ವಿಕಲಚೇತನರು ವಿಶೇಷ ಚೇತನರಾಗಿದ್ದು, ತಮ್ಮ ವಿಕಲತೆ ಕುರಿತು ಕೀಳರಿಮೆ ಭಾವನೆ ಹೊಂದದೆ ಎಂದಿಗೂ ಎದೆಗುಂದದೆ, ಜೀವನದಲ್ಲಿ ಮುನ್ನಡೆಯಬೇಕು ಎಂದು ವಿಜಯಪುರ ಜಿಲ್ಲೆಯ ಸಿಂದಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹರೀಶ ಜಾದವ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಸಹಯೋಗದಲ್ಲಿ ಜರುಗಿದ ವಿಶ್ವ ವಿಕಲಚೇತನರ ದಿನ ಹಾಗೂ ಮಾನವ ಹಕ್ಕುಗಳ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರಾದ ಸ್ಟೀಫನ್ ಹಾಕಿನ್ಸ್, ಪುಟ್ಟರಾಜ ಗವಾಯಿಗಳು ಸೇರಿದಂತೆ ಹಲವಾರು ಗಣ್ಯ ಸಾಧಕರ ಸಾಧನೆಯನ್ನು ನೆನೆದು ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ಭಗವಂತ ಎಲ್ಲರಿಗೂ ಒಂದೊಂದು ಶಕ್ತಿ ಕೊಟ್ಟಿರುತ್ತಾನೆ. ಅದೇ ರೀತಿಯ ವಿಕಲಾಂಗವಾಗಿದ್ದರೂ ಅದಕ್ಕೆ ಪೂರಕವಾಗಿ ಮತ್ತೊಂದು ವಿಶೇಷ ಶಕ್ತಿ ಕೊಟ್ಟಿರುತ್ತಾನೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎನ್.ಹಿರೇಮಠ ಮಾತನಾಡಿ, ವಿಶೇಷಚೇತನರು ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವರದಿ ಓದಿದ್ದೀರಾ? ವಿಜಯಪುರ | ಹಾಳಾಗಿರುವ ತೊಗರಿ ಬೆಳೆಗೆ ಸೂಕ್ತ ಪರಿಹಾರ ಒದಗಿಸಲು ರೈತರ ಒತ್ತಾಯ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ ಇಒ ರಾಮು ಅಗ್ನಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಅಪರ ಸರಕಾರಿ ವಕೀಲ ಬಿ.ಜಿ.ನೆಲ್ಲಗಿ, ಎಸಿಡಿಪಿಒ ಎಸ್.ಎನ್.ಕೋರವಾರ, ಮುತ್ತು ಸಾತಿಹಾಳ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಕಾರ್ಯಕರ್ತೆಯರು, ತಾಲೂಕಿನ ಎಂಆರ್ಡಬ್ಲ್ಯೂ ಹಾಗೂ ವಿಆರ್ಡಬ್ಲ್ಯೂ ಸದಸ್ಯರಿದ್ದರು.