ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಜನಾಂದೋಲನ ಪ್ರತಿಭಟನೆಯನ್ನು ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ವಿಜಯಪುರದಲ್ಲಿ ನಡೆಸಲಾಯಿತು.
ಡಾ ಬಿ ಆರ್ ಅಂಬೇಡ್ಕರ್ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳು ಕಚೇರಿಗೆ ತೆರಳಿ ನಂತರ ಅಪರ ಜಿಲ್ಲಾಧಿಕಾರಿಗಳು ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಮುಖಂಡ ಮಂಜುನಾಥ ಕಟ್ಟಿಮನಿ ಮಾತನಾಡಿ, ಭಾರತೀಯರಾದ ನಾವು ಸಂವಿಧಾನವನ್ನು ಅರ್ಪಿಸಿಕೊಂಡು ಎಪ್ಪತ್ತೈದು ವರ್ಷಗಳು ಸವಿಸಿದ್ದೇವೆ. ಸಂವಿಧಾನದ ಪ್ರಯುಕ್ತ ಸಾವಿರಾರು ವರ್ಷಗಳು ಅನುಭವಿಸಿದ ಪುರೋಹಿತಶಾಹಿ ಮತ್ತು ಮನು ಧರ್ಮಶಾಸ್ತ್ರಗಳ ಶೋಷಣೆಯಿಂದ ಮುಕ್ತಿ ಪಡೆಯುವಂತಾಯಿತು. ಇಂದು ಪ್ರಜಾಪ್ರಭುತ್ವದ ಆಶಯಗಳು ಜಾರಿಗೆ ಬಂದಿದ್ದರೂ, ಸ್ವಾತಂತ್ರ್ಯ, ಸಮಾನತೆ, ಭ್ರಾತತ್ವದ ಅರಿವೇ ಇಲ್ಲದೆ ದೇಶದ ಕೋಟ್ಯಂತರ ದಲಿತರು, ತಳಸಮುದಾಯಗಳು, ಆದಿವಾಸಿಗಳು, ಅಲೆಮಾರಿಗಳು ಈ ಸಮಾಜದಲ್ಲಿ ಅಭಿವೃದ್ಧಿ ಕಾಣದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಮತ್ತು ಆಡಳಿತಾರೂಢ ಸರ್ಕಾರಗಳು ಈ ಸಮುದಾಯಗಳ ಸಾರ್ವಭೌಮತ್ವವನ್ನು ಕಾಪಾಡಬೇಕಾಗಿರುವುದು ಇವರುಗಳ ಆದ್ಯ ಕರ್ತವ್ಯವಾಗಬೇಕಿತ್ತು. ಆದರೆ, ಅದಾಗುತ್ತಿಲ್ಲ ಎಂದು ತಿಳಿಸಿದರು.
ಪ್ರಜಾಪ್ರಭುತ್ವವೆಂದರೆ, ಚುನಾವಣೆಗಳಲ್ಲಿ ಸ್ಪರ್ಧಿಸುವುದು, ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿಯಾಗುವ ಪ್ರಕ್ರಿಯೆ ಅಲ್ಲ ಸಮಾಜದ ನಾಗರಿಕರ ಸಮಗ್ರ ಅಭಿವೃದ್ಧಿ, ಅದರ ಜೀವನಕ್ರಮ ಮತ್ತು ಹಿತಾಸಕ್ತಿಗಳನ್ನು ಕಾಪಾಡುವುದು. ಸಾಮಾಜಿಕ ನ್ಯಾಯ ಮಾನವ ಹಕ್ಕುಗಳು ದೊರೆಯದೆ ಇರುವ ಅವಮಾನಿತ, ಶೋಷಿತ ಸಮುದಾಯಗಳ ಬಗ್ಗೆ ಸಂಸತ್ತು, ಶಾಸನ ಸಭೆಗಳಲ್ಲಿ ಚರ್ಚಿಸಿ, ಅಗತ್ಯ ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರುವುದು. ಆದರೆ ಅಧಿಕಾರಕ್ಕೆ ಬರುವ ಸರ್ಕಾರಗಳು, ಸಾಮಾಜಿಕ ನಾಯ್ಕ, ಅಸ್ಲೃಶ್ಯತೆ, ಜಾತಿ ತಾರತಮ್ಮ, ಅಸಮಾನತೆಗಳನ್ನು ಹೋಗಲಾಡಿಸಲು ಯಾವುದೇ ರೀತಿ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಜನರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಕನಿಷ್ಠ ಅವಕಾಶಗಳಿಲ್ಲದೆ ಜೀವನ ಸಾಗುಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇದನ್ನು ಓದಿದ್ದೀರಾ? ವಿಜಯಪುರ | ಅಂಗಡಗೇರಿ ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸಿ: ರೈತ ಸಂಘದ ಯುವ ಸಂಚಾಲಕ ಸಿದ್ದನಗೌಡ ರೆಡ್ಡಿ ಆಗ್ರಹ
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕರಾದ ಬಾಲಾಜಿ ಕಾಂಬ್ಳೆ, ಯುವ ಹೋರಾಟಗಾರರಾದ ದಾವೂದ್ ಬಂಟನೂರ, ರಮೇಶ್ ಹೊಸಮನಿ, ರಾಜು ಮಶಿಬಿನಾಳ, ಪ್ರಭು ಮಡಿಕೇಶ್ವರ, ಮರೆಪ್ಪ ಛಲವಾದಿ, ಜುಮ್ಮಣ್ಣ ಕಟ್ಟಿಮನಿ, ರಮೇಶ್ ಬಂಗಾರಟ್ಟಿ ,ಲಕ್ಷ್ಮಣ್ ಕಟ್ಟಿಮನಿ ,ಮಲ್ಲು ಕೇಶಾಪೂರ, ಬಸವರಾಜ ಸಿದ್ದಾಪುರ ,ಅಶೋಕ್ ಉಪ್ಪೆರಿ ,ಲಕ್ಷ್ಮಣ್ ಛಲವಾದಿ ಸೇರಿದಂತೆ ಹಲವು ಮಂದಿ ಯುವಕರು ಭಾಗವಹಿಸಿದ್ದರು.
