ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1,000 ರೂ. ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ, ಆ ಬಗ್ಗೆ ಆದೇಶ ಹೊರಡಿಸಿ, ಗೌರವಧನ ಜಾರಿ ಮಾಡಲಿಲ್ಲ. ಹಿಂದಿನ ಸರ್ಕಾರದ ಘೋಷಣೆಯನ್ನು ಹೊಸ ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, “ಬಿಸಿಯೂಟ ನೌಕರರನ್ನು ‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು. ಆ ನೌಕರರಿಗೆ ಸಿಗುವ ಎಲ್ಲ ಸವಲತ್ತುಗಳನ್ನು ನಮಗೂ ನೀಡಬೇಕು” ಎಂದು ಒತ್ಥಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ, “ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿ, ಮಕ್ಕಳ ಗೈರು ಹಾಜರಿ ತಡೆಗಟ್ಟಲು, ಅಪೌಷ್ಠಿಕತೆ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ 1.17 ಲಕ್ಷ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 58.30 ಲಕ್ಷ ಬಡ, ರೈತ, ಕೃಷಿಕೂಲಿಕಾರರ, ದೀನ ದಲಿತ ಮಕ್ಕಳಿಗೆ ಬಿಸಿ ಆಹಾರ ತಯಾರಿಸಿ, ಶಾಲೆಯನ್ನು ಸ್ವಚ್ಛಗೊಳಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ಪಾತ್ರ ದೊಡ್ಡದಿದೆ” ಎಂದು ಹೇಳಿದ್ದಾರೆ.
“ದಿನಕ್ಕೆ ಸುಮಾರು 6 ಗಂಟೆಗಿಂತಲೂ ಹೆಚ್ಚು ಸಮಯ ಕೆಲಸ ಮಾಡುತ್ತಿರುವ ಈ ನೌಕರರ ಶ್ರಮವನ್ನು ಗುರುತಿಸಿ, ಅವರಿಗೆ 21,000 ಕನಿಷ್ಠ ವೇತನ ಜಾರಿ ಮಾಡಬೇಕು. ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತಂದು, ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
“ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ 1,000 ರೂಪಾಯಿ ಗೌರವಧನ ಹೆಚ್ಚಳ ಮಾಡುವದಾಗಿ ಘೋಷಿಸಿತ್ತು. ಆದರೆ, ಗೌರವಧನವನ್ನು ಬಿಡುಗಡೆ ಮಾಡಲಿಲ್ಲ. ಹೊಸ ಸರ್ಕಾರ ಆ ಹೆಚ್ಚುವರಿ ಗೌರವಧನವನ್ನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
- ಬಿಜೆಪಿ ಸರ್ಕಾರ ಮಂಡಿಸಿದ್ದ ಬಜೆಟ್ನಲ್ಲಿ ಬಿಸಿಯೂಟ ನೌಕರರಿಗೆ 1,000 ರೂಪಾಯಿ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಅದನ್ನು ಜಾರಿ ಮಾಡಬೇಕು.
- ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ 4 ಗಂಟೆ ಕೆಲಸ ಮಾತ್ರವಿದೆ. ಆದರೆ, ನೌಕರರು ದಿನನಿತ್ಯ 6 ಗಂಟೆಗಳ ಕೆಲಸ ಮಾಡುತ್ತಾರೆ. ಆದ್ದರಿಂದ ಮಾರ್ಗದರ್ಶಿ ಕೈಪಿಡಿಯಲ್ಲಿ 6 ಗಂಟೆ ಕೆಲಸ ಎಂದು ತಿದ್ದುಪಡಿ ಮಾಡಬೇಕು.
- 60 ವರ್ಷ ವಯಸ್ಸಾಗಿದೆ ಎಂದು ನಿವೃತ್ತಿಯ ಹೆಸರಿನಲ್ಲಿ ಯಾವುದೇ ಪರಿಹಾರ ಕೊಡದೆ ಸುಮಾರು 6000 ನೌಕರರನ್ನು ಕೆಲಸದಿಂದ ಕೈ ಬಿಟ್ಟಿದ್ದಾರೆ. ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ಈ ನೌಕರರಿಗೆ 1 ಲಕ್ಷ ಪರಿಹಾರ ನೀಡಬೇಕು.
- ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ಈ ಜವಾಬ್ದಾರಿಯನ್ನು ಮುಖ್ಯ ಅಡುಗೆಯವರಿಂದ ಎಸ್ಡಿಎಂಸಿ ಅಧ್ಯಕ್ಷರಿಗೆ ವರ್ಗಾವಣೆ ಮಾಡಿದ್ದು, ಮುಖ್ಯ ಆಡುಗೆ ನೌಕರರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಹಿಂದೆ ಇದ್ದ ನಿಯಮವನ್ನೇ ಜಾರಿಗೆ ತರಬೇಕು.
- ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡುವ ನಿಯಮ ರೂಪಿಸಿ, ಜಾರಿಗೊಳಿಸಬೇಕು.
- ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಬೇಸಿಗೆ ರಜೆ ಅವಧಿಯಲ್ಲೂ ವೇತನ ನೀಡಲಾಗುತ್ತದೆ. ಆದರೆ, ಇದೇ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಬಿಸಿಯೂಟ ನೌಕರರಿಗೆ ರಜೆ ಅವಧಿಯಲ್ಲಿ ವೇತನ ನೀಡುತ್ತಿಲ್ಲ. ಈ ನೌಕರರಿಗೂ ದಸರಾ ಮತ್ತು ಬೇಸಿಗೆ ರಜೆ ಅವಧಿಯಲ್ಲಿ ವೇತನ ನೀಡಬೇಕು.
ಪ್ರತಿಭಟನೆಯಲ್ಲಿ ಸುವರ್ಣ, ಸೌಭಾಗ್ಯ ಮಾಲಗತ್ತಿ, ಶಹಾಜೀದಿ ಬೇಗಂ,ಯಲ್ಲಪ್ಪ ಜಿನ್ನಾಕಾರ, ಸುರೇಖಾ ಕುಲಕರ್ಣಿ,ಪ್ರಕಾಶ ಆಲ್ದಾಳ, ಡಿ.ಹೆಚ್.ಎಸ್ ಗೀತಾ ನಗನೂರು ಇದ್ದರು.