ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದ್ದು, ಕೆಲವು ಜನರ ಹಿತಾಸಕ್ತಿಗಾಗಿ ದೇಶದ 142 ಕೋಟಿ ಜನರನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರು ಉದ್ಯಮಿ ಗೌತಮ್ ಅದಾನಿ ಅವರ ಹೆಸರನ್ನು ಪ್ರಸ್ತಾಪಿಸದೆ ಟೀಕಾ ಪ್ರಹಾರ ನಡೆಸಿದರು.
“ಆಡಳಿತಾರೂಢ ಸರ್ಕಾರವು ಕೆಲವರ ಅಭಿವೃದ್ಧಿಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಒಬ್ಬ ವ್ಯಕ್ತಿಗಾಗಿ 142 ಕೋಟಿ ಜನರನ್ನು ನಿರ್ಲಕ್ಷಿಸುತ್ತಿರುವುದನ್ನು ಗಮನಿಸುತ್ತಿದೆ. ಒಬ್ಬ ವ್ಯಕ್ತಿಗೆ ದೇಶದ ಎಲ್ಲ ವ್ಯವಹಾರ, ಹಣ ಹಾಗೂ ಸಂಪನ್ಮೂಲವನ್ನು ನೀಡಲಾಗುತ್ತಿದೆ. ಬಂದರುಗಳಿಂದ ವಿಮಾನ ನಿಲ್ದಾಣಗಳು, ಗಣಿ, ಸಾರ್ವಜನಿಕ ಸ್ವಾಮ್ಯದ ಕಂಪನಿಗಳನ್ನು ಒಬ್ಬ ವ್ಯಕ್ತಿಗೆ ವರ್ಗಾಯಿಸಲಾಗುತ್ತಿದೆ” ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದರು.
“ಸಂವಿಧಾನವು ನ್ಯಾಯ, ಸಮಗ್ರತೆ, ವಾಕ್ಸ್ವಾತಂತ್ರದ ಸುರಕ್ಷಾ ಕವಚವಾಗಿದೆ. ಕೇಂದ್ರ ಸರ್ಕಾರವು ಇವೆಲ್ಲವನ್ನು ದುರ್ಬಲಗೊಳಿಸುತ್ತಿದೆ. ನಮ್ಮ ಸ್ವಾತಂತ್ರ್ಯ ಹೋರಾಟ ಅತ್ಯಂತ ಪ್ರಜಾಸತ್ತಾತ್ಮಕ ಹೋರಾಟವಾಗಿತ್ತು. ಪ್ರತಿಯೊಂದು ವರ್ಗದವರು ಇದರಲ್ಲಿ ಪಾಲ್ಗೊಂಡಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಹೋರಾಡಿದ್ದರು. ಆ ಸ್ವಾತಂತ್ರ್ಯ ಹೋರಾಟದಿಂದ ಒಂದು ಧ್ವನಿ ಹೊರಹೊಮ್ಮಿತು, ಅದು ನಮ್ಮ ದೇಶದ ಧ್ವನಿಯಾಗಿತ್ತು, ಆ ಧ್ವನಿಯಲ್ಲಿ ನಮ್ಮ ಸಂವಿಧಾನವನ್ನು ರಚಿಸಿ ಬರೆಯಲಾಗಿದೆ. ಇದು ಕೇವಲ ದಾಖಲೆಯಲ್ಲ. ಬಾಬಾ ಅಂಬೇಡ್ಕರ್, ಮೌಲಾನಾ ಆಜಾದ್ , ಜವಾಹರಲಾಲ್ ನೆಹರು ಮತ್ತು ಅಂದಿನ ಎಲ್ಲ ನಾಯಕರು ಈ ಸಂವಿಧಾನವನ್ನು ರಚಿಸುವಲ್ಲಿ ವರ್ಷಗಳ ಕಾಲ ನಿರತರಾಗಿದ್ದರು” ಎಂದು ಪ್ರಿಯಾಂಕಾ ಹೇಳಿದರು.
ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ನ್ಯಾಯವನ್ನು ಪಡೆಯುವ ಹಕ್ಕಿದೆ ಎಂದು ಗುರುತಿಸುವ ಅಧಿಕಾರವನ್ನು ನೀಡಿತು. ನಮ್ಮ ಜನರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಧ್ವನಿ ಎತ್ತಿದಾಗ ಸರ್ಕಾರ ಅವರ ಮುಂದೆ ತಲೆಬಾಗಬೇಕಾಗುತ್ತದೆ. ಈ ಸಂವಿಧಾನವು ಪ್ರತಿಯೊಬ್ಬರಿಗೂ ಸರ್ಕಾರವನ್ನು ರಚಿಸುವ ಮತ್ತು ಬದಲಾಯಿಸುವ ಹಕ್ಕನ್ನು ನೀಡಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳು ಈ ಬಾರಿಯಾದರೂ ಈಡೇರಲಿ
“ದೇಶದ ಕೋಟ್ಯಂತರ ಜನರ ಹೋರಾಟದಲ್ಲಿ, ಅವರ ಹಕ್ಕುಗಳ ಮನ್ನಣೆಯಲ್ಲಿ ಮತ್ತು ದೇಶದಿಂದ ನ್ಯಾಯದ ನಿರೀಕ್ಷೆಯಲ್ಲಿ ನಮ್ಮ ಸಂವಿಧಾನದ ಜ್ವಾಲೆ ಉರಿಯುತ್ತಿದೆ. ನಮ್ಮ ಸಂವಿಧಾನದ ಜ್ವಾಲೆ ಉರಿಯುತ್ತಿರುವುದನ್ನು ನಾನು ನೋಡಿದ್ದೇನೆ. ನಮ್ಮ ಸಂವಿಧಾನವು ರಕ್ಷಣಾತ್ಮಕ ಕವಚವಾಗಿದೆ. ಅದು ದೇಶದ ಜನರನ್ನು ಸುರಕ್ಷಿತವಾಗಿರಿಸುತ್ತದೆ. ಅದು ನ್ಯಾಯದ ಗುರಾಣಿ. ಇದು ಏಕತೆಯ ಗುರಾಣಿ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಗುರಾಣಿ. ದುಃಖದ ಸಂಗತಿಯೆಂದರೆ, ದೊಡ್ಡದಾಗಿ ಮಾತನಾಡುವ ಆಡಳಿತ ಪಕ್ಷದ ನನ್ನ ಸಹೋದ್ಯೋಗಿಗಳು ಕಳೆದ 10 ವರ್ಷಗಳಲ್ಲಿ ಈ ರಕ್ಷಣಾ ಕವಚವನ್ನು ಮುರಿಯಲು ಪ್ರಯತ್ನಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸಂವಿಧಾನದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ಭರವಸೆ ಇದೆ. ಈ ಭರವಸೆ ರಕ್ಷಣಾತ್ಮಕ ಕವಚವಾಗಿದೆ. ಆದರೆ ಈಗ ಒಡೆಯುವ ಕೆಲಸ ಆರಂಭವಾಗಿದೆ. ಲ್ಯಾಟರಲ್ ಎಂಟ್ರಿ ಮತ್ತು ಖಾಸಗೀಕರಣದ ಮೂಲಕ ಮೀಸಲಾತಿಯನ್ನು ದುರ್ಬಲಗೊಳಿಸುವ ಕೆಲಸ ಸರ್ಕಾರ ಮಾಡುತ್ತಿದೆ. ದೇಶದ ಜನತೆ ಮಾತ್ರ ಈ ಸಂವಿಧಾನವನ್ನು ಸುರಕ್ಷಿತವಾಗಿ ಇಡುತ್ತಾರೆ ಎಂಬುದು ಈ ಚುನಾವಣೆಯಲ್ಲಿ ಅವರಿಗೆ ತಿಳಿಯಿತು. ಈ ಚುನಾವಣೆಯಲ್ಲಿ ಸೋಲು-ಗೆಲುವು, ಸಂವಿಧಾನ ಬದಲಿಸುವ ಮಾತು ಈ ದೇಶದಲ್ಲಿ ನಡೆಯುವುದಿಲ್ಲ ಎಂಬುದು ಅರಿವಾಯಿತು” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ಇಂದು ಜಾತಿ ಗಣತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆಯೂ ಜಾತಿಗಣತಿ ಬಗ್ಗೆ ಚರ್ಚೆ ನಡೆಯಿತು. ಹೀಗಾಗಿ ಯಾರ ಸ್ಥಿತಿಗತಿ ಹೇಗೆ ಇದೆ ಎಂಬುದು ನಮಗೆ ತಿಳಿಯುವುದು ಮುಖ್ಯ. ವಿಪಕ್ಷಗಳು ಇಂತಹ ಗಂಭೀರವಾದ ವಿಷಯವನ್ನು ಪ್ರಸ್ತಾಪಿಸಿದರೆ ಅವರು, ‘ನಾವು ದನಗಳನ್ನು ಕದಿಯುತ್ತೇವೆ, ನಾವು ಮಂಗಳಸೂತ್ರವನ್ನು ಕದಿಯುತ್ತೇವೆ’ ಎಂದು ಹೇಳಿದರು. ಇದು ಅವರ ಗಂಭೀರತೆಗೆ ಸಾಕ್ಷಿ” ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳದೆ ಟೀಕಿಸಿದರು.
