ಜಾಮೀನಿನ ಮೇಲೆ ಹೊರಗಿರುವ ಆರೋಪಿಗೆ ಸಂಬಂಧಿಕರ ಮದುವೆಗಾಗಿ ಅಥವಾ ವಿದೇಶ ಪ್ರವಾಸಕ್ಕೆ ಅನುಮತಿ ಕೋರುವ ಹಕ್ಕಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ವಿಚಾರಣಾಧೀನದಲ್ಲಿರುವ ಆರೋಪಿಯೊಬ್ಬರು ಸಂಬಂಧಿಕರ ಮದುವೆಗಾಗಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಲು ಅಥವಾ ಪ್ರವಾಸಕ್ಕಾಗಿ ಬೇರೆ ದೇಶಕ್ಕೆ ಹೋಗಲು ಅನುಮತಿ ಪಡೆಯಲಾಗದು ಎಂದು ಲಕ್ನೋ ನ್ಯಾಯಾಲಯದ ಪೀಠ ಹೇಳಿದೆ.
ಬರೇಲಿಯ ಶ್ರೀ ರಾಮ ಮೂರ್ತಿ ಸ್ಮಾರಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಲಹೆಗಾರ ಆದಿತ್ಯ ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಈ ತೀರ್ಪು ನೀಡಿದ್ದಾರೆ. ಮೂರ್ತಿ ಅವರು ತಮ್ಮ ಸಂಬಂಧಿಕರ ಮದುವೆಗಾಗಿ ಅಮೆರಿಕಕ್ಕೆ ಮತ್ತು ನಂತರ ಮೇ 3ರಿಂದ 22ರವರೆಗೆ ಸಂಬಂಧಿತ ಆಚರಣೆಗಾಗಿ ಫ್ರಾನ್ಸ್ಗೆ ಪ್ರಯಾಣಿಸಲು ಅನುಮತಿ ಕೋರಿದ್ದರು.
ಇದನ್ನು ಓದಿದ್ದೀರಾ? ಮಹಿಳೆಯ ಸ್ತನಗಳನ್ನು ಹಿಡಿಯುವುದು, ಪೈಜಾಮಾ ಲಾಡಿ ಎಳೆಯುವುದು ಅತ್ಯಾಚಾರ ಯತ್ನವಲ್ಲ: ಅಲಹಾಬಾದ್ ಹೈಕೋರ್ಟ್
“ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗೆ ವೈದ್ಯಕೀಯ ಚಿಕಿತ್ಸೆ, ಅಗತ್ಯ ಅಧಿಕೃತ ಕರ್ತವ್ಯಗಳಿಗೆ ಹಾಜರಾಗುವುದು ಮುಂತಾದ ತುರ್ತು ಅಗತ್ಯಗಳಿಗಾಗಿ ವಿದೇಶ ಪ್ರವಾಸಕ್ಕೆ ಅನುಮತಿ ನೀಡಬಹುದು. ಆದರೆ ಸಂಬಂಧಿಕರ ಮದುವೆಗೆ ಹಾಜರಾಗುವುದು ತುರ್ತು ಅಗತ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
ಅನಗತ್ಯ ಉದ್ದೇಶಗಳಿಗಾಗಿ ತನಗೆ ಈ ಹಿಂದೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯವು ಪರಿಗಣಿಸಿದೆ. “ವಿಚಾರಣಾ ನ್ಯಾಯಾಲಯವು ಅರ್ಜಿದಾರರಿಗೆ ಹಲವು ಸಂದರ್ಭಗಳಲ್ಲಿ ಅನಗತ್ಯ ಕಾರಣಗಳಿಗಾಗಿ ವಿದೇಶ ಪ್ರಯಾಣ ಮಾಡಲು ಅನುಮತಿ ನೀಡಿದೆ. ಈ ಬಾರಿಯೂ ಅವರು ಅನಗತ್ಯ ಕಾರಣಕ್ಕೆ ವಿದೇಶ ಪ್ರಯಾಣ ಮಾಡುವ ಹಕ್ಕನ್ನು ಹೊಂದಿಲ್ಲ” ಎಂದು ಹೇಳಿದೆ.
ಮೂರ್ತಿ ಒಂದು ದಶಕಕ್ಕೂ ಹೆಚ್ಚು ಕಾಲ ಸಿಬಿಐ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಹ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
