ಕರ್ನಾಟಕ ರಾಜ್ಯ ಸರ್ಕಾರವು ಅನುಸೂಚಿತ ಉದ್ದಿಮೆಗಳಡಿ ಬರುವ ವಿವಿಧ ವಲಯವಾರು ಹಾಗೂ ವಿವಿಧ ಕುಶಲತೆಯ ಕಾರ್ಮಿಕರಿಗೆ ನೀಡಬೇಕಾಗಿರುವ ದಿನದ ಮತ್ತು ಮಾಸಿಕ ಕನಿಷ್ಠ ವೇತನವನ್ನು ಹೆಚ್ಚಿಸಿರುವುದು ಮತ್ತು ಬೇಡಿಕೆಯಂತೆ 3 ವಲಯಗಳನ್ನು ಮಾಡಿ ಅಧಿಸೂಚನೆ ಪ್ರಕಟಿಸಿರುವುದನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಸ್ವಾಗತಿಸಿದ್ದಾರೆ.
ʼರಾಜ್ಯದ ಕಾರ್ಮಿಕರು ಮತ್ತು ನೌಕರರು ಮತ್ತಿತರ ದುಡಿಯುವ ಜನರು ಕಡು ಕಷ್ಟದಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಈ ಪರಿಸ್ಕೃತ ವೇತನ ದರಗಳು ಅವರ ಕುಟುಂಬಗಳಿಗೆ ಕನಿಷ್ಠ ಸಮಾಧಾನ ತಂದಿದೆ. ಎಐಯುಟಿಯುಸಿ ಸೇರಿದಂತೆ ಎಲ್ಲಾ ಸಂಘಟನೆಗಳ ಸಂಘಟಿತ ಪ್ರಯತ್ನದ ಫಲವಾಗಿ ಸರ್ಕಾರವು ಇದೀಗ ಕನಿಷ್ಠ ವೇತನ ಪರಿಷ್ಕರಿಸಿರುವುದು ಕಾರ್ಮಿಕರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಇದು ಕಾರ್ಮಿಕರ ಸಂಘಟಿತ ಹೋರಾಟಕ್ಕೆ ಸಿಕ್ಕ ಮಹತ್ವದ ಗೆಲುವಾಗಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼನಮ್ಮ ಸಂಘಟನೆ ಎಐಯುಟಿಯುಸಿ ಸೇರಿದಂತೆ ರಾಜ್ಯದ ಕೇಂದ್ರೀಯ ಕಾರ್ಮಿಕ ಸಂಘಗಳು, ಕನಿಷ್ಠ ವೇತನ ಪರಿಷ್ಕರಿಸುವಾಗ ಕಾರ್ಮಿಕರ ಜೀವನ ವೆಚ್ಚಕ್ಕೆ ಸಂಬಂಧಿಸಿದಂತೆ, ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ ಮಾನದಂಡ ಆಧರಿಸಿ ಮಾಸಿಕ 35,950 ರೂ. ಕನಿಷ್ಠ ವೇತನ ನಿಗದಿಪಡಿಸಬೇಕೆಂದು ವಾಸ್ತವಿಕವಾದ ಅಧ್ಯಯನ ಆಧರಿಸಿ, ಜಂಟಿಯಾಗಿ ಕನಿಷ್ಟ ವೇತನ ಸಲಹಾ ಮಂಡಳಿಯಲ್ಲಿ ಮತ್ತು ಸರ್ಕಾರದ ಸಚಿವರಿಗೆ ಒತ್ತಾಯಿಸಿ ಚರ್ಚಿಸಿದ್ದವುʼ ಎಂದರು.
ʼಕಾರ್ಮಿಕರನ್ನು ವಲಯಗಳಲ್ಲಿ ಹಂಚಿಕೆ ಮಾಡುವಲ್ಲಿ ಹಲವಾರು ಲೋಪದೋಷಗಳು ಇವೆ. ವಿಡಿಎ ಕುರಿತು ಪ್ರಸ್ತಾಪವಿಲ್ಲ, ಹಿಂದಿನ ಪರಿಷ್ಕರಣೆ ಮುಕ್ತಾಯವಾಗಿರುವ 2022ರಿಂದ ಅನ್ವಯ ಮಾಡದಿರುವುದು, ಹಲವಾರು ಪ್ರಮುಖ ಸೆಕ್ಟರ್ ಕಾರ್ಮಿಕರ ವೇತನ ಪರಿಷ್ಕರಣೆಯನ್ನು ತಡೆ ಹಿಡಿದಿರುವುದು ಸೇರಿದಂತೆ ಹಲವಾರು ಅಂಶಗಳ ಕುರಿತು ಈ ಅಧಿಸೂಚನೆಯಲ್ಲಿ ಸೇರಿಸಬೇಕೆಂದು ಸರ್ಕಾರ ಮತ್ತು ಕಾರ್ಮಿಕ ಇಲಾಖೆಗೆ ಒತ್ತಾಯಿಸಿ ಲಿಖಿತ ಪತ್ರವನ್ನು ಸಲ್ಲಿಸಲಾಗುವುದುʼ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾದಾಜಿ ಖೋಬ್ರಗಡೆ: ಭತ್ತದ ಜೊತೆಗೆ ಬದುಕಿದ ಸಾಮಾಜಿಕ ಸಂತ
ʼಸರ್ಕಾರವು ಕನಿಷ್ಠ ವೇತನ ಕಾಯ್ದೆ ಅಡಿ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ಈ ಅಧಿಸೂಚನೆಯಲ್ಲಿ ನಮೂದಿಸಿರುವ ವೇತನ ದರಗಳನ್ನು ಉಳಿಸಿಕೊಂಡು, ನಮ್ಮ ಸಂಘಟನೆ ಎತ್ತಿರುವ ಕೆಲವು ಕಾರ್ಮಿಕರ ಪರವಾದ ನ್ಯಾಯಯುತ ಅಂಶಗಳನ್ನು ಈ ಅಧಿಸೂಚನೆಯಲ್ಲಿ ಸೇರಿಸಿ ಕೂಡಲೇ ಜಾರಿಗೆ ಬರುವಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಬೇಕೆಂದು ಎಐಯುಟಿಯುಸಿ ರಾಜ್ಯ ಸಮಿತಿಯಿಂದ ಸರ್ಕಾರಕ್ಕೆ ಒತ್ತಾಯಿಸುತ್ತೇವೆʼ ಎಂದರು.