ಆರೋಗ್ಯ ಪೂರ್ಣ ಸಮಾಜಕ್ಕೆ ನಮ್ಮ ದೇಶದ ಸಂವಿಧಾನವೇ ಅಡಿಗಲ್ಲು. ಅದು ಬುದ್ಧನ ಗ್ರಂಥ, ಬಸವಣ್ಣನ ಆತ್ಮ, ಕನಕದಾಸರ ಆಶಯಗಳು, ನಮ್ಮ ಸಂಸ್ಕೃತಿಯ ಬೇರೆ-ಬೇರೆ ಪರಪಂಪರೆಯ ಪ್ರತೀಕ. ಕವಿರಾಜ ಮಾರ್ಗದಿಂದ ಹಿಡಿದು ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಸಂತರ ಸಾಹಿತ್ಯದವರೆಗಿನ ಎಲ್ಲ ಅಂಶಗಳನ್ನು ಸಮಗ್ರವಾಗಿ ನಮ್ಮ ಸಂವಿಧಾನ ಒಳಗೊಂಡಿದೆ. ಹೀಗಾಗಿ ನಮ್ಮ ಸಂವಿಧಾನಕ್ಕೆ ಏನೂ ಮಾಡಲು ಆಗಲ್ಲ ಎಂದು ಮೈಸೂರಿನ ಜನಪರ ಗಾಯಕ ಜನಾರ್ದನ ಹೇಳಿದರು.
ವಿಜಯಪುರ ಪಟ್ಟಣದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ರವಿವಾರ ಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ, ಕವಿ ಪ್ರಕಾಶನ ಮತ್ತು ಚಿತ್ತಾರ ಕಲಾ ಬಳಗಸೇರಿ ವಿವಿಧಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜನಕಲಾ ಸಾಂಸ್ಕೃತಿಕ ಮೇಳ’ದಲ್ಲಿ ಅವರು ಮಾತನಾಡಿದರು.
ಡಾ ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದಡಿ ದೇಶವನ್ನು ಕಟ್ಟಬೇಕೆಂಬ ರಚನೆ ಹೊಂದಿದೆ. ನಮ್ಮ ಸಂವಿಧಾನವು ವಿಶ್ವದ ಸಮೃದ್ಧ ಮತ್ತು ಪ್ರಬುದ್ಧತೆ ಹೊಂದಿದೆ ಎಂದು ಜಗತ್ತಿನ ಅನೇಕರು ಕರೆಯುತ್ತಾರೆ. ಹೀಗೆ ಕರೆದವರು ಹುಚ್ಚರಾ? ಆದರೆ, ನಮ್ಮ ದೇಶದಲ್ಲಿರುವ ಕೆಲವರಿಗೆ ಅದರ ಬಗ್ಗೆ ಅಸಮಾಧಾನವಿದೆ. ಎಲ್ಲಿ ಸಮಾನತೆ ಬಂದರೆ, ತಮ್ಮ ಹಿಡಿತ ತಪ್ಪಲಿದೆ ಎಂಬ ಭಯ ಕೆಲವರನ್ನು ಕಾಡುತ್ತಿದೆ ಎಂದು ತಿಳಿಸಿದರು.
ನಾವು ನೇರವಾಗಿ ದ್ವೇಷ ಬಿಟ್ಟು ದೇಶ ಕಟ್ಟೋಣ ಎಂದು ಹೇಳುತ್ತೇವೆ. ಇದರಲ್ಲಿ ತಪ್ಪೇನಿದೆ? ಎಲ್ಲಿಯವರೆಗೆ, ಯಾರಿಗಾಗಿ ದ್ವೇಷ ಸಾಧಿಸುತ್ತೀರಿ, ನಮಗೆ ಸಮಾನತೆ, ಸೌಹಾರ್ದತೆ, ಶಾಂತಿ ಸಮನ್ವಯ ತತ್ವ ಮತ್ತು ಸಹಬಾಳ್ವೆ ಬೇಕೆಂದು ಕೇಳುವುದು ತಪ್ಪಾ? ಇವೆಲ್ಲವೂ ನಾವು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಹಕ್ಕಿನಡಿ ಕೇಳುತ್ತಿದ್ದೇವೆ ಎಂದು ಹೇಳಿದರು.
“ದಲಿತರು ದಮನಿಯ ಸ್ಥಿತಿಗೆ ತಲುಪಿದಾಗ ಹುಟ್ಟಿದ ಚಳುವಳಿಗೆ ದಲಿತ ಚಳುವಳಿ. ಕೆಲ ವರ್ಷಗಳಿಂದ ದಲಿತ ಚಳುವಳಿ ಮಂಕಾಗಿದೆ. ಇದಕ್ಕೆ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಈಗ ಸಂಘಟನೆಗೆ ಸೇರಿಕೊಳ್ಳುತ್ತಿರುವುದೇ ಕಾರಣ. ಹೀಗಾಗಿ ಅಂಬೇಡ್ಕರ್, ಬಸವಣ್ಣನ ತತ್ವಗಳ ಸ್ಪಷ್ಟತೆ ಇರಬೇಕು. ತಾತ್ವಿಕ ನೆಲೆ ಸ್ಪಷ್ಟವಾಗಿರಬೇಕು ಎಂದು ಜನಾರ್ದನ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಗೆ ಅಂದಯ್ಯ ಅರವಟಗಿಮಠ ಭಾಜನ
ಹಿರಿಯ ಪತ್ರಕರ್ತ ಅನಿಲ ಹೊಸಮನಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದಾವಣಗೆರೆಯ ಬಿ .ಶ್ರೀನಿವಾಸ, ಕಲಬುರಗಿಯ ಕನ್ನಡ ಮತ್ತು ಸಂಸ್ಕೃತ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಈ ಕಾರ್ಯಕ್ರಮವನ್ನು ಬಸ್ಸಮ್ಮ ಈರಪ್ಪ ನಡುವಿನಮನಿ, ಆದಮ್ಮ ಚಂದ್ರಪ್ಪ ಖಾದ್ರಿ, ಸಾವಿತ್ರಿಬಾಯಿ ನೀಡೋನಿ, ರಮಾಬಾಯಿ ಸಂಗಪ್ಪ ಬೆಳ್ಳನವರ, ಪದ್ಮಾವತಿ ಸಂಗಪ್ಪ ವಾಗಮೊರೆ ಅವರು ಡಾ. ಬಿಆರ್ ಅಂಬೇಡ್ಕರ್ ಕುರಿತು ಹಾಡುಗಳ ಗಾಯನದ ಮೂಲಕ ಉದ್ಘಾಟಿಸಿದರು.
ಲಡಾಯಿ ಪ್ರಕಾಶನದ ಮುಖಂಡರಾದ ಬಸವರಾಜ ಸೂಳಿಬಾವಿ, ಜೆ.ಎಸ್.ಪಾಟೀಲ್, ತುಕಾರಾಂ ಚಂಚಲಕರ, ಪ್ರಭುಗೌಡ ಪಾಟೀಲ, ಚನ್ನು ಕಟ್ಟಿಮನಿ, ನಾಗರಾಜ ಲಂಬು, ಪರಶುರಾಮ ಲಂಬು, ಚಂದ್ರಕಾಂತ ಶಿಂಗೆ, ಅಶೋಕ್ ಚಲವಾದಿ ಇತರರು ಉಪಸ್ಥಿತರಿದ್ದರು.