ಮಣಿಪುರದ ಮಹಿಳೆಯರ ಮೇಲಿನ ಅಮಾನುಷ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ, ಚಿತ್ರದುರ್ಗ ಮಠದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ, ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳಲಾದರೂ ನ್ಯಾಯ ದೊರೆಯದೇ ಇರುವುದು ಹೋರಾಟಗಳು ರಾಜ್ಯ ಮತ್ತು ದೇಶವನ್ನು ಆತಂಕಕ್ಕೆ ದೂಡಿವೆ. ಮಹಿಳೆಯರ ಮೇಲಿನ ಶೋಷಣೆಗಳು ನಡೆಯುತ್ತಲೇ ಇವೆ. ಪ್ರಸ್ತುತ ಸಮಾನದಲ್ಲಿ ಮಹಿಳೆಯರ ಪರಿಸ್ಥಿತಿಯ ಬಗ್ಗೆ ಅವಲೋಕಿಸುವ ಅತ್ಯವಿದೆ. ಈ ಹಿನ್ನೆಲೆಯಲ್ಲಿ ‘ಬಯಲು ಬಳಗ’ ಎಂಬ ತಂಡವು ‘ಮಹಿಳೆ: ವರ್ತಮಾನದ ಶೋಷಣೆ ಮತ್ತು ಹಿಂಸೆ’ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದೆ.
ಸಂವಾದ ಕಾರ್ಯಕ್ರಮವು ಇಂದು (ಜುಲೈ 29 – ಶನಿವಾರ) ಸಂಜೆ ಮೂರು ಗಂಟೆಗೆ ಬೆಂಗಳೂರಿನ ಜೈಭೀಮ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಒಡನಾಡಿ ಸಂಸ್ಥೆಯ ಕೆ.ವಿ ಸ್ಟ್ಯಾನ್ಲಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಕ್ವೆಸ್ಟ್ ಅಲೆಯನ್ಸ್ ವಿಶ್ವವಿದ್ಯಾಲಯದ ರೂಪಾ ನಾಗೇನಹಳ್ಳಿ ಭಾಗಿಯಾಗಲಿದ್ದಾರೆ ಎಂದು ಬಯಲು ಬಳಗ ತಿಳಿಸಿದೆ.
“ಈ ನ್ಯಾಯ ವ್ಯವಸ್ಥೆ ನಿನ್ನದಲ್ಲ, ಈ ಸರ್ಕಾರ ನಿನ್ನದಲ್ಲ ಎಂದು ಖೈರ್ಲಾಂಜಿಯ ದಲಿತ ನರಮೇಧ ಹಾಗೂ ಲೈಂಗಿಕ ಹಿಂಸೆ ವಿರುದ್ಧ ದಲಿತ ಕಾರ್ಯಕರ್ತೆಯೊಬ್ಬಳು ಹಾಡಿದ್ದ ಹಾಡನ್ನು ನಾವು ಇಂದು ಸೌಜನ್ಯ ಪ್ರಕರಣ ಹಾಗೂ ಮಣಿಪುರದ ಹಿಂಸೆ ಕುರಿತು ಹಾಡಬೇಕಿದೆ. ದೌರ್ಜನ್ಯ ವು ಜಾತಿ ಮತ್ತು ಲಿಂಗ ಆಧಾರಿತ ಸ್ವರೂಪ ಪಡೆದು ವಿಕೃತ ಸಾಮಾಜಿಕ ಅಧಿಪತ್ಯ ಮೆರೆಯುತ್ತಿದೆ. ಭಾರತೀಯ ನ್ಯಾಯಾಂಗ ಈ ಬಗೆಯ ಹಿಂಸೆಯ ವಿನ್ಯಾಸ ದೌರ್ಜನ್ಯದ ವಿಕೃತಗಳನ್ನ ಸರಿಯಾಗಿ ಗುರುತಿಸಬೇಕು” ಎಂದು ಹೇಳಿದೆ.

“1989ರ ದೌರ್ಜನ್ಯ ವಿರೋಧಿ ಕಾಯ್ದೆ ಬಂದರೂ ಇದು ಸಂಪೂರ್ಣವಾಗಿ ದಲಿತ ಹಾಗೂ ಬುಡಕಟ್ಟು ಹೆಣ್ಣು ಮಕ್ಕಳ ಆತ್ಮಗೌರವ ರಕ್ಷಿಸಿ ಅತ್ಯಾಚಾರವನ್ನು ತಡೆಯುತ್ತಿಲ್ಲ. ಹೆಣ್ಣು ಯಾವುದೇ ಜಾತಿಯಲ್ಲಿದ್ದರೂ ಎರಡನೆಯ ದರ್ಜೆಯವಳು ಎಂದು ಸಮಾಜ ಒಪ್ಪಿಕೊಂಡ ಕಾರಣದಿಂದಲೇ ಅತ್ಯಾಚಾರ ಹತ್ಯೆ, ಮರ್ಯಾದೆ ಗೇಡು ಹತ್ಯೆಗಳು ಈ ಸಮಾಜದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ಮತ್ತೆ ದೌರ್ಜನ್ಯ ಮತ್ತು ಹಿಂಸೆ ಅತ್ಯಾಚಾರದ ವಿನ್ಯಾಸಗಳು ಕೂಡ ಈ ನಾಗರೀಕ ಸಮಾಜ ಹೇಸಿಗೆ ಪಡುವ ಮತ್ತು ತೀವ್ರ ಆತಂಕಕ್ಕೆ ಒಳಗಾಗುವ ಹಾಗೆ ಪ್ರಕಟವಾಗುತ್ತಿವೆ. ಈ ಕುರಿತು ಹೊಸ ರೀತಿಯ ಕಾರ್ಯಕ್ರಮ ಹಾಗೂ ಸಾಮಾಜಿಕ ಪ್ರತಿರೋಧವನ್ನು ನ್ಯಾಯಾಂಗ ವ್ಯವಸ್ಥೆಯ ಮೂಲಕವೇ ಸಾಧಿಸಬೇಕಿದೆ” ಎಂದು ಬಳಗ ಹೇಳಿದೆ.
“ದಲಿತ ,ಬುಡಕಟ್ಟು ಹಾಗೂ ಯಾವುದೇ ಬಡಜಾತಿಯ ಹೆಣ್ಣು ಮಕ್ಕಳಿಗೆ ಶಾಸನಾತ್ಮಕ ರಕ್ಷಣೆ ಲೈಂಗಿಕ ಅತ್ಯಾಚಾರ ,ಹತ್ಯೆ ಹಾಗೂ ಮರ್ಯಾದೆಗೇಡು ಹತ್ಯೆಗಳಿಂದ ದೊರಕುತ್ತಿಲ್ಲವೆಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹಳ ದೊಡ್ಡ ವಿಪರ್ಯಾಸ. ಯಾಕೆ ಈ ವೈಫಲ್ಯತೆ. ಈ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಮತ್ತು ತಲ್ಲಣಗಳನ್ನು ಹುಟ್ಟು ಹಾಕಬೇಕಿದೆ” ಎಂದು ಕರೆಕೊಟ್ಟಿದೆ.