ವಿಜಯಪುರ ಜಿಲ್ಲೆಯ ಮುಳುವಾಡ ಏತ ನೀರಾವರಿ ಯೋಜನೆ ಹಂತ 3ರ ಅಡಿಯಲ್ಲಿ ಬರುವ ಹೂವಿನ ಹಿಪ್ಪರಗಿ ಶಾಖ ಕಾಲುವೆಯ ವಿತರಣಾ ಕಾಲುವೆ ನಂ. 1 ರಿಂದ 7ರ ಅಡಿ ಬರುವ ಲ್ಯಾಟರಲ್ ಕಾಲುವೆಯ ಕಾಮಗಾರಿಗಳು ಕಳಪೆಯಾಗಿವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿಯ ಮುಖ್ಯ ಇಂಜಿನಿಯರ್ ಕಚೇರಿ ಬಳಿ ಧರಣಿ ಕೈಗೊಳ್ಳಲಾಗಿದೆ.
ಭಾರತೀಯ ದ್ರಾವಿಡ ದಲಿತ ಸೇನಾ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮೂರು ದಿನ ಪೂರ್ಣಗೊಳಿಸಿತು. ಸರ್ಕಾರದ ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿ ನಿರ್ವಹಿಸಿಲ್ಲ. ಕಳಪೆ ಕಾಮಗಾರಿಯಾಗಿದ್ದು, ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ. ನಿರ್ಮಾಣಗೊಂಡ ವರ್ಷ ಕಳೆಯುವ ಮೊದಲೇ ಎಲ್ಲಾ ಲ್ಯಾಟರಲ್ ಕಾಲುವೆಗಳು ಕಳಪೆ ಕಾಮಗಾರಿಯ ಕಾರಣ ಒಡೆದು ಹೋಗಿವೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ. ಹೀಗಾಗಿ ಕಾಮಗಾರಿಯ ತನಿಖೆ ನಡೆಸಬೇಕು. ಹಾಗೂ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಕಾಲುವೆಗಳನ್ನು ಮರು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ
ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಉಪ ಮುಖ್ಯ ಇಂಜಿನಿಯರ್ ಐ ಎಲ್ ಕಳಸಾ, ತಾಂತ್ರಿಕ ಸಹಾಯಕ ಉಮೇಶ ಭೇಟಿ ನೀಡಿ ಮನವಿ ಸ್ವೀಕರಿಸಿ, ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು.
ಈ ವೇಳೆ ಮಲ್ಲು ಜಾಲಗೇರಿ, ಸೋಮು ಹಟ್ಟಿ, ಯಮನಪ್ಪ ಮಾಯವಂಶಿ, ನಾಮದೇವ ಹೊಸಮನೆ, ಸೋಮರಾಜ ಚೆಲುವಾದಿ, ರಮೇಶ ಹಲ್ಯಾಳ, ರಾಹುಲ ಹೊಸಮನಿ ಇದ್ದರು.
