾಯ ಬೆಂಬಲಿಸುವುದಾಗಿ ಭರವಸೆ ನೀಡಿದೆ.
ವಿಜಯಪುರ ನಗರದಲ್ಲಿ ಮಂಳಾವಾರ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ನೇತೃತ್ವದಲ್ಲಿ ಮಾದಿಗ ಸಮುದಾಯದಿಂದ ಹಮ್ಮಿಕೊಂಡಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದರು.
“ಈ ಬಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಾಗುವುದು” ಎಂದು ಎಲ್ಲರೂ ಒಕ್ಕೊರಲಿನಿಂದ ಕೂಗಿದರು.
ಸಚಿವ ತಿಮ್ಮಾಪುರ ಅವರು ಮಾತನಾಡಿ, “ರಾಜು ಆಲಗೂರ್ ಅವರು ಸಭ್ಯ, ಸೌಜನ್ಯದ ವ್ಯಕ್ತಿ. ತಮ್ಮ ಸಮುದಾಯದವರು ಸ್ಪರ್ಧಿಸಿದ್ದಾರೆಂದು ಈವರೆಗೆ ಒಬ್ಬರಿಗೆ ನೀವೆಲ್ಲ ಹೆಚ್ಚಿನ ಮತ ನೀಡುತ್ತ ಬಂದಿರುವಿರಿ. ಆದರೆ ಈ ಬಾರಿ ಯೋಚಿಸಿ ನಿಮ್ಮ ಹಿತಕ್ಕಾಗಿ ಕಾಂಗ್ರೆಸ್ಗೆ ಬೆಂಬಲ ನೀಡಿ” ಎಂದರು.
“ಗ್ಯಾರಂಟಿ ಯೋಜನೆಗಳಿಂದ ನಿಮಗೆಲ್ಲ ಅನುಕೂಲವಾಗಿದೆ. ನಿಮ್ಮ ಮಕ್ಕಳು ಸುಶಿಕ್ಷಿತರಾಗಲು ಸರಕಾರ ಶ್ರಮಿಸಿದೆ. ದಮನಿತರ ಏಳಿಗೆಗಾಗಿ ಕಾಂಗ್ರೆಸ್ ಯಾವತ್ತೂ ಮಿಡಿದಿದೆ. ಬಿಜೆಪಿ ಅಭ್ಯರ್ಥಿ ಮತ್ತು ಆ ಪಕ್ಷದಿಂದ ನಿಮಗೆ ಈವರೆಗೆ ಯಾವುದೇ ಲಾಭವಾಗಿಲ್ಲ. ಹಿಂದುತ್ವ ಬಿಜೆಪಿಯವರ ಮನೆ ಆಸ್ತಿ ಅಲ್ಲ. ಹಿಂದುಳಿದ ಜಾತಿಯವರ ಮತ ಕೇಳಲು ಸಂವಿಧಾನ ವಿರೋಧಿ ಜನಕ್ಕೆ ನೈತಿಕತೆ ಇಲ್ಲ. ವಿಶ್ವದಲ್ಲಿ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಮೊದಲು ಕಸಾಯಿಖಾನೆ ಬಂದ್ ಮಾಡಿ ಗೋಮಾತೆ ಬಗ್ಗೆ ನಿಜವಾದ ಪ್ರೀತಿ ತೋರಿಸಿ” ಎಂದು ಗುಡುಗಿದರು.
“ಚೀನಾ ಭೂಮಿ ಅತಿಕ್ರಮಿಸಿದೆ. ನಮ್ಮ ಪ್ರಧಾನಿ ದುರ್ಬಲ, ಅವರು ಯುವಕರ ತಲೆಕೆಡಿಸುತ್ತಾರೆ. ಇದೆಲ್ಲಕ್ಕೂ ಭಿನ್ನವಾಗಿರುವ ದಲಿತಪರ, ಜೀವಪರ ವ್ಯಕ್ತಿಯಾದ ಆಲಗೂರಗೆ ಮತ ಹಾಕಿ” ಎಂದು ಕೋರಿದರು.
ಜಿಲ್ಲಾ ಉಸ್ತುವಾರಿ, ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಮಾತನಾಡಿ, “ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಭಾರತವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದೆ. ಈ ದೇಶವನ್ನು ಸೂಜಿಯಿಂದ ವಿಮಾನಯಾನ, ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೆ ಕಟ್ಟಲಾಗಿದೆ. ರಾಜ್ಯದಲ್ಲೂ ನಮ್ಮ ಸರ್ಕಾರ ನಿಮ್ಮ ಪ್ರಗತಿಪರವಾಗಿದೆ. ಇಲ್ಲಿ ಆಲಗೂರರು ತಮ್ಮೆಲ್ಲರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ” ಎಂದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, “ಕನಸಲ್ಲೂ ನಾನು ಎಡ-ಬಲ ಸಮಾಜವೆಂದು ಬೇರೆ ಮಾಡಿಲ್ಲ. ನಾನು ಒಂದು ಪಂಗಡಕ್ಕೆ ಮಾತ್ರ ಸೀಮಿತವಾಗಲು ಇಚ್ಛಿಸುವುದಿಲ್ಲ. ಇದು ರಾಜಕಾರಣಕ್ಕಾಗಿ ನಾನು ಹೇಳುತ್ತಿಲ್ಲ” ಎಂದರು.
“ಕಾಂಗ್ರೆಸ್ ನಮಗೆ ಬಹಳ ಉಪಕಾರ ಮಾಡಿದೆ. ಶೋಷಿತ ಸಮಾಜ ಬದಲಾಗಲು ಕಾಂಗ್ರೆಸ್ ಕಾರಣವಾಗಿದೆ. ನಮಗೆ ಉಸಿರಾಡುವಂತೆ ಮಾಡಲಾಗಿದೆ. ನಮಗೆ ಒಂದೆಕರೆ ಭೂಮಿ ಕೂಡ ಇರಲಿಲ್ಲ. ಇದರಿಂದ ಶ್ರೀಮಂತರ ವಿರೋಧವನ್ನು ಕಾಂಗ್ರೆಸ್ ಎದುರಿಸಿದೆ. ಹಲವು ಕಾಯ್ದೆಗಳ ಮೂಲಕ ನಮ್ಮ ಬದುಕನ್ನು ನೆಹರೂರಿಂದ ಇಂದಿರಾಗಾಂಧಿಯವರ ತನಕ ರೂಪಿಸಲಾಗಿದೆ. ಹಲವು ಕಾಯ್ದೆಯ ತಿದ್ದುಪಡಿ ಮಾಡಿ ಸಾಮಾನ್ಯರ ಬಾಳು ಉದ್ಧರಿಸಲು ಯತ್ನಿಸಲಾಗಿದೆ” ಎಂದರು.
“ಗ್ಯಾರಂಟಿಗಳ ಮೂಲಕ ಹೆಣ್ಣುಮಕ್ಕಳ ನಿತ್ಯ ಜೀವನ ಹಗುರಾಗಿದೆ. ನಿಮ್ಮ ಜೊತೆ ನಾನು ಯಾವತ್ತೂ ಇರುವೆ” ಎಂದು ಭರವಸೆ ನೀಡಿದರು.
ಯುವತಿ ಪೂಜಾ ದೊಡ್ಡಮನಿ ಸಭೆಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. “ನಾವು ಸರಿಯಾದ ಶಿಕ್ಷಣ ಪಡೆದರೆ ಬಿಜೆಪಿ ಭ್ರಮೆಗಳಿಂದ ಹೊರಬರಲು ಸಾಧ್ಯ. ಹಿಂದೂಗಳ ಹೆಸರು ಹೇಳುವ ಮೋದಿಯವರು ನಮ್ಮನ್ನು ಹಿಂದೂಗಳೆಂದು ಒಪ್ಪುತ್ತಾರಾ? ಯೋಚಿಸಿ ಮತ ನೀಡಿ” ಎಂದು ಹೇಳಿ ಗಮನ ಸೆಳೆದಳು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ದೇಶ ಭಕ್ತಿಯನ್ನು ಬಿಜೆಪಿಯವರಿಗೆ, ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ: ಶಾಸಕ ಲಕ್ಷ್ಮಣ ಸವದಿ
ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ, ನಿವೃತ್ತ ಐಅರ್ಎಸ್ ಅಧಿಕಾರಿ ಎಚ್ ಆರ್ ಭೀಮಾಶಂಕರ, ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ, ಸುಭಾಶ ಕಾಲೇಬಾಗ, ಕೆ ಕೆ ಕಳಸದ ಸೇರಿದಂತೆ ಹಲವಾರು ಮುಖಂಡರು, ಸಮುದಾಯದ ಪ್ರಮುಖರು ಇದ್ದರು.
