ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆ 200 ರಿಂದ 300 ಕಿ.ಮೀ.ಗಳಷ್ಟು ದೂರ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವರದಿಯಾಗಿದೆ.
ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಲಕ್ಷಗಟ್ಟಲೆ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ನೂರಾರು ಕಿಲೋಮೀಟರ್ಗಳಷ್ಟು ದೂರದಲ್ಲಿ ಮುಂದಕ್ಕೆ ಪ್ರಯಾಣ ಸಾಧ್ಯವಾಗದೆ ಭಕ್ತರು ದಿನಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಯಾಗ್ ರಾಜ್ನಿಂದ ಮಧ್ಯಪ್ರದೇಶದ ರೇವಾ, ಜಬಲ್ ಪುರ,ಸಿಯೋನಿ, ಕಟ್ನಿವರೆಗೆ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಬಸಂತ್ ಪಂಚಮಿಯ ಶಾಹಿ ಸ್ನಾನದ ನಂತರ ಜನಸ್ತೋಮ ಕಡಿಮೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಫೆ.12ರ ಶಾಹಿ ಸ್ನಾನಕ್ಕಾಗಿ ಲಕ್ಷಾಂತರ ಮಂದಿ ಪ್ರಯಾಗ್ ರಾಜ್ಗೆ ಆಗಮಿಸಿದ್ದಾರೆ. ಜನಸಂದಣಿಯನ್ನು ತಡೆಯಲು ಪ್ರಯಾಗ್ ರಾಜ್ ಕಡೆಗೆ ಹೋಗುವ ಹಲವಾರು ವಾಹನಗಳನ್ನು ವಿವಿಧ ಪ್ರದೇಶಗಳಲ್ಲಿ ತಡೆ ಹಿಡಿಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?
ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಕಟ್ನಿಯಲ್ಲಿ ಸುಮಾರು 250 ಕಿಲೋಮೀಟರ್ ಗಳಷ್ಟು ದೂರದಲ್ಲಿ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ. ಮಹಾಕುಂಭ ಮೇಳಕ್ಕೆ ಹೆಚ್ಚಿನ ಭಕ್ತರ ಆಗಮನದಿಂದ ಸಾಕಷ್ಟು ಸಂಚಾರ ದಟ್ಟಣೆಯಿತ್ತು ಎಂದು ರೇವಾ ವಲಯದ ಪೊಲೀಸ್ ಮಹಾನಿರೀಕ್ಷಕ ಸಾಕೇತ್ ಪ್ರಕಾಶ್ ಪಾಂಡೆ ಹೇಳಿದ್ದಾರೆ.
ವಾಹನಗಳು ಎರಡು ದಿನಗಳಿಂದ ಸಂಚಾರ ದಟ್ಟಣೆಗೆ ಸಿಲುಕಿವೆ. ಕೇವಲ 50 ಕಿ.ಮೀ ಚಲಿಸಲು 10 ರಿಂದ 12 ಗಂಟೆ ಸಮಯವಾಗುತ್ತಿದೆ.