ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿಯೋಗ ಮಂಗಳೂರು ನೂತನ ಕಮೀಷನರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯವನ್ನು ಕಾಪಾಡುವ ಸಲುವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಮೌಲ್ಯಾಧಾರಿತ ರಾಜಕೀಯ ಮತ್ತು ಪ್ರಜಾ ಕಲ್ಯಾಣ ಎಂಬ ಧ್ಯೇಯವನ್ನು ಹೊಂದಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಯಾವುದೇ ರೀತಿಯ ಮತ ಧರ್ಮಗಳ ಆಧಾರದಲ್ಲಿ ವಿಭಜಿಸುವ ಮತೀಯತೆಯನ್ನು ಉದ್ರೇಕಿಸುವ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿರುವ ಚಟುವಟಿಕೆಗಳನ್ನು ವಿರೋಧಿಸುತ್ತದೆ. ಹಾಗಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಹಲವು ಬೇಡಿಕೆಗಳನ್ನು ಮಂಗಳೂರು ನೂತನ ಕಮೀಷನರ್ ಹಾಗೂ ಜಿಲ್ಲಾ ಎಸ್.ಪಿ ಅವರ ಗಮನಕ್ಕೆ ತರಲಾಗಿದೆ ಎಂದು ವೆಲ್ಫೇರ್ ಪಾರ್ಟಿ ನಿಯೋಗದ ಸದಸ್ಯರು ಮಾಹಿತಿ ನೀಡಿದರು.
“ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆದ ಗುಂಪು ಹತ್ಯೆ ಸೇರಿದಂತೆ ಮೂರು ಕೋಮು ಹತ್ಯೆಗಳ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಶಾಂತಿ ಕದಡುವ ಸಲುವಾಗಿ ಕೋಮು ಪ್ರಚೋದಕ ಹೇಳಿಕೆ ಹಾಗೂ ಭಾಷಣಗಳನ್ನು ಮಾಡುವವರು ನಾಗರಿಕ ಸಮಾಜಕ್ಕೆ ಮಾರಕವಾಗಿದ್ದಾರೆ. ಅಂತಹ ಸಮಾಜ ಘಾತುಕ ವ್ಯಕ್ತಿಗಳ ಮೇಲೆ ಸುಮೊಟೊ ಕೇಸು ದಾಖಲಿಸಬೇಕು. ಕಾನೂನಿನ ಭಯವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯನ್ನು ಮಾಡುತ್ತಿರುವ ಗುಂಪು ಅಥವಾ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕು. ಕೋಮು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸೂಕ್ತ ಪೊಲೀಸ್ ಕಣ್ಗಾವಲು ಇರಿಸಬೇಕು. ಮತೀಯ ಗೂಂಡಾಗಳಿಗೆ ಮಾರಕಾಸ್ತ್ರಗಳನ್ನು ಒದಗಿಸಿ ಗಲಭೆ ಪ್ರಚೋದಿಸುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು. ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಅಮಲು ಪದಾರ್ಥಗಳ ಸರಬರಾಜು ಹಾಗೂ ಸೇವನೆಯನ್ನು ತಡೆಗಟ್ಟಲು ವಿಶೇಷ ತಂಡ ರಚಿಸಬೇಕು” ಎಂಬ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಪದ್ರೆಂಗಿ, ಎಫ್.ಐ.ಟಿ.ಯು ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ಪಕ್ಷದ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಸೈಫ್, ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಎಂ ಮುತ್ತಲಿಬ್ ಹಾಗೂ ಫಾರೂಕ್ ಅಲೇಕಳ ಉಪಸ್ಥಿತರಿದ್ದರು.