ದಲಿತರ ಆರ್ಥಿಕ ಉನ್ನತೀಕರಣಕ್ಕಾಗಿ ಅಂಬೇಡ್ಕರ್ ಹಣಕಾಸು ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ಪರಿಶಿಷ್ಟ ಸಮುದಾಯದ ವಿವಿಧ ಬೇಡಿಕೆಗಳನ್ನು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಈಡೇರಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಯಾದಗಿರಿ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ದಸಂಸ ಪದಾಧಿಕಾರಿಗಳು ಜಿಲ್ಲಾಧಿಕಾರಿ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ಜಿಲ್ಲಾ ಸಂಚಾಲಕ ಶಿವಶಂಕರ ಹೊಸಮನಿ ಮಾತನಾಡಿ, ʼರಾಜ್ಯದಲ್ಲಿ ಪಿಟಿಸಿಎಲ್ ಕಾಯ್ದೆಯಡಿಯಲ್ಲಿ ದಲಿತರ ಜಮೀನು ಬೇರೆಯವರಿಗೆ ಮಾರಾಟ, ಪರಾಬಾರೆ ಮಾಡದಂತೆ ಕಾಯ್ದೆ ಇದೆ. ಆದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿಗಳು ಪಿಟಿಸಿಎಲ್ ಕಾಯ್ದೆ ಅನುಸರಿಸದೆ ಮನಸ್ಸಿಗೆ ಬಂದಂತೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆʼ ಎಂದು ಆರೋಪಿಸಿದರು.
ʼಎಸ್ಸಿಪಿ ಹಾಗೂ ಟಿಎಸ್ಪಿ ಹಣವನ್ನು ನಿರ್ದಿಷ್ಟ ಐದು ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಗೆ ಮೀಸಲಿಟ್ಟು ಅದರ ನಿರ್ವಹಣೆ ಉಸ್ತುವಾರಿಯನ್ನು ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ/ಎಸ್.ಟಿ. ಆಯಾ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಪ್ರಸಕ್ತ ಬಜೆಟ್ನಲ್ಲಿ ಪ್ರತ್ಯೇಕವಾಗಿ ಅಂಬೇಡ್ಕರ್ ಹಣಕಾಸು ನಿಗಮ ಮತ್ತು ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು. ಪ್ರತಿ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಬೌದ್ಧ ವಿಹಾರ ನಿರ್ಮಿಸಬೇಕು. ಬೌದ್ಧ ಧರ್ಮಕ್ಕೆ ಮತಾಂತರವಾದ ಪರಿಶಿಷ್ಟ ಜಾತಿ ಜನರಿಗೆ ಕಂಪ್ಯೂಟರೈಸ್ಟ್ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ʼರಾಜ್ಯದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಯಾವುದೇ ಒಳ ಜಾತಿಗಳಿಗೆ ಅನ್ಯಾಯವಾಗದಂತೆ ಒಳಮೀಸಲಾತಿ ಜಾರಿಗೊಳಿಸಬೇಕು. ಪ್ರತಿ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಜನರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಈಗಾಗಲೇ ಇರುವ ಸ್ಮಶಾನ ಭೂಮಿಯಲ್ಲಿ ಪರಿಶಿಷ್ಟ ಜಾತಿ ಜನರ ಅಂತ್ಯ ಸಂಸ್ಕಾರಕ್ಕೆ ಅಡಚಣೆಯುಂಟು ಮಾಡುವವರ ಮೇಲೆ ಆಟ್ರಾಸಿಟಿ ಪ್ರಕರಣ ದಾಖಲಿಸಬೇಕು.ವಿವಿಧ ಅಭಿವೃದ್ಧಿ ನಿಗಮಗಳ ಫಲಾನುಭವಿಗಳ ಆಯ್ಕೆ ಅರ್ಹರಿಗೆ ದೊರೆಯುವಂತಾಗಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಅಧಿಕಾರ ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರ್ಗಳಿಗೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಾಡುಹಗಲೇ ಮನೆ ನುಗ್ಗಿ ಚಿನ್ನಾಭರಣ ಕದ್ದರೆಂದು ಸುಳ್ಳು ಕಥೆ ಕಟ್ಟಿದ ಕುಟುಂಬ
ಪ್ರಮುಖರಾದ ಮಲ್ಲಪ್ಪ ಲಂಡನ್ರ್, ಹಣಮಂತ್ರಾಯ ಬಿ.ಬಿಜಾಸಪೂರ, ಪರಶುರಾಮ ಹೈಯ್ಯಾಳಕರ್, ಮಲ್ಲಿಕಾರ್ಜುನ ತಳವಾರಗೇರಾ, ಸಿದ್ರಾಮ ನಾಯ್ಕಲ್, ಬಸವರಾಜ ಕನ್ನೆಕೊಳೂರು, ಹಣಮಂತ ತೇಲ್ಕೂರ್, ಮಲ್ಲಿಕಾರ್ಜುನ ಜಾಲಿಬೆಂಚಿ, ಪರಶುರಾಮ ಮದರಕಲ್, ರಾಜು ಕುದುರಿ, ಶೇಖಪ್ಪ ದೊಡ್ಡಮನಿ, ಬಸವರಾಜ ಬಡಿಗೇರ, ಶರಣು ಬಸಾಂಪೂರ ಇನ್ನಿತರರು ಉಪಸ್ಥಿತರಿದ್ದರು.