ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದ (ಎಸ್ಟಿ) ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಐಡಿಎಸ್ಒ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಯಾದಗಿರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಂಗಪ್ಪ ಎಚ್ ಪೂಜಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಎಐಡಿಎಸ್ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಮಾತನಾಡಿ, “ಯಾದಗಿರಿ ನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಸ್ವಂತ ಕಟ್ಟಡ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಒಳ್ಳೆಯ ಆಹಾರ ಹಾಗೂ ವಿದ್ಯಾರ್ಥಿಗಳಿಗೆ ಓದಲು ಗಂಥಾಲಯದಲ್ಲಿ ಪುಸ್ತಕಗಳು, ಆಟವಾಡಲು ಕ್ರೀಡೋಪಕರಣಗಳು ಸೇರಿದಂತೆ ಇತ್ಯಾದಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಾಸ್ಟೆಲ್ಗೆ ಸ್ವಂತ ಸರ್ಕಾರಿ ಕಟ್ಟಡ ಇಲ್ಲದೇ, ಒಂದು ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ದಾಖಲಾತಿಗೆ ತಕ್ಕ ಕೋಣೆಗಳ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಸಮರ್ಪಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಹಾಸ್ಟೆಲ್ನಲ್ಲಿ ಬಹುತೇಕ ವಿದ್ಯಾರ್ಥಿಗಳ ದಾಖಲಾತಿ ಆಗಿದ್ದರೂ ಕೂಡ ಸ್ಥಳಾವಕಾಶವಿಲ್ಲದೇ ತಮ್ಮ ಹಳ್ಳಿಗಳಿಗೆ ಹಿಂದಿರುಗುತ್ತಿದ್ದಾರೆ. ಇಲ್ಲಿರುವ ವಿದ್ಯಾರ್ಥಿಗಳು 3 ರಿಂದ 4 ಮಂದಿ ಮಲಗಬೇಕಾದ ಕೋಣೆಯಲ್ಲಿ 11 ರಿಂದ 12 ಮಂದಿ ವಿದ್ಯಾರ್ಥಿಗಳು ಮಲಗಬೇಕಾಗಿದೆ. ಕನಿಷ್ಟ ವಸತಿ ವ್ಯವಸ್ಥೆ ಮಾಡಲೂ ಸಾಧ್ಯವಾಗಿಲ್ಲ” ಎಂದು ಆರೋಪಿಸಿದರು.
ರಾಜ್ಯ ಸಮಿತಿ ಸದಸ್ಯ ವೆಂಕಟೆಶ ದೇವದುರ್ಗ ಮಾತನಾಡಿ, “ಓದುವ ಕನಸನ್ನು ಹೊತ್ತು ಹಾಸ್ಟೆಲ್ಗೆ ಬರುವ ನೂರಾರು ಸಂಖ್ಯೆಯ ಬಡ ವಿದ್ಯಾರ್ಥಿಗಳಿಗೆ ಕನಿಷ್ಠ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯೂ ಇಲ್ಲ. ಅಲ್ಲದೇ ಈ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳಿಗೆ ಮೆನು ಚಾರ್ಟ್ ಪ್ರಕಾರ ಆರೋಗ್ಯಯುತ ಪೌಷ್ಟಿಕ ಆಹಾರವನ್ನು ನೀಡದೆ, ಕಳಪೆ ಮಟ್ಟದ ಹಾಗೂ ರುಚಿಕರವಲ್ಲದ ಊಟ ನೀಡಲಾಗುತ್ತಿದೆ. ಆಹಾರದಲ್ಲಿ ಹುಳ ಹಾಗೂ ಕಲ್ಲುಗಳು ಸಿಗುವುದಂತೂ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿದೆ” ಎಂದರು.
“ಹಾಸ್ಟೆಲ್ ಸ್ವಚ್ಛತೆಯ ವಿಷಯಕ್ಕೆ ಬಂದರೆ ನೀರಿನ ಟ್ಯಾಂಕ್ ಶುದ್ದೀಕರಿಸಿ ಅದೆಷ್ಟೋ ದಿನಗಳು ಕಳೆದಿವೆ. ಹಾಸ್ಟೆಲ್ನ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಚಾಡಿ ತುಂಬಿಕೊಂಡಿದೆ. ಅಡುಗೆ ಮಾಡುವ ಸ್ಥಳವಂತೂ ಕೊಳಚೆ ನೀರಿನಿಂದ ತುಂಬಿಕೊಂಡಿದ್ದು, ಚರಂಡಿಯ ವಾಸನೆ ಬರುತ್ತದೆ. ಇದು ಸಾಲದೆಂಬಂತೆ ವಿದ್ಯಾರ್ಥಿಗಳು ಊಟ ಸೇವಿಸಲು ಬರುವ ಡೈನಿಂಗ್ ಹಾಲ್ನಲ್ಲಿ ನಾಯಿ, ದನಕರುಗಳು ಓಡಾಡುತ್ತವೆ” ಎಂದು ಬೇಸರ ವ್ಯಕ್ತಪಡಿಸಿದರು.
ಜೊತೆಗೆ ಹಾಸ್ಟೆಲ್ನ ಗ್ರಂಥಾಲಯದಲ್ಲಿ ತುಂಬಾ ಹಳೆಯ ಪುಸ್ತಕಗಳಿದ್ದು, ಹೊಸ ಪಠ್ಯಕ್ಕನುಗುಣವಾದ ಪುಸ್ತಕಗಳನ್ನು ಒದಗಿಸಲಾಗುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದೊಂದಿಗೆ ಕ್ರೀಡೆಯಲ್ಲಿಯೂ ಭಾಗಿಯಾಗಬೇಕಾಗಿರುವುದು ಮುಖ್ಯ. ಹೀಗಿರುವಾಗ ಅವರಿಗೆ ಯಾವುದೇ ಕ್ರೀಡೋಪಕರಣಗಳನ್ನು ಹಾಸ್ಟೆಲ್ನಲ್ಲಿ ನೀಡದೇ ಇರುವುದರಿಂದ ಅವರು ಆಟಗಳನ್ನಾಡಲೂ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಗಂಭೀರ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಎಲ್ಲ ಮೂಲಭೂತ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಎಪಿಎಂಸಿ ಅಧಿಕಾರಿಗಳ ಭ್ರಷ್ಟಚಾರದ ವಿರುದ್ಧ ಪ್ರತಿಭಟನೆ
ಯಾದಗಿರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಂಗಪ್ಪ ಎಚ್ ಪೂಜಾರ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಶೀಘ್ರದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸುವದಾಗಿ ಆಶ್ವಾಸನೆ ನೀಡಿದರು. ಪ್ರತಿಭಟನೆಯ ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಅಡಿಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿ, ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಲಾಯಿತು.
ಪ್ರತಿಭಟನೆಯಲ್ಲಿ ಯಲ್ಲಾರೆಡ್ಡಿ, ದೇವಿಂದಕುಮಾರ, ಮಲ್ಲಿಕಾರ್ಜುನ, ಹಣಮತರಾಯ, ಹಣಮಂತ, ಸಾಬಣ್ಣ, ಆಕಾಶ, ಶ್ರೀನಿವಾಸ, ಜಗದಿತ, ಚಿದಾನಂದ, ಸಿದ್ದಲಿಂಗ ಸೇರಿದಂತೆ ಬಹುತೇಕ ವಿದ್ಯಾರ್ಥಿಗಳು ಇದ್ದರು.