ಕುಡಿಯುವ ನೀರಿಗಾಗಿ ಅಂಬೇಡ್ಕರ್ ಕೈಗೊಂಡ ಮಹಾಡ್ ಸತ್ಯಾಗ್ರಹ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿಯಾಗಿದ್ದು, 1927ರ ಮಾರ್ಚ್ 20ರಂದು ಚವದಾರ್ ಕೆರೆಯ ನೀರನ್ನು ಮುಟ್ಟಿ ಕುಡಿಯುವುದರ ಮೂಲಕ ಆರಂಭಿಸಿ ಚಳವಳಿಯ ನೆನಪೇ ಮಹಾಡ್ ಸತ್ಯಾಗ್ರಹ.
ವಿಜಯಪುರ ಜಿಲ್ಲೆಯ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯಿಂದ ಏರ್ಪಡಿಸಿದ ಶೋಷಿತರ ಸಂಘರ್ಷ ದಿನಾಚರಣೆಯ ನಿಮಿತ್ಯವಾಗಿ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಪ್ರೊ. ಬಸವರಾಜ ಜಾಲವಾದಿ ಮುಖ್ಯ ಅತಿಥಿಯಾಗಿ ಮಾತನಾಡಿ, “ಅಂಬೇಡ್ಕರ್ ಅವರು ಶಿಕ್ಷಣಕ್ಕೂ ಅಷ್ಟೇ ಮಹತ್ವ ನೀಡಿದ್ದರು. ಹಾಗಾಗಿ ಶಿಕ್ಷಣ ಯಾವುದೇ ವ್ಯಕ್ತಿಗೂ ಹೊರೆಯಾಗಬಾರದು. ಎಲ್ಲರ ಕೈಗೆ ಎಟಕುವಂತಿರಬೇಕು. ಉನ್ನತ ಶಿಕ್ಷಣವೂ ಕೂಡ ದುರ್ಬಲ ವರ್ಗಗಳಿಗೆ ಕಡಿಮೆ ಖರ್ಚಿನಲ್ಲಿ ದೊರೆಯುವಂತಾಗಬೇಕು” ಎಂದು ಹೇಳಿದರು.
“ಅಸಮಾನ ಮಟ್ಟದಲ್ಲಿರುವ ಮಕ್ಕಳನ್ನು ಸಮಾನ ಮಟ್ಟಕ್ಕೆ ತರುವುದು ನಮ್ಮ ಧ್ಯೇಯವಾಗಿದ್ದಲ್ಲಿ ನಾವು ಅಸಮಾನ ಮಾನದಂಡಗಳನ್ನು ಬಳಸಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗುತ್ತದೆ. ದುರ್ಬಲ ವರ್ಗಗಳಿಗೆ, ಬಡವರಿಗೆ, ದೀನದಲಿತರ ಶೈಕ್ಷಣಿಕ ಸಮಾನತೆಯನ್ನು ನಾವು ಸಾಧಿಸಬೇಕೆಂದಾದರೆ ವಿವಿಧ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಡಲೇಬೇಕು. ಹೀಗಾಗದೆ ಹೋದರೆ ಭಾರತದಲ್ಲಿ ಶೈಕ್ಷಣಿಕ ಸಮಾನತೆಯನ್ನು ತರುವುದು ಅಸಾಧ್ಯವಾಗುತ್ತದೆ” ಎಂದರು.

“10 ಎಂಬ ಅಂಕಿಯನ್ನು ಸಮಾನ ಸಂಖ್ಯೆಯಾದ 2 ರಿಂದ ಗುಣಿಸಿದರೆ ನಾವು ಸಮಾನವಾದ ಉತ್ತರವನ್ನು ಬಯಸಲು ಸಾಧ್ಯವಾಗುವುದಿಲ್ಲ. ಸಮಾನ ಉತ್ತರವನ್ನು ಬಯಸುವುದು ನಮ್ಮ ಧ್ಯೇಯವಾಗಿದ್ದಲ್ಲಿ ನಾವು ಅಸಮಾನ ಅಂಕಿಯಿಂದಲೇ ಆ ಸಂಖ್ಯೆಗಳನ್ನು ಗುಣಿಸಬೇಕಾಗುತ್ತದೆ. ಆಗ ಮಾತ್ರ ನಾವು ಸಮಾನ ಉತ್ತರವನ್ನು ಕಾಣಲು ಸಾಧ್ಯ” ಎಂದು ಸಲಹೆ ನೀಡಿದರು.
ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ ಜ್ಯೋತಿ ಬೆಳಗಿಸಿ ಮಾತನಾಡಿ, “ಸಮಸ್ತ ಲಿಂಗಾಯತರು ಅಂಬೇಡ್ಕರ್ ಅವರನ್ನು ಬರಮಾಡಿಕೊಳ್ಳಿ, ಒಪ್ಪಿಕೊಳ್ಳಿ, ಅಪ್ಪಿಕೊಳ್ಳಿ. ಇಲ್ಲದಿದ್ದರೆ ಅಪಾಯ ಕಾದಿದೆಯೆಂಬ ಆತಂಕ ಹೊರಹಾಕಿ. ದಲಿತರಾದವರು ಬಸವಣ್ಣನನ್ನು ಬರಮಾಡಿಕೊಂಡು ಮುಂದುವರೆದಾಗ ಮಾತ್ರ ರಾಜಕೀಯ ಅಧಿಕಾರ ನಿಮ್ಮದಾಗುತ್ತದೆ. ನಾವೆಲ್ಲರೂ 12 ನೇ ಶತಮಾನದ ಬಂಧು ಬಾಂಧವರು” ಎಂದು ನೆನಪಿಸಿದರು.
ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ(ಗಣಿಯಾರ) ಮಾತನಾಡಿ, “ಅಸ್ಪೃಶ್ಯತೆ ಆಚರಣೆ ಎಂಥ ದುಷ್ಟಕೂಟದ ಸಂಪ್ರದಾಯವೆಂದರೆ ಈ ದೇಶದ ಗ್ರಾಮೀಣ ಪ್ರದೇಶದ ಮುಸಲ್ಮಾನನೂ ಕೂಡ, ಇದು ಈ ಮಣ್ಣಿನ ಸಂಸ್ಕೃತಿಯೇನೋ ಎಂಬಂತೆ ಇದರ ಆಚರಣೆ ಮಾಡುವಂತಾಗಿದೆ. ಇದಕ್ಕೆ ಕಾರಣ ಪುರೋಹಿತಶಾಹಿಯೆಂದೇ ಬೆರಳು ಮಾಡಬೇಕಾಗುತ್ತದೆ” ಎಂದರು.

ಹಿರಿಯ ಪಾತ್ರಕರ್ತ ಅನಿಲ ಹೊಸಮನಿ ಮಾತನಾಡಿ, “ಮುಂಬೈ ಶಾಸನ ಸಭೆ 1923 ಹಾಗೂ 1927ರಲ್ಲಿ ಎರಡು ಬಾರಿ ಪಾಸ್ ಮಾಡಿದ ನಿರ್ಣಯ ಕಾಗದದ ಮೇಲೆ ಉಳಿದದ್ದರಿಂದ ಅಸ್ಪೃಶ್ಯತೆ ಹಾಗೆಯೇ ಮುಂದುವರೆದಿತ್ತು. ಚವದಾರ್ ಕರೆ ಪ್ರವೇಶಕ್ಕೆ ಸವರ್ಣ ಹಿಂದೂಗಳಿಂದ ಪ್ರಬಲ ಪ್ರತಿರೋಧ ಉಂಟಾಗಿದ್ದರಿಂದ ಸಹಜವಾಗಿ ಮುಂಚೂಣಿ ನಾಯಕನ ಸ್ಥಾನ ತುಂಬಿ ಚವದಾರ್ ಕೆರೆ ಚಳವಳಿಯನ್ನು ನಡೆಸಿಕೊಟ್ಟು ಬಾಬಾಸಾಹೇಬರು ಮಾದರಿಯಾದರು” ಎಂದರು.
ಬೆಳಗಾವಿ ವಿಭಾಗದ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, “ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಚವದಾರ ಕೆರೆಯನ್ನು ಪ್ರವೇಶಿಸುವುದರ ಮೂಲಕ ಆರಂಭವಾದದ್ದು. ಈ ಐತಿಹಾಸಿಕ ಪ್ರೇರಣೆ ಪಡೆದ ದುರ್ಬಲ ವರ್ಗಗಳು ಇಂದು ಸ್ವಾಭಿಮಾನದಿಂದ ಬದುಕುವಂತಾಗಿದೆ. ಇದೆಲ್ಲದಕ್ಕೂ ಪ್ರೇರಣೆ ನಮಗೆ ಬಾಬಾಸಾಹೇಬರು” ಎಂದು ಅಭಿಮಾನದಿಂದ ಹೇಳಿಕೊಂಡರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಬಡಿಗೇರ್ ಮಾತನಾಡಿ, “ಹೋರಾಟದ ಮೂಲಕ ಮೀಸಲಾತಿ ಪಡೆದವರೆಂದರೆ ದಲಿತರು ಮಾತ್ರ. ಅಂಬೇಡ್ಕರ್ ಕುರಿತು ಲವಲೇಶವೂ ಹರಿಯದ ಕೆಲ ಸಮುದಾಯಗಳು ಮೀಸಾಲಾತಿ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಬಂಜಾರಾ ಸಮುದಾಯದ ಮಹಿಳೆ ಮೀನು ಕದ್ದಳೆಂದು ಥಳಿಸುತ್ತಿರುವಾಗ ಈ ಹಿಂದೂ ಶೂರರು ಅಲ್ಲಿಗೆ ಹೋಗಿದ್ದಾರೆಯೇ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಮಲ್ಪೆ ಮಹಿಳೆ ಮೇಲೆ ಹಲ್ಲೆ; ಘಟನೆ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?
ರಾಜ್ಯ ಸಂಘಟನಾ ಸಂಚಾಲಕಿ ಪ್ರತಿಭಾ ಹೊಸಮನಿ ಮಾತನಾಡಿ, “ಡಾ. ಬಾಬ ಸಾಹೇಬ್ ಅಂಬೇಡ್ಕರ್ ಅವರು ದೇಶದಲ್ಲಿ ಅಸ್ಪೃಶ್ಯತೆ ವಿರುದ್ಧ ಸತತವಾಗಿ ಹೋರಾಟ ಮಾಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಈವರೆಗೂ ಅಸ್ಪೃಶ್ಯತೆ ಕೊನೆಯಾಗಿಲ್ಲ. ಹೆಣ್ಣನ್ನು ಎರಡನೇ ದರ್ಜೆ ಪ್ರಜೆಯಾಗಿ ನೋಡುತ್ತಿರುವುದು ವಿಪರ್ಯಾಸ. ಸ್ತ್ರೀ ಸ್ವತಂತ್ರ ಕೊಟ್ಟಿರುವ ಏಕೈಕ ವ್ಯಕ್ತಿಯೆಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್. ಅವರ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಅರ್ಥ ಮಾಡಿಸುವುದರ ಮೂಲಕ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ” ಎಂದರು.
ವೇದಿಕೆ ಮೇಲೆ ವಕೀಲರಾದ ನಾಗರಾಜ, ಸವಿತಾ ವಗ್ಗರ, ನಾಗರಾಜ ಲಂಬು, ಸವಿತಾ ಸಿದ್ಧಾರ್ಥ ಸಿ ಎಂ ಹಾಗೂ ಇಸ ಹಾಜರಿದ್ದರು. ಸಂಜು ಹಾಗೂ ಸವಿತಾ ತಂಡ ಕ್ರಾಂತಿಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಿದರು. ಶಿವು ಕಾರ್ಯ ನಿರ್ವಹಿಸಿದರು.
