“ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಪಂಚತಂತ್ರ ಕಾರ್ಯಕ್ರಮವನ್ನು ಜಾರಿಗೆ ತರಲಿದ್ದೇವೆ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗದಂತೆ ಕ್ರಮ ಜರುಗಿಸುತ್ತೇವೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ಜಾಗೃತ ಕರ್ನಾಟಕ ವತಿಯಿಂದ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ’ನಮ್ಮ ಕರ್ನಾಟಕ ನಮ್ಮ ಮಾದರಿ- ಚಿಂತನಾ ಸಮಾವೇಶ’ದಲ್ಲಿ ’ನಗರ ಗ್ರಾಮೀಣ ಸಮತೋಲಿತ ಅಭಿವೃದ್ಧಿ’ ವಿಷಯ ಕುರಿತು ಅವರು ಮಾತನಾಡಿದರು.
ಸಭಿಕರೊಂದಿಗೆ ಸಂವಾದ ನಡೆಸಿದ ಅವರು ಅಧಿಕಾರಿಗಳಿಂದ ಆಗುತ್ತಿರುವ ವಿಳಂಬಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಾಗ ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಕುರಿತು ಬಿಚ್ಚಿಟ್ಟರು.
“ಈ ವ್ಯವಸ್ಥೆ ಹದಗೆಟ್ಟಿದೆ. ಎರಡು ಇಲಾಖೆಯ ಸಚಿವರಾಗಿದ್ದೀರಿ, ಹೇಗೆ ನಿಭಾಯಿಸುತ್ತೀರಿ ಎಂದು ಕೇಳುತ್ತಾರೆ. ಪಂಚತಂತ್ರ 2.2 ಹೊಸ ಕಾರ್ಯಕ್ರಮ ತರುತ್ತಿದ್ದೇವೆ. ಆನ್ಲೈನ್ ಮೂಲಕ ಎಲ್ಲವನ್ನೂ ಗಮನಿಸಲಾಗುತ್ತದೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುತ್ತೇವೆ. ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಲು ಇನ್ನು ಎರಡು ಮೂರು ತಿಂಗಳು ಬೇಕಾಗುತ್ತದೆ” ಎಂದರು.
“ಪಿಡಿಒಗಳು ಶಾಸಕರ ಮಾತುಗಳನ್ನೇ ಕೇಳದ ಉದಾಹರಣೆಗಳಿವೆ. ನಮ್ಮ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡುತ್ತೇನೆ. ನೇರವಾಗಿ ಆರ್ಡಿಪಿಆರ್ಗೆ ಜನರು ದೂರು ನೀಡುವ ಅವಕಾಶ ಕಲ್ಪಿಸುತ್ತಿದ್ದೇವೆ” ಎಂದು ತಮ್ಮ ಕಾರ್ಯಕ್ರಮಗಳನ್ನು ವಿವರಿಸಿದರು.
ಅಭಿವೃದ್ಧಿಗಾಗಿ ಪ್ರಾದೇಶಿಕ ಮಂಡಳಿಗಳನ್ನು ಮಾಡಿದ್ದಾರೆ. ಆದರೂ ಅಭಿವೃದ್ಧಿ ತರಲಿಕ್ಕೆ ಆಗುತ್ತಿಲ್ಲ. ಸರಿಯಾದ ಪ್ಲಾನಿಂಗ್ಗಳು ಇಲ್ಲವಾಗಿವೆ. ಅತ್ಯಂತ ಹಿಂದುಳಿದ ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಕಡಿಮೆ ಸಂಖ್ಯೆಯಲ್ಲಿ ದಕ್ಷಿಣದಲ್ಲಿ ಇವೆ. ಬೇರೆ ಮಟ್ಟದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳನ್ನು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
‘ಕೂಸಿನ ಮನೆ’ ಕಾರ್ಯಕ್ರಮ ರೂಪಿಸಿದ್ದೇವೆ. ಇವುಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಡಬೇಕು ಎನ್ನುತ್ತಾರೆ. ಆದರೆ ನಾವು ಈ ಕಾರ್ಯಕ್ರಮವನ್ನು ಮಾಡದಿದ್ದರೆ ನಮ್ಮ ಇಲಾಖೆಯಲ್ಲಿ ಮಹಿಳೆಯರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲ. ಬಂಡವಾಳ ಹೂಡಿಕೆ ವಿಕೇಂದ್ರೀಕರಣ ಆಗಬೇಕಿದೆ. ಪ್ರಾದೇಶಿಕವಾಗಿ ಬಂಡವಾಳ ಹೂಡಿಕೆಗೆ ವಾತಾವರಣ ನಿರ್ಮಿಸಬೇಕು. ನಿರ್ದಿಷ್ಟ ಯೋಜನೆಗಳನ್ನು ತರಬೇಕಿದೆ ಎಂದು ತಿಳಿಸಿದರು.
ಎಲ್ಲ ಪ್ರದೇಶದಲ್ಲಿನ ವಿಶಿಷ್ಟತೆಯನ್ನು ಬಳಸಿಕೊಂಡು ಪ್ರಗತಿಯನ್ನು ಕಾಣಬಹುದು. ಭೌಗೋಳಿಕವಾಗಿ ಏನು ಮಾಡಬಹುದು ಎಂಬುದನ್ನು ನೋಡಬಹುದು. ಪ್ರಾದೇಶಿಕ ಅಭಿವೃದ್ಧಿ ಮುಖ್ಯ. ಜಿಲ್ಲಾ ಮತ್ತು ಪ್ರಾದೇಶಿಕ ನಿರ್ದಿಷ್ಟ ಕಾರ್ಯಕ್ರಮಗಳು ಇಲ್ಲವಾದರೆ ಗ್ರಾಮ ಮತ್ತು ನಗರಗಳ ನಡುವೆ ಅಂತರ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾಷಾ ನೀತಿಯ ಕುರಿತು ಪ್ರೇಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ಪಕ್ಷ, ನಮ್ಮ ಸರ್ಕಾರ ಕನ್ನಡದ ಅಸ್ಮಿತೆಗಾಗಿ ದುಡಿಯುತ್ತಿದೆ. ಕನ್ನಡದ ಅಸ್ಮಿತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವುದರಲ್ಲಿ ಯಾವುದೇ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.