ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಮಂಡಳಿಗೆ ನೋಂದಣಿ ಹಾಗೂ ನವೀಕರಣಕ್ಕೆ ವೇತನ ಚೀಟಿ ಸಲ್ಲಿಸಬೇಕೆಂಬ ಸರ್ಕಾರದ ಏಕಪಕ್ಷೀಯ ನಿರ್ಧಾರ ಹಿಂಪಡೆಯಲು ಎಐಯುಟಿಯುಸಿ ಆಗ್ರಹಿಸಿದೆ.
ಯಾದಗಿರಿ ಜಿಲ್ಲೆಯ ಎಐಯುಟಿಯುಸಿ ಕಾರ್ಯಕರ್ತ ರಾಮಲಿಂಗಪ್ಪ ಬಿ ಎನ್ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದು, “ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಲವು ಸೌಲಭ್ಯಗಳನ್ನು ಪಡೆಯಲು ಮಂಡಳಿ ನೀಡುವ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಪಡೆಯಲು ಸೇವಾ ಸಿಂಧು ಆನ್ ಲೈನ್ ತಂತ್ರಾಂಶದ ಅಡಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವೇತನ ಚೀಟಿ ಲಗತ್ತಿಸುವುದು ಕಡ್ಡಾಯಗೊಳಿಸಿರುವ ಸರ್ಕಾರದ ಏಕಪಕ್ಷೀಯ ನಿರ್ಧಾರ ಅತ್ಯಂತ ಖಂಡನೀಯ” ಎಂದರು.
“ಕಾರ್ಮಿಕರ ಸಚಿವ ಸಂತೋಷ್ ಎಸ್ ಲಾಡ್ ಮತ್ತು ಸಂಘಟನೆ ಒಗ್ಗೂಡಿ ಎಲ್ಲ ಕಟ್ಟಡ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಸಭೆ ಕರೆದಿದ್ದರು. ಸಭೆಯಲ್ಲಿ ಕಾರ್ಮಿಕರು ಮಂಡಳಿಗೆ ನೋಂದಣಿ ಮತ್ತು ನವೀಕರಣಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವರ್ಷಕ್ಕೆ ಕನಿಷ್ಠ 90 ದಿನಗಳ ವೇತನ ಚೀಟಿ ಕಡ್ಡಾಯವಾಗಿ ಲಗತ್ತಿಸಬೇಕು” ಎಂದು ಪ್ರಸ್ತಾಪಿಸಿದರು.
“ಸರ್ಕಾರದ ಈ ಪ್ರಸ್ತಾವನೆಗೆ ಎಲ್ಲ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರೂ, ಸರ್ಕಾರ ಏಕಪಕ್ಷೀಯವಾಗಿ ಜಾರಿಮಾಡಿದೆ. ಅಲ್ಲದೆ ಕಟ್ಟಡ ನಿರ್ಮಾಣ ಮಾಲೀಕರಾಗಲಿ ಅಥವಾ ಗುತ್ತಿಗೆದಾರರಾಗಲಿ ಕಾರ್ಮಿಕರಿಗೆ ವೇತನ ಚೀಟಿ ನೀಡುವ ನಿಯಮ ಚಾಲ್ತಿಯಲ್ಲಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣದಂಡನೆ ವಿಧಿಸಲು ಅವಕಾಶವಿದೆ: ನ್ಯಾ. ರಾಜೇಶ್ವರಿ
“ಸರ್ಕಾರದ ಪ್ರಸ್ತಾವನೆಯಂತೆ ಕಾರ್ಮಿಕರು ವೇತನ ಚೀಟಿ ಗುತ್ತಿಗೆದಾರರ ಬಳಿ ಕೇಳಿದರೆ ಕೆಲಸ ಕಳೆದುಕೊಳ್ಳುವ ಸಂಭವವೇ ಹೆಚ್ಚು. ಇದರಿಂದ ಬಡ ಕಟ್ಟಡ ಕಾರ್ಮಿಕರು ದೈನಂದಿನ ಕೂಲಿ ಜೊತೆಗೆ ಮಂಡಳಿ ಹಾಗೂ ಸರ್ಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈ ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸದೆ ಕಾರ್ಮಿಕರ ಹಿತವನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ತೀರ್ಮಾನ ಮಾಡಿ ಆದೇಶ ಹೊರಡಿಸಿರುವುದು ಖಂಡನೀಯ” ಎಂದರು.
ಸರ್ಕಾರ ಈ ಆದೇಶವನ್ನು ಹಿಂಪಡೆದು, ಈ ಹಿಂದೆ ಇದ್ದ ನಿಯಮವನ್ನು ಮುಂದುವರೆಸಬೇಕು. ಅಲ್ಲದೇ ಕಳೆದ 2 ವರ್ಷಗಳಿಂದ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಈವರೆಗೂ ಬಂದಿಲ್ಲ. ಅದನ್ನೂ ಕೂಡಲೇ ಬಿಡುಗಡೆ ಮಾಡಬೇಕು. ಮಂಡಳಿಯ ಸೌಲಭ್ಯಗಳು ನೋಂದಾಯಿತ ಎಲ್ಲ ಕಟ್ಟಡ ಕಾರ್ಮಿಕರಿಗೆ ತಲುಪುವಂತೆ ಮಾಡಬೇಕು” ಎಂದು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಿದರು.