ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ಜಿಲ್ಲೆ ಥಾಣೆಯ ಕಲ್ವಾದಲ್ಲಿರುವ ಸರ್ಕಾರಿ ಸ್ವಾಮ್ಯದ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಕಳೆದ 12 ಗಂಟೆಗಳಲ್ಲಿ ನಾನಾ ಕಾರಣಗಳಿಂದ 17 ರೋಗಿಗಳು ಮೃತಪಟ್ಟಿದ್ದಾರೆ.
ಮೃತರಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ 12 ರೋಗಿಗಳು ಹಾಗೂ ಇತರ ವಿಭಾಗದ ಐವರು ರೋಗಿಗಳು ಸೇರಿದ್ದಾರೆ. ಒಂದೇ ದಿನದ ಅಂತರದಲ್ಲಿ ಇಷ್ಟು ರೋಗಿಗಳು ಸಾವನ್ನಪ್ಪಿದ್ದು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶನಿವಾರ ರಾತ್ರಿಯಿಂದ ಇಲ್ಲಿಯವರೆಗೂ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಆಸ್ಪತ್ರೆ ಆಡಳಿತ ಮಂಡಳಿಯೇ ಖಚಿತಪಡಿಸಿದೆ.
ಥಾಣೆಯ ಜಿಲ್ಲಾ ಆಸ್ಪತ್ರೆ ಮುಚ್ಚಿರುವುದರಿಂದ ಜಿಲ್ಲೆಯ ಎಲ್ಲ ರೋಗಿಗಳು ಇಲ್ಲಿಗೆ ಬರುವುದರಿಂದ ವೈದ್ಯರು ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ. ಈ ಹಿಂದೆ ಆಗಸ್ಟ್ 10 ರಂದು ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ 5 ಮಂದಿ ಸಾವನ್ನಪ್ಪಿದ್ದರು. ಘಟನೆಯ ಬಳಿಕ ಶಾಸಕ ಜಿತೇಂದ್ರ ಅವದ್ ಹಾಗೂ ಇತರ ಪಕ್ಷಗಳ ಮುಖಂಡರು ಆಸ್ಪತ್ರೆಗೆ ತೆರಳಿ ಪ್ರತಿಭಟನೆ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಸಂಸತ್ತಿನಲ್ಲಿರುವ ಎಲ್ಲ ಅರ್ಹತೆ ಪ್ರಿಯಾಂಕಾಗೆ ಇದೆ: ರಾಬರ್ಟ್ ವಾದ್ರಾ
ಥಾಣೆ ಜಿಲ್ಲೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ಜಿಲ್ಲೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆ ಇರುವುದೂ ಇಲ್ಲೇ. ವಿಶೇಷವೆಂದರೆ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿಯಂತ್ರಣದಲ್ಲಿದೆ. ಶಿವಸೇನೆಯೇ ಇಲ್ಲಿ ಆಡಳಿತ ನಡೆಸುತ್ತಿದೆ. ಹಾಗಾಗಿ ಮಹಾನಗರ ಪಾಲಿಕೆಯ ಛತ್ರಪತಿ ಶಿವಾಜಿ ಆಸ್ಪತ್ರೆಯಲ್ಲಿ ನಡೆದ ಸರಣಿ ಸಾವು ಶಿಂಧೆ ಗುಂಪಿನ ಶಿವಸೇನೆಗೆ ಭಾರಿ ಮುಜುಗರ ತಂದಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಥಾಣೆಯಲ್ಲಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿದ್ದರು. ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ಕೆಡವಿ ಆ ಜಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಉದ್ದೇಶಿಸಲಾಗಿದೆ. ಇಷ್ಟೆಲ್ಲದರ ಮಧ್ಯೆ ಅತ್ಯಂತ ಹಳೆಯದಾದ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ ಈಗ ಸಂಭವಿಸಿದ ಸರಣಿ ಸಾವು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿ ಡೀನ್ ವಿರುದ್ಧ ಅಮಾನತು ಕ್ರಮ ಜರುಗಿಸಲಾಗಿತ್ತು. ಇದೇ ವೇಳೆ ಕೆಲ ದಿನಗಳ ಹಿಂದೆ ಸಿವಿಲ್ ಆಸ್ಪತ್ರೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.