ಯಾದಗಿರಿಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಿಂದ, ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸದೇ ಇರುವುದರಿಂದ ಸುರಪುರ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ ಮಹಾನಗರಗಳಿಗೆ ಗುಳೆ ಹೊರಟಿದ್ದಾರೆ.
ಇದರಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶೇ60ರಿಂದ 70ರಷ್ಟು ಜನ ಗುಳೆ ಹೋಗುವುದು ಸಾಮಾನ್ಯವಾಗಿದೆ. ಗ್ರಾಮಗಳಲ್ಲಿ ವೃದ್ಧರು, ಮಕ್ಕಳು ಮಾತ್ರವೇ ಉಳಿಯುತ್ತಿದ್ದು, ಗ್ರಾಮಗಳು ಬಿಕೋ ಎನ್ನುತ್ತಿವೆ.
ಸುರಪುರ ಬಸ್ ಡಿಪೊದಿಂದ ಬೆಂಗಳೂರಿಗೆ ನಿತ್ಯ ನಾಲ್ಕು ಬಸ್ ಸಂಚರಿಸುತ್ತವೆ. ಆದರೆ, ಗ್ರಾಮದ ಜನ ಹೀಗೆ ಗುಳೆ ಹೋರಟಿರುವುದರಿಂದ, ಈಗ ಪ್ರತೀ ದಿನ ನಾಲ್ಕು ಬಸ್ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಇನ್ನಷ್ಟು ಬಸ್ಗಳನ್ನು ಬಿಡಲು ಸಿದ್ಧತೆ ನಡೆದಿದೆ ಎಂದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಪ್ರತೀ ಗ್ರಾಮಗಳಲ್ಲಿ ಕಾರ್ಮಿಕರನ್ನು ಬೆಂಗಳೂರು, ಪುಣೆ, ಮುಂಬೈ ನಗರಗಳಿಗೆ ಬಿಟ್ಟು ಬರಲೆಂದೇ ಕ್ರೂಸರ್ ಜೀಪ್ಗಳು ಇವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಆರೋಗ್ಯ, ಶಿಕ್ಷಣ ಸಮಸ್ಯೆ: ಗುಳೆ ಹೋಗುವ ಕಾರ್ಮಿಕರು ಕಾಮಗಾರಿ ಸ್ಥಳದಲ್ಲೇ ವಾಸಿಸುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.
ಗುಳೆ ತಪ್ಪಿಸಲೆಂದೇ ಸರ್ಕಾರ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿದೆ. ಆದರೆ, ಯೋಜನೆಯಡಿ ಸಮರ್ಪಕ ಕೆಲಸ, ಕೂಲಿ ಸಿಗುತ್ತಿಲ್ಲ. ಯೋಜನೆಯ ದುರುಪಯೋಗವೇ ನಡೆದಿದೆ ಎಂಬುದು ಕಾರ್ಮಿಕರ ಆರೋಪ ಮತ್ತು ಅಸಮಾಧಾನ.