ಧರ್ಮಸ್ಥಳದಲ್ಲಿ ಸೌಜನ್ಯವೆಂಬ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಕೊಲೆ ಮಾಡಿದ ನರಹಂತಕರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಘಟಕ ದಲಿತ ವಿದ್ಯಾರ್ಥಿ ಪರಿಷತ್(ಡಿವಿಪಿ)ನಿಂದ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಸಂಚಾಲಕ ವಿನೋದ ಇಲಗೇರ ಮಾತನಾಡಿ, “ರಾಜ್ಯದ ಪುಣ್ಯ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ವಾಸವಾಗಿರುವ ಒಂದು ಸಾಮಾನ್ಯ ಬಡ ಕುಟುಂಬದ ಸೌಜನ್ಯ ಎಂಬ ಹೆಣ್ಣುಮಗಳು ಕಾಲೇಜಿನಿಂದ ಮತ್ತೆ ಮನೆಗೆ ಬರಲೇ ಇಲ್ಲ. ಹುಡುಕಾಟದಲ್ಲಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಸೌಜನ್ಯ ಸಿಕ್ಕಿದ್ದು ಹೆಣವಾಗಿ. ಕಾಲೇಜು ಮುಗಿಸಿಕೊಂಡು ಮನೆಗೆ ಬರುವ ದಾರಿ ಮಧ್ಯದಲ್ಲಿ ಆ ಹೆಣ್ಣುಮಗಳನ್ನ ಅಪಹರಿಸಿ ಅತ್ಯಾಚಾರವೆಸಗಿ ಕ್ರೂರವಾಗಿ ಕೊಂದಿರುವ ಘಟನೆ ಆ ನೆಲದಲ್ಲಿ ನಡೆದಿದೆ. ಆ ಘಟನೆಯಿಂದ ಇಡೀ ಧರ್ಮಸ್ಥಳವೇ ಬೆಚ್ಚಿ ಬಿದ್ದಂತಾಗಿತ್ತು. ಇವತ್ತಿಗೆ ಹೆಣ್ಣುಮಗಳು ಕೊಲೆಯಾಗಿ ಹನ್ನೆರೆಡು ವರ್ಷವಾಯಿತು. ಅತ್ಯಾಚಾರ ಮತ್ತು ಕೊಲೆಗೀಡಾದ ಆ ಹೆಣ್ಣುಮಗಳ ಪಾಲಕರು ಹಾಗೂ ಸಂಬಂಧಿಕರು ಹನ್ನೆರೆಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೂ ಹೆಣ್ಣುಮಗಳಿಗೆ ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅದೇ ಊರಿನ ಒಂದು ದೊಡ್ಡ ಕುಟುಂಬದ ವ್ಯಕ್ತಿಗಳು ಈ ಕೃತ್ಯವನ್ನು ಎಸಗಿದ್ದಾರೆಂಬ ಶಂಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸೌಜನ್ಯಳ ಪರ ಹೋರಾಟ ಮಾಡಿದ ಹೋರಾಟಗಾರರೂ ಸಾಕ್ಷಿಯನ್ನು ಒದಗಿಸಿದ್ದಾರೆ ಆದರೂ ಇವತ್ತಿನ ವ್ಯವಸ್ಥೆ ಅವರನ್ನು ಏನೂ ಮಾಡದ ಸ್ಥಿತಿಯಲ್ಲಿದೆ ಎಂಬುದು ವಿಪರ್ಯಾಸದ ಸಂಗತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ʼಮಹಿಳಾ ಸಬಲೀಕರಣದಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯʼ
“ಅತ್ಯಾಚಾರ ಎಸಗಿ ಕೊಲೆಮಾಡಿರು ವ್ಯಕ್ತಿಗಳು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯಶೀಲರಾಗಬೇಕು. ಇಲ್ಲದಿದ್ದರೆ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಸರ್ಕಾಕ್ಕೆ ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ವಿನೋದ್ ಈರಗಾರ, ಕಾರ್ತಿಕ್ ಚಲವಾದಿ, ಮುತ್ತು ಚಲವಾದಿ, ಮುತ್ತುರಾಜ್ ಹರ್ಜನ್, ಗಣೇಶ್ ಮೂಕಲಾಜಿ, ರೋಹಿತ್ ಚಲವಾದಿ, ರವಿಕುಮಾರ್ ಕಲ್ಲಮ್ಮಗೇರಿ, ಪವಿತ್ರ ಹೊಸ್ಮನಿ, ಯಶೋಧ ಚಲವಾದಿ, ಅಕ್ಷತಾ ಪಾಟೀಲ್, ಶರಣಮ್ಮ ಘರ್ಸಂಗಿ, ಪೂಜಾ ಚಿಮ್ಮಲಗಿ, ಅಪ್ಪಾಜಿ ಶಿಂಧೋ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.