ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಲ್ಫಿ ಪಾಯಿಂಟ್ ಸ್ಥಾಪಿಸಲು ಯುಜಿಸಿಯು ಸೂಚನೆ ನೀಡಿದ್ದು, ಈ ಸೂಚನೆ ಖಂಡನೀಯ ಎಂದು ಎಐಡಿಎಸ್ಒ ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಆಕ್ಷೇಪ ವ್ಯಕ್ತಪಡಿಸಿದರು.
ಯಾದಗಿರಿ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿದ ಇವರು, “ಆಡಳಿತ ಪಕ್ಷದ ನಾಯಕರನ್ನು ಬಿಂಬಿಸುವ ಯುಜಿಸಿಯ ಈ ಸೂಚನೆಯು ಅಪ್ರಜಾತಾಂತ್ರಿಕವಾಗಿದೆ. ದೇಶದ ಶೈಕ್ಷಣಿಕ ವ್ಯವಸ್ಥೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದರ ಬದಲು, ವ್ಯಕ್ತಿಪೂಜೆ, ಒಂದು ವಿಚಾರಧಾರೆ, ಸೇರಿದಂತೆ ಏಕಮುಖ ಚಿಂತನೆಯಲ್ಲಿ ದೇಶದ ವಿದ್ಯಾರ್ಥಿ ಯುವಜನತೆಯನ್ನು ಮುಳುಗಿಸುವ ಅಪಾಯಕಾರಿ ಫ್ಯಾಸಿಸಂ ನಡೆ ಇದಾಗಿದೆ” ಎಂದರು.
ಸೆಲ್ಫಿ ಪಾಯಿಂಟ್ಗಳ ಬದಲಾಗಿ, ಶಿಕ್ಷಣದ ವ್ಯಾಪಾರೀಕರಣ, ಖಾಸಗೀಕರಣ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮುಚ್ಚುವಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯುಜಿಸಿಯು ಕಾರ್ಯಪ್ರವೃತ್ತವಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಸ್ಸಿ/ಎಸ್ಟಿ ವಿದ್ಯಾರ್ಥಿನಿಯರಿಗೆ ಸೌಲಭ್ಯ ಕಲ್ಪಿಸಲು ಮಹಿಳಾ ವಿವಿ ವಿಫಲ; ಡಿವಿಪಿ ಆರೋಪ
“ಯಾವುದೋ ಒಬ್ಬ ರಾಜಕೀಯ ನಾಯಕರನ್ನು ಬಿಂಬಿಸುವ ಬದಲಿಗೆ ದೇಶದ ಶಿಕ್ಷಣದ ಏಳಿಗೆಗೆ ಶ್ರಮಿಸಿದ ನವೋದಯ ಹರಿಕಾರ ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ ರಾಯ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್ ಮುಂತಾದವರ ಚಿಂತನೆಗಳನ್ನು ವಿದ್ಯಾರ್ಥಿಗಳ ನಡುವೆ ಹರಡುವ ಪ್ರಯತ್ನ ಮಾಡಬೇಕು” ಎಂದು ಆಗ್ರಹಿಸಿದರು.