- ಸುರಕ್ಷಿತ ಕಾಶ್ಮೀರದ ನಿಮ್ಮ ಹೇಳಿಕೆಗಳು ಈಗ ಎಲ್ಲಿಗೆ ಹೋಗಿವೆ?
- 370 ತೆಗೆದುಹಾಕಿದ ನಂತರ ಕಾಶ್ಮೀರದಲ್ಲಿ ಶಾಂತಿಯ ಭರವಸೆಗಳು ಏನಾದವು?
ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ, ಭಾರತದಿಂದ ನೆರೆಯ ದೇಶಕ್ಕೆ ‘ಒಂದು ಹನಿ ನೀರು’ ಹರಿಯದಂತೆ ಮಾಡುವ, ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಬಳಕೆ ಯೋಜನೆಯನ್ನು ಕೈಬಿಡುವ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ಇದು ಜನರನ್ನು ಮೂರ್ಖರನ್ನಾಗಿ ಮಾಡುವ ಘೋಷಣೆಯಷ್ಟೇ ಎಂದು ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಂಕರಾಚಾರ್ಯ ಸ್ವಾಮಿ, ”ಸಿಂಧೂ ನದಿ ನೀರನ್ನು ನಿಲ್ಲಿಸಲು ಮೋದಿ ಸರ್ಕಾರದ ಬಳಿ ಯಾವುದೇ ವ್ಯವಸ್ಥೆಯಿಲ್ಲ. ನದಿ ನೀರು ಪಾಕಿಸ್ತಾನಕ್ಕೆ ಹರಿದಂತೆ ನಿಲ್ಲಿಸುವ ವ್ಯವಸ್ಥೆ ಸಿದ್ಧಪಡಿಸಲು ಭಾರತಕ್ಕೆ ಕನಿಷ್ಠ 20 ವರ್ಷಗಳು ಬೇಕಾಗುತ್ತದೆ. ಇದರರ್ಥ, ಕೇಂದ್ರ ಸರ್ಕಾರ ಸಾರ್ವಜನಿಕರನ್ನು ಮೂರ್ಖರನ್ನಾಗಿ ಮಾಡುತ್ತಿದೆ” ಎಂದು ಹೇಳಿದ್ದಾರೆ.
”ಪಹಲ್ಗಾಮ್ನಲ್ಲಿ ಹಿಂದುಗಳ ಮೇಲಿನ ದಾಳಿಯು ಯೋಜಿತ ಪಿತೂರಿಯ ಭಾಗವಾಗಿದೆ. ಒಬ್ಬರ ಧರ್ಮ ಯಾವುದೆಂದು ಕೇಳಿ, ಬಳಿಕ ಅವರನ್ನು ಕೊಲ್ಲುವುದು ಅನಾಗರಿಕತೆಯ ಸಂಕೇತ. ಇದು ಭಯೋತ್ಪಾದಕರಿಂದ ಯುದ್ಧದ ನೇರ ಎಚ್ಚರಿಕೆಯಾಗಿದೆ. ಸರ್ಕಾರ ಇದನ್ನು ಖಂಡಿಸಬಾರದು ಬದಲಾಗಿ ದಂಡನಾತ್ಮಕ ಕ್ರಮ ಕೈಗೊಳ್ಳಬೇಕು. ಸಿಂಧೂ ನದಿ ನೀರು ಒಪ್ಪಂದವನ್ನು ಕೊನೆಗೊಳಿಸುವ ಮೂಲಕ ಸಾರ್ವಜನಿಕರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ, ಭಯೋತ್ಪಾದಕ ದಾಳಿಗೆ ಕಾರಣರಾದ ವ್ಯಕ್ತಿಯನ್ನು ಗುರುತಿಸಿ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
मोदी सरकार के पास सिंधु नदी का पानी रोकने की कोई व्यवस्था ही नहीं है.
— Ranvijay Singh (@ranvijaylive) April 26, 2025
पाकिस्तान का पानी रोकने की व्यवस्था तैयार करने में ही भारत को 20 साल लगेंगे.
इसका मतलब है कि सरकार जनता को मूर्ख बना रही है.
: शंकराचार्य स्वामी अविमुक्तेश्वरानंद सरस्वती pic.twitter.com/ictigJPCQv
”ಮೊದಲು ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಳಿಕ, ಗಡಿಯಾಚೆ ಕುಳಿತಿರುವ ಅವರ ನಾಯಕರಿಗೆ ಪಾಠ ಕಲಿಸಲು ಸರ್ಕಾರ ಯುದ್ಧಕ್ಕೆ ಸಿದ್ಧವಾಗಬೇಕು. ದೇಶದ ಜನರು ಸರ್ಕಾರದ ಜೊತೆಗಿದ್ದಾರೆ” ಎಂದು ಹೇಳಿದ್ದಾರೆ.
”ಪಾಕಿಸ್ತಾನಕ್ಕೆ ನದಿ ನೀರು ಸರಬರಾಜು ಸ್ಥಗಿತಗೊಳಿಸುವ ಬಗ್ಗೆ ನಮ್ಮ ಸರ್ಕಾರ ಪದೇ ಪದೇ ಮಾತುಕತೆ ನಡೆಸುತ್ತಿದೆ. ಇದು ನಿಜವಾಗಿಯೂ ಸಾಧ್ಯವೇ? ನೀರು ಸರಬರಾಜು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕುವುದರಿಂದ ಈ ಭಯೋತ್ಪಾದಕ ಚಟುವಟಿಕೆ ನಿಲ್ಲುವುದಿಲ್ಲ. ಈಗಲೇ ನೇರ ಕ್ರಮ ಕೈಗೊಂಡರೆ ಉತ್ತಮ” ಎಂದಿದ್ದಾರೆ.
”ಕೇಂದ್ರದ ಮೋದಿ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದಕರು ಪಹಲ್ಗಾಮ್ ಪ್ರವೇಶಿಸಿ ಪ್ರವಾಸಿಗರನ್ನು ಹೇಗೆ ಗುರಿಯಾಗಿಸಿಕೊಂಡರು? ಸುರಕ್ಷಿತ ಕಾಶ್ಮೀರದ ನಿಮ್ಮ ಹೇಳಿಕೆಗಳು ಈಗ ಎಲ್ಲಿಗೆ ಹೋಗಿವೆ? 370 ತೆಗೆದುಹಾಕಿದ ನಂತರ ಕಾಶ್ಮೀರದಲ್ಲಿ ಶಾಂತಿಯ ಭರವಸೆಗಳು ಏನಾದವು?” ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.