ಕೊಡಗು ಜಿಲ್ಲೆ, ವಿರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ವಿಭಾಗಗಳ ದಿನಗೂಲಿ ಹೊರಗುತ್ತಿಗೆ ನೌಕರರ ರಾಜ್ಯಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ‘ ಅರಣ್ಯ ಇಲಾಖೆ ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಧಾರಗಳೆ ಹೊರಗುತ್ತಿಗೆ ನೌಕರರ ಅಭದ್ರತೆಗೆ ಕಾರಣ ‘ ಎಂದರು.
‘ ದಶಕಗಳಿಂದ ನೋವನ್ನು ಸಹಿಸಿಕೊಂಡು ಯಾವುದೇ ರೀತಿಯ ಭದ್ರತೆಗಳಿಲ್ಲದೆ ಜೀವವನ್ನೇ ಒತ್ತೆ ಇಟ್ಟು ಸೇವೆ ಸಲ್ಲಿಸುವ ಪರಿಸ್ಥಿತಿ ರಾಜ್ಯ ವನ್ಯಜೀವಿ ವಿಭಾಗಗಳ ದಿನಗೂಲಿ ಹೊರಗುತ್ತಿಗೆ ನೌಕರರದಾಗಿದೆ. ಅವೈಜ್ಞಾನಿಕ ನಿರ್ಧಾರವನ್ನು ಸರಿಪಡಿಸುವ ಉದ್ದೇಶದಿಂದ ಸಭೆ ಸೇರಿದ್ದು. 2017ರ ನಂತರ ಅರಣ್ಯ ಇಲಾಖೆಯ ದಿನಗೂಲಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿ ವತಿಯಿಂದ ನೇಮಿಸಲಾಗುತ್ತಿದೆ. ಇದರಿಂದಾಗಿ, ದಿನಗೂಲಿ ನೌಕರರಿಗೆ ಅರಣ್ಯ ಇಲಾಖೆಯೊಂದಿಗೆ ಯಾವುದೇ ರೀತಿಯಾದಂತಹ ಸಂಪರ್ಕ, ಅರಣ್ಯ ಇಲಾಖೆಯ ಸವಲತ್ತುಗಳು ದೊರೆಯುತ್ತಿಲ್ಲ. ಸುದೀರ್ಘವಾಗಿ 30 ವರ್ಷಗಳು ಸೇವೆ ಸಲ್ಲಿಸಿ ನಿವೃತ್ತರಾದರು ಕೂಡ ಕನಿಷ್ಠ ಮೂಲ ಸೌಕರ್ಯದೊಂದಿಗೆ ಜೀವನವನ್ನು ನಡೆಸಲು ಕಷ್ಟ ಸಾಧ್ಯವಾಗುತ್ತಿದೆ.
ರಾಜ್ಯದ ದಿನಗೂಲಿ ಹೊರಗುತ್ತಿಗೆ ನೌಕರರು ಸೇವೆಯಲ್ಲಿ ಇರುವಂತಹ ಸಂದರ್ಭ ಹಾಗೂ ನಿವೃತ್ತಿಯ ನಂತರವೂ ಅಭದ್ರತೆಯಿಂದ ಕೂಡಿದ ಸಂಘರ್ಷದ ಜೀವನವನ್ನು ನಡೆಸುತ್ತಿದ್ದಾರೆ. ಆದ್ದರಿಂದ, ಸರ್ಕಾರವು ಇವರ ಸಮಸ್ಯೆ ಕಡೆ ಗಮನಹರಿಸಿ ಹೊಸ ನೇಮಕಾತಿ ನಡೆಸುವಂತಹ ಸಂದರ್ಭ ಹತ್ತು ವರ್ಷಕ್ಕೂ ಹೆಚ್ಚು ಕಾಲ ದಿನಗೂಲಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸಿದಂತವರನ್ನು ಮೊದಲು ಖಾಯಂಗೊಳಿಸಿ ನಂತರ ನೂತನ ನೇಮಕಾತಿಗೆ ” ಅವಕಾಶ ನೀಡಬೇಕೆಂದರು .

ರಾಜ್ಯ ವನ್ಯಜೀವಿ ಘಟಕದ ಗೌರವ ಅಧ್ಯಕ್ಷರಾದ ಎ.ಎಂ. ನಾಗರಾಜು ಮಾತನಾಡಿ ” 25 ವರ್ಷಗಳಿಂದ ನಿರಂತರವಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು, ಮೂಲ ಹುದ್ದೆಯಿಂದ ಹೊರಗುತ್ತಿಗೆ ದಿನಗೂಲಿ ನೌಕರರನ್ನಾಗಿ ಮಾಡಿ ಅರಣ್ಯ ಇಲಾಖೆ ಹಾಗೂ ನೌಕರರ ನಡುವೆ ಸಂಬಂಧವೇ ಇಲ್ಲದಂತೆ ಮಾಡಲಾಗಿದೆ. ಮೇಲಾಧಿಕಾರಿಗಳು ಕಮಿಷನ್ ಆಸೆಯಿಂದ ಈ ರೀತಿಯಾದಂತಹ ಕೆಲಸವನ್ನು ಮಾಡಿದ್ದಾರೆ. ದಿನಗೂಲಿ ಹೊರಗುತ್ತಿಗೆ ನೌಕರರಿಗೆ ಸದ್ಯದ ಮಟ್ಟಿಗೆ ಯಾವುದೇ ರೀತಿಯಾದಂತಹ ಸೇವಾ ಭದ್ರತೆ, ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ, ದಿನಗೂಲಿ ಹೊರಗುತ್ತಿಗೆ ನೌಕರರನ್ನು ಮೂಲವೃತ್ತಿ ದಿನಗೂಲಿ ನೌಕರರಾಗಿ ಸೇರ್ಪಡೆಗೊಳಿಸಿ 10 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರಿಗೆ ಸೇವಾ ಭದ್ರತೆಯನ್ನು ನೀಡಬೇಕೆಂದು ” ಆಗ್ರಹಿಸಿದರು .
ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್. ಪೊನ್ನಣ್ಣ ಮಾತನಾಡಿ ” ಅರಣ್ಯ ಇಲಾಖೆ ದಿನಗೂಲಿ ಹೊರಗುತ್ತಿಗೆ ನೌಕರರು ಸಲ್ಲಿಸಿರುವ ಎರಡು ಮನವಿಗಳಲ್ಲೂ ಯಾವುದೇ ರೀತಿಯಾದಂತಹ ತೊಡಕುಗಳಿಲ್ಲ. ಸರ್ಕಾರದ ಅಧೀನದ ದಿನಗೂಲಿ ನೌಕರರಾಗಬೇಕು ಎಂಬ ಮನವಿಯಲ್ಲಿ ಯಾವುದೇ ರೀತಿಯ ತಪ್ಪು ಕಂಡು ಬರುತ್ತಿಲ್ಲ. ಆದ್ದರಿಂದ, ಹೆಚ್ಚು ಒತ್ತಡ ಹಾಗೂ ಪ್ರಭಾವ ಬೀರಿ ಈ ಸಮಸ್ಯೆಯನ್ನು ನಿವಾರಿಸುವಂತಹ ಪ್ರಯತ್ನ ಮಾಡುತ್ತೇನೆ. ನಿವೃತ್ತ ವೇತನವನ್ನು 10 ವರ್ಷ ಕನಿಷ್ಠ ಸೇವೆ ಸಲ್ಲಿಸಿದವರಿಗೆ ನೀಡಬೇಕೆಂದು ನಿಯಮವನ್ನು ರೂಪಿಸಿ ಕಾನೂನು ತರಲಾಗಿದ್ದರು ಇದುವರೆಗೂ ಏಕೆ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಅರಣ್ಯ ಇಲಾಖೆಯ ದಿನಗೂಲಿ ಹೊರಗುತ್ತಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನವನ್ನು ಮಾಡುತ್ತ ಕಾನೂನಾತ್ಮಕವಾಗಿ ಬೇಡಿಕೆಯನ್ನು ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಇದ್ದರೆ ಕಾನೂನಾತ್ಮಕ ಹೋರಾಟವನ್ನು ನಡೆಸಲು ಸಿದ್ದ. ಸಮಸ್ಯೆ ಬಗೆಹರಿಸಲು ಪ್ರಯತ್ನ ಪಡುವುದಾಗಿ ” ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಸತಿ ಯೋಜನೆ ಕಾಮಗಾರಿ ವೀಕ್ಷಿಸಿದ ಸಿಇಓ ಎಸ್. ಯುಕೇಶ್ ಕುಮಾರ್
ವನ್ಯಜೀವಿ ಘಟಕದ ರಾಜ್ಯ ಉಪಾಧ್ಯಕ್ಷ ಹರೀಶ್ , ಕ್ಷೇಮಾಭಿವೃದ್ಧಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್ ತಂಬೂರ್ಕರ್, ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಹೊರಗುತ್ತಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಇದ್ದರು.