ಸಮತೆಯ ಆಶಯದ ಹಿನ್ನೆಲೆಯಲ್ಲಿ ಬುದ್ಧ,ಬಸವ,ಅಂಬೇಡ್ಕರ್ ಅವರನ್ನು ಒಟ್ಟಾಗಿಯೇ ನೋಡಬೇಕು.ಈ ಮೂವರ ಜತೆ ಕಾರ್ಲ್ ಮಾರ್ಕ್ಸ್ ಅವರನ್ನೂ ಸೇರಿಸಿಕೊಳ್ಳಬೇಕು. ಅಸಮಾನತೆಯ ವಿರುದ್ಧದ ಬಸವಣ್ಣನ ಹೋರಾಟವನ್ನು ನೋಡಿದರೆ ನಾವು ಕಾಮ್ರೇಡ್ ಬಸವಣ್ಣ ಎಂದು ಕರೆಯಬೇಕು ಎಂದು ಸಾಹಿತಿ, ಸಂಶೋಧಕ ಡಾ.ಅರುಣ ಜೋಳದಕೂಡ್ಲಿಗಿ ಹೇಳಿದರು.
ಕಲಬುರಗಿ ನಗರದ ರಾಮಜಿ ನಗರದಲ್ಲಿ ಬಸವ ಪ್ರಜ್ಞೆ ವಿಚಾರ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ʼಇವನಾರವ ಇವನಾರವ ಎಂದೆನಿಸದಿರಯ್ಯಾ, ಇವನಮ್ಮವ ಇವನಮ್ಮವ ಎಂದೆನಿಸಯ್ಯ’ ಎನ್ನುವ ಬಸವಣ್ಣನವರ ವಚನದ ಆಶಯ ಭಾರತ ಸಂವಿಧಾನದ ಪ್ರಸ್ತಾವನೆಯ ‘ಭಾರತದ ಜನತೆಯಾದ ನಾವುಗಳು..ʼ ಎನ್ನುವಲ್ಲಿ ಹೋಲಿಕೆಯಾಗುತ್ತದೆ. ಎಲ್ಲರನ್ನೂ ಭೇದಭಾವ ಇಲ್ಲದೆ ನಮ್ಮವರೆಂದು ಭಾವಿಸಬೇಕು ಎನ್ನುವುದು ವಚನ ಮತ್ತು ಸಂವಿಧಾನದ ಆಶಯ ಒಂದೇ ಆಗಿದೆ” ಎಂದು ಅಭಿಪ್ರಾಯಪಟ್ಟರು.
“ಕರ್ನಾಟಕದ ಸಂದರ್ಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಎನ್ನುವ ತತ್ವದಡಿ ಈ ಮೂವರನ್ನು ಏಕೀಭವಿಸಲಾಗಿದೆ. ಬಸವಣ್ಣ 70 ವಚನಗಳಲ್ಲಿ ವೈದಿಕಶಾಹಿಯನ್ನು ವಿರೋಧಿಸಿದ್ದಾರೆ. 100 ಶರಣರು 1,700 ರಷ್ಟು ವಚನಗಳಲ್ಲಿ ವೈದಿಕಶಾಹಿ, ಸನಾತನ ಧರ್ಮದ ಮೌಢ್ಯಗಳನ್ನು ಕಟುವಾಗಿ ವಿರೋಧಿಸಿದ್ದಾರೆ. ಹೀಗಾಗಿ ಇಂದು ಯಾರು ವೈದಿಕಶಾಹಿಯನ್ನು ಬೆಂಬಲಿಸಿ ಸನಾತನ ಧರ್ಮವನ್ನು ಆಚರಿಸುತ್ತಾರೋ ಅವರು ಬಸವದ್ರೋಹಿಗಳಾಗುತ್ತಾರೆ. ಇಂದು ಉಳ್ಳವರು ಬಸವಣ್ಣನನ್ನು ಕೇವಲ ಆರಾಧನೆಗೆ ಸೀಮಿತರಾಗಿಸಿದ್ದಾರೆ. ಬಸವಣ್ಣನವರ ಫೋಟೋ ಮನೆಯಲ್ಲಿ ಹಾಕಿಕೊಂಡೂ ಜಾತೀಯತೆ ಮಾಡುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, “ಬಸವ ಚಿಂತನೆ ಮತ್ತು ಚಳುವಳಿಗೆ ಬಹುದೊಡ್ಡ ಪರಂಪರೆಯಿದೆ. ಆದರೆ, ಬಸವಣ್ಣ ಹಾಗೂ ಸಮಕಾಲೀನ ಶರಣರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಮತ್ತು ವಚನ ಚಿಂತನೆಗಳನ್ನು ತಿರುಚುವ ಹುನ್ನಾರ ಹುರಿಗೊಳ್ಳುತ್ತಿದೆ. ವೈದಿಕಶಾಹಿಯಲ್ಲಿ ನಂಬಿಕೆಯುಳ್ಳವರು ಎಂದಿಗೂ ಬುದ್ದ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಒಪ್ಪಲಾರರು” ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಚಂದಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಡಿಡಿಪಿಯು ಶಿವಶರಣ ಮುಳೆಗಾಂವ, ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಡಾ.ಶಿವಗಂಗಾ ರುಮ್ಮಾ ಬಸವಾದಿ ಶರಣರ ಪ್ರಸ್ತುತತೆ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಯುವ ಸಂಘಟನೆಯ ಸಾಂಸ್ಕೃತಿಕ ವಿಭಾಗದಿಂದ ಲವಿತ್ರ, ಸುಜಾತಾ, ಬೃಂದಾ, ಪ್ರಿಯಾಂಕ, ಸವ್ಯ ಇದ್ದರು. ವಕೀಲ ಶಾಂತೇಶ ಕೋಡ್ಲೆ ಸ್ವಾಗತಿಸಿ, ನಿರ್ವಹಿಸಿದರು.