ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿಕೊಂಡ ದುರಂತದಲ್ಲಿ 154 ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂಬುದಾಗಿ ವರದಿಯಾಗಿದೆ. ಬೆಂಕಿ ಕಿಡಿಯಿಂದ ಪಟಾಕಿ ಸ್ಪೋಟಗೊಂಡಿದೆ ಎಂಬುದು ತಿಳಿದುಬಂದಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆ, ನೀಲೇಶ್ವರ, ಕಾಞಂಗಾಡ್ನ ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ದೀಪಾವಳಿ ಹಬ್ಬಕ್ಕೆ ಮುನ್ನ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ನೆರೆಯ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ನಡೆದಿದೆ.
ಈ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಕಾಸರಗೋಡು ಎಸ್ಪಿ ಡಿ ಶಿಲ್ಪಾ, “ದುರಂತದಲ್ಲಿ ಒಟ್ಟು 154 ಮಂದಿ ಗಾಯಗೊಂಡಿದ್ದು, ಈ ಪೈಕಿ ಎಂಟು ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ದೇವಸ್ಥಾನದ ಪದಾಧಿಕಾರಿಗಳು ಪಟಾಕಿಯನ್ನು ಸಂಗ್ರಹಿಡಿಸಲು ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಪಟಾಕಿಯನ್ನು ಹಾರಿಸಿರುವ ಜಾಗಕ್ಕೂ ದಾಸ್ತಾನಿಟ್ಟಿದ್ದ ಜಾಗಕ್ಕೂ ಹೆಚ್ಚು ಅಂತರವಿರಲಿಲ್ಲ. ಹೀಗಾಗಿ, ಪಟಾಕಿ ಸಿಡಿಸಿದ ವೇಳೆ ಹಾರಿದ ಕಿಡಿಯಿಂದಾಗಿ ಈ ದುರಂತ ಸಂಭವಿಸಿದೆ. 154 ಮಂದಿ ಗಾಯಾಳುಗಳ ಪೈಕಿ 97 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರಕ್ಷತೆಯನ್ನು ಕಾಪಾಡಿಕೊಳ್ಳದ ಕಾರಣ ಈ ಘಟನೆ ನಡೆದಿದೆ” ಎಂದು ಕಾಸರಗೋಡು ಎಸ್ಪಿ ತಿಳಿಸಿದ್ದಾರೆ.
