ಬಿಹಾರದ ಬೋಧ್ ಗಯಾದಲ್ಲಿರುವ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಬೌದ್ಧ ಮಹಾಸಭಾ, ಅಖಿಲ ಭಾರತೀಯ ಬೌದ್ಧ ವೇದಿಕೆ ಮತ್ತು ದಲಿತ ಪ್ರಗತಿಪರ ಸಂಘಟನೆಗಳಿಂದ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದರು.
ಸಂವಿಧಾನ ದಿನದ ಪ್ರಯುಕ್ತ ಯಾದಗಿರಿ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಅಖಿಲ ಭಾರತೀಯ ಬೌದ್ಧ ವೇದಿಕೆ ಸದಸ್ಯ ಡಾ. ಭಗವಂತ ಅನ್ವಾರ ಮಾತಾನಾಡಿ, “ಬೋಧ್ ಗಯಾ ಟೆಂಪಲ್(ಬಿಟಿ) ಕಾಯ್ದೆ–1949 ರದ್ದು ಮಾಡಬೇಕು. ಬುದ್ಧನಿಗೆ ಜ್ಞಾನೋದಯವಾದ ಬೋಧ್ ಗಯಾ ಜಗತ್ತಿನಲ್ಲಿರುವ ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ. ಈವರೆಗೂ ಬೌದ್ಧ ಪರಂಪರೆಯ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ. ತಲಾ ನಾಲ್ವರು ಬೌದ್ಧರು ಮತ್ತು ಹಿಂದೂಗಳು ಒಳಗೊಂಡ ಆಡಳಿತ ಮಂಡಳಿ ಇರುವುದು ಸರಿಯಲ್ಲ. ಸಂಪೂರ್ಣವಾಗಿ ವಿಹಾರದ ಆಡಳಿತವನ್ನು
ಬೌದ್ಧರಿಗೆ ನೀಡಬೇಕು” ಎಂದು ಆಗ್ರಹಿಸಿದರು.
“ದಲಿತ ಸಂವಿಧಾನದ ಕಲಂ 25, 26 ಮತ್ತು 29ರ ಅನ್ವಯ ಎಲ್ಲ ಜಾತಿ, ಜನಾಂಗದವರು ಸ್ವತಂತ್ರವಾಗಿ ದೇವಸ್ಥಾನ, ಮಂದಿರ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಯಾ ಜಾತಿಗಳ ದೇವಸ್ಥಾನ, ಟ್ರಸ್ಟ್ಗಳಿಗೆ ಆಯಾ ಜಾತಿಗಳ ಪ್ರಮುಖ ಆಡಳಿತ ಮಂಡಳಿಗಳಿವೆ. ಆದರೆ, ಬೋಧ್ ಗಯಾದಲ್ಲಿ ಇದಕ್ಕೆ ವಿರುದ್ಧವಾದ ಆಡಳಿತ ಮಂಡಳಿಯಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಮಾತನಾಡಿ, “ಸಂವಿಧಾನ ವಿರೋಧಿಯಾದ ಬಿಟಿ ಕಾಯ್ದೆ–1949ರ ಅಡಿ ಆಡಳಿತ ಮಂಡಳಿಯೊಳಗೆ ಸೇರಿಸಿ ಹಿಂದೂ ಪುರೋಹಿತರು ಬೌದ್ಧರ ಇತಿಹಾಸ ಮತ್ತು ಸಂಸ್ಕೃತಿ ನಾಶಮಾಡಲು ಯತ್ನಿಸುತ್ತಿದ್ದಾರೆ. ಹಾಗಾಗಿ ಇದನ್ನು ವಿರೋಧಿಸಿ ಇಂದು ದೇಶಾದ್ಯಂತ ಈ ಬಗ್ಗೆ ಗಮನ ಸೆಳೆದು ಸರ್ಕಾರದ ಮೇಲೆ ಒತ್ತಡ ತರಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ಮನವಿ ನೀಡುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ l 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಬೇಕು: ರೈತ ಧರ್ಮರಾಜ್
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ನಾಗಣ್ಣ ಬಡಿಗೇರಿ, ಮಾಳಪ್ಪ ಕಿರದಳ್ಳಿ, ರಾಮಣ್ಣ ಕಲ್ಲದೇವನಹಳ್ಳಿ, ನಿಂಗಪ್ಪ ಕೊಲ್ಲೂರಕರ್, ರಾಮಣ್ಣ ಸಾಧ್ಯಾಪೂರ, ಗೋಪಾಲ ತೆಳಗೇರಿ, ಮಹಾದೇವ್ ದಿಗ್ಗಿ, ರಾಹುಲ್ ಹುಲಿಮನಿ, ಸುರೇಶ್ ಬೊಮ್ಮನ್, ಪರಶುರಾಮ ಒಡೆಯರ್, ನಿಂಗಪ್ಪ ಬೀರನಾಳ, ಮರೆಪ್ಪ ಜಾಲಿಮಂಚಿ, ಬಸವರಾಜ್ ಗುಡಿಮನಿ, ಮಾಪಣ್ಣ ಬಡಿಗೇರ್, ವಸಂತ್ ಸುಂಗುಲಕರ್, ಬಾಲರಾಜ್ ಖಾನಾಪುರ, ಮಹಾದೇವಪ್ಪ ಬಿಜೆಸಪುರ್, ಅಝೀಜ್ಸಾಬ್, ಶಿವು ಬಂದಳ್ಳಿ, ಭೀಮರಾಯ್ ಸುಂಗುಲ್, ಮಲ್ಲು ಬೊಮ್ಮುನ್, ನಾಗಣ್ಣ ಕಳ್ಳದೇವನಳ್ಳಿ ಸೇರಿದಂತೆ ಬಹುತೇಕ ಮಂದಿ ಮುಖಂಡರು ಇದ್ದರು.