ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಡಿ ಇದ್ದ ಬಸವನ ಬಾಗೇವಾಡಿಯನ್ನು ಬೇರ್ಪಡಿಸಿ ಪ್ರತ್ಯೇಕ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಅನುಷ್ಟಾನಕ್ಕೆ ತಂದಿದೆ. ಇದರ ಅಡಿಯಲ್ಲಿ ಉಳಿದ ಶರಣರ ಕ್ಷೇತ್ರಗಳನ್ನು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಸೇರ್ಪಡೆ ಮಾಡಿ ಶರಣರ ಜೀವನ ಚರಿತ್ರೆ ಹಾಗೂ ಶರಣರ ಕುರುಹುಗಳನ್ನು ಉಳಿಸಲು ಸ್ಮಾರಕಗಳನ್ನು ನಿರ್ಮಿಸುವುದರೊಂದಿಗೆ ಸಂಪೂರ್ಣ ಅಭಿವೃದ್ಧಿ ಪಡಿಸಬೇಕೆಂದು ಇಂಗಳೇಶ್ವರ ಗ್ರಾಮದ ವಿಶ್ವಗುರು ಬಸವ ಮಾತಾ ಮಾದಲಾಂಬಿಕೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ರೈತ ಮುಖಂಡ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಿಜಯಪುರ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸವನ ಬಾಗೇವಾಡಿ ನೂತನ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಬಸವ ಜನ್ಮಸ್ಥಳ ಇಂಗಳೇಶ್ವರ, ಹೋರಿಮಟ್ಟಿ ಗುಡ್ಡ, ಹಡಪದ ಅಪ್ಪಣ್ಣ ಜನಿಸಿದ ಮಸಬಿನಾಳ, ಲಿಂಗಮ್ಮಳ ಜನ್ಮಸ್ಥಳ ದೇಗಿನಾಳ, ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರ ಹಿಪ್ಪರಗಿ, ನುಲಿಯ ಚಂದಯ್ಯನವರ ಜನ್ಮಸ್ಥಳ ಶಿವಣಗಿ, ನೀಲಮ್ಮಳ ಐಕ್ಯಸ್ಥಳ ತಂಗಡಗಿ ಇವುಗಳನ್ನು ಮಾತ್ರ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರ್ಪಡೆಗೊಳಿಸಲಾಗಿದೆ. ಆದರೆ ಇನ್ನೂ ಜಿಲ್ಲೆಯಲ್ಲಿ ಹಲವಾರು ಶರಣರು ಜನಿಸಿದ ಕ್ಷೇತ್ರಗಳಿದ್ದು,ಇವುಗಳನ್ನು ಸರ್ಕಾರದ ಗಣನೆಗೆ ತೆಗೆದುಕೊಂಡಿಲ್ಲ ಎಂದು ದೂರಿದರು.
ಮುದ್ದೇಬಿಹಾಳ ತಾಲೂಕಿನ ಬಾವೂರಬೊಮ್ಮಯ್ಯನ ಜನ್ಮಸ್ಥಳ, ಸಿಂದಗಿ ತಾಲೂಕಿನ ಚಿಮ್ಮಲಗಿ ಚಂದಿಮರಸರು, ನಾಗರಹಳ್ಳಿಯ ಗೊಲ್ಲಾಳೇಶ್ವರ ದೇವಸ್ಥಾನ,ಲಕ್ಕಮ್ಮಳಬೈರವಾಡಗಿ, ಅಗ್ರಹಾರಗಳಾದ ಮುತ್ತಗಿ, ಮನಗೂಳಿ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಇನ್ನುಳಿದ ಶರಣರ ಕ್ಷೇತ್ರಗಳನ್ನು ಗುರುತಿಸಿ ಅವುಗಳನ್ನು ಕೂಡ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಬಳ್ಳಾರಿ | ಅಂಬೇಡ್ಕರ್ಗೆ ಅವಮಾನ: ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ
ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಸ್ಥಾಪಿಸುವುದು, ಪ್ರಾಥಮಿಕ ಆರೊಗ್ಯ ಕೇಂದ್ರ ಮಂಜೂರು ಮಾಡಿಸುವುದು, ಬಸ್ ನಿಲ್ದಾಣ ಮಂಜೂರು ಮಾಡಿಸುವುದು, ಕ್ರೀಡಾಂಗಣ ನಿರ್ಮಿಸುವುದು, ಬಸವಣ್ಣನವರು ಈಜಾಡಿದ ಬಸವನ ಬಾವಿಯನ್ನು ಅಭಿವೃದ್ಧಿಪಡಿಸುವುದು, ಗ್ರಾಮದಲ್ಲಿಯ ಚಾಲುಕ್ಯರ ಕಾಲದ ಶ್ರೀಮನ್ ನಾರಾಯಣ ದೇವಸ್ಥಾನ ಜೀರ್ಣೋದ್ದಾರ ಮಾಡುವುದು, ರೇವಣಸಿದ್ದೇಶ್ವರ ಬೆಟ್ಟದ ಮೇಲೆ ಎಲ್ಲ ಶರಣರ ಮೂರ್ತಿಗಳನ್ನು ಸ್ಥಾಪಿಸುವುದು ಹಾಗೂ ಸುಂದರ ಉದ್ಯಾನವನ ನಿರ್ಮಾಣ ಮಾಡುವುದು ಸೇರಿದಂತೆ ಇಂಗಳೇಶ್ವರ ಗ್ರಾಮವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿ ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸಬೇಕೆಂದು ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ದತ್ತಾತ್ರೆಯ ಕುಲಕರ್ಣಿ, ಭೀಮರಾಯ ತಾಳಿಕೋಟಿ, ಸಾಯಿನಾಥ ಪಾಟೀಲ ಇದ್ದರು.
