“ಸ್ತ್ರೀಯರ ಮೇಲೆ ದಿನೇ ದಿನೇ ಹಿಂಸೆ, ಕ್ರೌರ್ಯ, ದೌರ್ಜನ್ಯ, ಅಪರಾಧಗಳು ಹೆಚ್ಚಾಗುತ್ತಿವೆ. ಹೆಣ್ಣು ಹುಟ್ಟಿನಿಂದ ಮಸಣದವರೆಗೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ” ಎಂದು ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ಎಂ.ಎನ್. ಮಂಜುಳಾ ಹೇಳಿದರು.
ವಿಜಯಪುರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
“ಸಾಂಸ್ಕೃತಿಕ ಅಧಃಪತನದಿಂದ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಇವೆಲ್ಲದರ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅಪರಾಧಗಳು ಹೆಚ್ಚುತ್ತಿವೆ. ಇಂದು ಎಲ್ಲಾ ಕ್ಷೇತ್ರದ ಹೆಣ್ಣು ಮಕ್ಕಳು ಸಂಘಟಿತರಾಗಬೇಕು, ಶೋಷಣೆ ರಹಿತ ಸಮಾಜ ಕಟ್ಟುವ ಗುರಿಯೊಂದಿಗೆ ಪುರುಷರ ಸಮಸಮವಾಗಿ ಮುನ್ನಡೆಯಬೇಕು. ಸಮಾಜದ ಎಲ್ಲಾ ಮಹಿಳೆಯರು ಪ್ರಜಾತಾಂತ್ರಿಕ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾ ಮಹಿಳೆ ಅಬಲೆಯಲ್ಲ ಸಬಲೆ” ಎಂದು ಹೇಳಿದರು.
ಎಸ್ಯುಸಿಐ (ಸಿ) ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ಡಾ.ಸುನೀತ್ ಕುಮಾರ್ ಟಿ ಎಸ್ ಮಾತನಾಡಿ, “ನಮ್ಮ ಸಮಾಜದಲ್ಲಿ ಪುರುಷ ಪ್ರಧಾನ ಮನೋವಭಾವ ಜೀವಂತವಾಗಿರುವುದರಿಂದ ಹೆಜ್ಜೆ ಹೆಜ್ಜೆಗೂ ಮಹಿಳೆಯರು ದ್ವಿತೀಯ ದರ್ಜೆಯ ಪ್ರಜೆಯಾಗಿ ಪರಿಗಣಿಸ್ಪಲಡುತ್ತಿದ್ದಾರೆ. ಈ ಪುರುಷ ಪ್ರಧಾನ ಮನೋಭಾವ ಜೀವಂತ ಇರುವವರೆಗೂ ಹೆಣ್ಣು ಮಕ್ಕಳಿಗೆ ಸಮಾನತೆ ಎನ್ನುವುದು ಕನಸಿನ ಮಾತು. ಹಾಗಾಗಿ ಇದನ್ನು ತೊಡೆದು ಹಾಕುವಲ್ಲಿ ವೈಚಾರಿಕ, ಸಾಂಸ್ಕೃತಿಕ ಹೋರಾಟ ಬೆಳೆಯಬೇಕು ಹಾಗೂ ಸಮಾನತೆಯ ಸಮಾಜ ಸ್ಥಾಪಿಸಲು ಎಐಎಮ್ಎಸ್ಎಸ್ ಸಜ್ಜಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಬಾಳಮ್ಮ ಕೊಂಡಗೂಳಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಸಮ್ಮೇಳನದಲ್ಲಿ ಚುನಾಯಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಗೀತಾ ಹೆಚ್, ಕಾರ್ಯದಶಿಯಾಗಿ ಶಿವಬಾಳಮ್ಮ ಕೊಂಡಗೂಳಿ, ಜಂಟಿ ಕಾರ್ಯದರ್ಶಿಯಾಗಿ ಶಿವರಂಜನಿ ಎಸ್.ಬಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಬೀನಾ.ಮಹದೇವಿ, ಗಂಗಾ ಜಾಲವಾದ, ಸ್ಥಿತಾ, ಗೀತಾ ಹಿರೇಮಠ, ಸಾನಿಯಾ, ವಿದ್ಯಾ, ಯಶೋಧ, ಚಂದ್ರವ್ವ, ಕಾವೇರಿ ಹಾಗೂ ಅಕ್ಷತಾ ಹಟ್ಟಿ, ಸವಿತಾ ತೆಗ್ಗಿ,ಶಂಕರಮ್ಮ ದೇಸಾಯಿ, ಸುಷ್ಮಾ ಹಾಗೂ 20 ಕೌನ್ಸಿಲ್ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಸಮ್ಮೇಳನದಲ್ಲಿ ಉದ್ಯೋಗಸ್ಥ ಮಹಿಳೆಯರು ಗೃಹಿಣಿಯರು, ಕಾರ್ಮಿಕ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರು ಭಾಗವಹಿಸಿದ್ದರು.
