ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತದಿಂದ ಇಡೀ ದೇಶವೇ ಆತಂಕಗೊಂಡಿದೆ. ದುರ್ಘಟನೆಯಲ್ಲಿ 245 ಪ್ರಯಾಣಿಕರು, ವಿಮಾನ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಮಾತ್ರವಲ್ಲ, ವಿಮಾನವು ಪತನಗೊಂಡು ಬಿದ್ದ ಹಾಸ್ಟೆಲ್ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ. ಆದರೆ, ಮೃತಪಟ್ಟ ವಿದ್ಯಾರ್ಥಿಗಳ ಮಾಹಿತಿ ನಿಗೂಢವೆಂಬಂತೆ ಕಳೆದುಹೋಗಿದೆ.
ಈವರೆಗೆ, ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರು ಮತ್ತು ಏರ್ ಇಂಡಿಯಾ ಸಿಬ್ಬಂದಿಗಳು ಹೆಸರು, ಫೋಟೋಗಳು, ಅವರ ನಿವಾಸ, ಅವರುಗಳ ಆಸೆ, ಕನಸು ಸೇರಿದಂತೆ ಬಹುತೇಕ ಎಲ್ಲವೂ ಕೂಡ ವರದಿಯಾಗಿವೆ, ಚರ್ಚೆಗೆ ಬಂದಿವೆ, ಸಾರ್ವಜನಿಕರ ಗಮನ ಸೆಳೆದಿವೆ ಆದರೆ, ಇದೇ ದುರಂತದಲ್ಲಿ ಸಾವನ್ನಪ್ಪಿದ ಎಂಬಿಬಿಎಸ್ ವಿದ್ಯಾರ್ಥಿಗಳ ಮಾಹಿತಿ ದೊರೆತಿಲ್ಲ. ಆರಂಭದಲ್ಲಿ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದಷ್ಟೇ ವರದಿಯಾಗಿತ್ತು. ಆ ಬಳಿಕ, ಯಾವುದೇ ಮಾಹಿತಿಯಿಲ್ಲ.
ಹಾಸ್ಟೆಲ್ನಲ್ಲಿದ್ದ ಒಟ್ಟು ವಿದ್ಯಾರ್ಥಿಗಳು ಎಷ್ಟು? ಅವರಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ. ಅವರ ಹೆಸರುಗಳೆನು? ಯಾವುವೂ ಬಹಿರಂಗಗೊಂಡಿಲ್ಲ. ಸರ್ಕಾರಗಳು ಖಚಿತ ಅಂಕಿಅಂಶಗಳನ್ನು ಒದಗಿಸಿಲ್ಲ. ಹೀಗಾಗಿ, ಮೃತಪಟ್ಟ ವಿದ್ಯಾರ್ಥಿಗಳ ಮಾಹಿತಿ-ಅಂಕಿಅಂಶವನ್ನು ಕೇಂದ್ರ ಸರ್ಕಾರ ಹಾಗೂ ಗುಜರಾತ್ ರಾಜ್ಯ ಸರ್ಕಾರ ಎರಡಲ್ಲು ಅಧಿಕಾರಿದಲ್ಲಿರುವ ಬಿಜೆಪಿ ಮುಚ್ಚಿಹಾಕಿದೆ ಅಥವಾ ಬಚ್ಚಿಟ್ಟಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಇತ್ತೀಚೆಗೆ, ವಾಟ್ಸ್ ಆ್ಯಪ್ನಲ್ಲಿ ಸಂದೇಶವೊಂದು ಹರಿದಾಡಿತ್ತು. ಅದರಲ್ಲಿ, “ನಮ್ಮ ದೇಶದ ಪೋಷಕರಿಗೆ ಸಾಮಾನ್ಯವಾಗಿ ಇರುವ ಆಸೆಯೊಂದೇ. ಮಕ್ಕಳು ವೈದ್ಯರಾಗಬೇಕೆನ್ನುವುದು. ವೈದ್ಯರಾಗುವುದು ಎಂದರೆ ಅದೊಂದು ಸಾಧನೆ. ಪ್ರಿವಿಲೇಜ್ ಇಲ್ಲದವರಿಗಂತೂ ನೀಟ್ ಪ್ರವೇಶ ಪರೀಕ್ಷೆಯೆ ಕಬ್ಬಿಣದ ಕಡಲೆ. ಅವರಿಗೆ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವುದೇ ಒಂದು ಘೋರ ತಪಸ್ಸು, ತ್ಯಾಗ, ನಿಟ್ಟುಸಿರು. ಆದರೆ ವೈದ್ಯರನ್ನು ನಮ್ಮ ದೇಶ ಹೇಗೆ ಟ್ರೀಟ್ ಮಾಡುತ್ತೆ? ಇತ್ತಿಚಿಗೆ ಅಹಮದಾಬಾದ್ನ ಬೀಜೇಮ್ ವೈದ್ಯಕೀಯ ಕಾಲೇಜಿನ ಮೇಲೆ ಪತನಗೊಂಡ ಏರ್ ಇಂಡಿಯಾ ದುರಂತದಲ್ಲಿ ಸತ್ತ ಯುವ ವೈದ್ಯರ ಕುರಿತಾದ ಸುದ್ದಿಯೆಲ್ಲಿ? ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಎಷ್ಟು? ಸಾವನ್ನಪ್ಪಿದ ಯುವ ವೈದ್ಯರ ಬಗ್ಗೆ ಯಾವುದೇ ಮಾಹಿತಿ ದೊರೆಯುತ್ತಿಲ್ಲ! ಯಾಕೆ” ಎಂದು ಸಂದೇಶದಲ್ಲಿ ಪ್ರಶ್ನಿಸಲಾಗಿತ್ತು.
ಆದರೆ, ದುರಂತದಲ್ಲಿ ನಾಶವಾದ ಹಾಸ್ಟೆಲ್ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಮಾಧ್ಯಮಗಳೂ ಪ್ರಶ್ನಿಸುತ್ತಿಲ್ಲ. ಮಾಧ್ಯಮಗಳು ಕೂಡ ಮೌನಕ್ಕೆ ಜಾರಿಗೆ, ಜಾಣ ಕಿವುಡು-ಕುರುಡುತನ ತೋರಿಸುತ್ತಿವೆ.
ಈ ಲೇಖನ ಓದಿದ್ದೀರಾ?: ಮೃತದೇಹ ಪತ್ತೆ ಹಚ್ಚಲು ಡಿಎನ್ಎ ಪ್ರೊಫೈಲಿಂಗ್: ಹಾಗೆಂದರೇನು, ಏನಿದರ ಮಹತ್ವ?
ವರದಿಯೊಂದರ ಪ್ರಕಾರ, ಅಂದು ದುರಂತ ಸಂಭವಿಸಿದಾಗ ವೈದ್ಯಕೀಯ ಹಾಸ್ಟೆಲ್ನಲ್ಲಿ 38 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು. ಆದರೆ, ದುರಂತ ಘಟಿಸಿದಾಗ 4 ಮಂದಿ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ ಎಂಬ ವರದಿ ಬಂದಿದ್ದರ ಹೊರತಾಗಿ, ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಇನ್ನಾವುದೇ ಮಾಹಿತಿ ಬಂದಿಲ್ಲ.
ಆ 38 ವಿದ್ಯಾರ್ಥಿಗಳ ಏನಾದರು ಎಂಬ ಬಗ್ಗೆ ಸರ್ಕಾರ, ಪೊಲೀಸ್, ಹಾಸ್ಟೆಲ್ ನಿರ್ವಹಿಸುತ್ತಿದ್ದವರು ಯಾರೊಬ್ಬರೂ ಯಾವುದೇ ಮಾಹಿತಿ ನೀಡಿಲ್ಲ. ಆ ವಿದ್ಯಾಥಿಗಳ ಚಿತ್ರ, ಹೆಸರು ಯಾವುದೂ ಹೊರಬಂದಿಲ್ಲ. ಹಾಸ್ಟೆಲ್ನ ಮಾಲೀಕ ಸಂಸ್ಥೆ ಬೀಜೇಎಮ್ ಕಾಲೇಜಿನ ಪ್ರತಿಕ್ರಿಯೆ, ಸಹಪಾಠಿಗಳ ಅಳಲು, ಕುಟುಂಬಸ್ಥರು ಆಕ್ರಂದನ, ಪ್ರಾಧ್ಯಾಪಕರ ಸಾಂತ್ವನ, ಶ್ರದ್ಧಾಂಜಲಿ ಯಾವುದೂ ಕಾಣುತ್ತಿಲ್ಲ. ವರದಿಯಾಗುತ್ತಿಲ್ಲ.
ಇದು, ವೈದ್ಯಕೀಯ ವಿದ್ಯಾರ್ಥಿಗಳ ಸಾವಿನ ಮಾಹಿತಿ, ಅಂಕಿಅಂಶಗಳನ್ನು ಮುಚ್ಚಿ ಹಾಕಲಾಗುತ್ತಿದೆಯೇ, ಅವರ ಹೆಸರುಗಳೇ ಸಿಗದಂತೆ ಅಳಿಸಲಾಗಿದೆಯೇ ಎಂಬ ಗಂಭೀರ ಅನುಮಾನವನ್ನು ಹುಟ್ಟುಹಾಕುತ್ತಿವೆ.
ಕೇಂದ್ರ ಸರ್ಕಾರದ ವಿರುದ್ಧ ಇಂತಹ ಅನುಮಾನಗಳು ಸಹಜವೇ ಆಗಿದೆ. ಯಾಕೆಂದರೆ, ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವೊಂದು ಅಂಕಿಅಂಶಗಳನ್ನು ಸರಿಯಾಗಿ ನೀಡಿದ ನಿರ್ವಹಿಸಿದ ಉದಾಹರಣೆಯಿಲ್ಲ.
ರೈತರ ಆತ್ಮಹತ್ಯೆ, ತಾಯಿ-ಶಿಶು ಮರಣ ಪ್ರಮಾಣ, ಅತ್ಯಾಚಾರ ದೌರ್ಜನ್ಯಳು, ಕೋಮು ಕೊಲೆಗಳು ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ನಿಖರ ಅಂಕಿಅಂಶಗಳನ್ನು ಸರ್ಕಾರದ ಹೊಂದಿಲ್ಲ. ಬಹಿರಂಗಪಡಿಸಿಲ್ಲ.
ಅಷ್ಟೇ ಯಾಕೆ? ಇಡೀ ಜಗತ್ತನ್ನೇ ಅಕ್ರಮಿಸಿಕೊಂಡು, ನಲುಗುವಂತೆ ಮಾಡಿದ ಕೊರೋನಾ ಸಾಂಕ್ರಾಮಿಕದಿಂದ ಭಾರತದಲ್ಲಿ ನಿಜಕ್ಕೂ ಎಷ್ಟು ಮಂದಿ ಸಾವನ್ನಪ್ಪಿದರು ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಕೇಂದ್ರ ಸರ್ಕಾರವು 2021ರಲ್ಲಿ ನೀಡಿದ ಅಂಕಿಅಂಶದಲ್ಲಿ ಭಾರರದಲ್ಲಿ 5 ಲಕ್ಷ ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿತ್ತು. ಆದರೆ, ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿ ಕನಿಷ್ಠ 47 ಲಕ್ಷ ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಹೇಳಿತು. ಆದರೂ, ಈಗಲೂ ಕೇಂದ್ರ ಸರ್ಕಾರವು ಕೋವಿಡ್ನಿಂದ ಸತ್ತವರ ಸಂಖ್ಯೆ 5 ಲಕ್ಷ ಮಾತ್ರವೇ ಎಂದೇ ವಾದಿಸುತ್ತಿದೆ.
ಈ ಲೇಖನ ಓದಿದ್ದೀರಾ?: ಹಿಟ್ಲರ್ ತದ್ರೂಪಿ ಇಸ್ರೇಲ್ ಪ್ರಧಾನಿ ನೇತನ್ಯಾಹು?
ಆದರೆ, 2021ರಲ್ಲಿ ದೇಶಾದ್ಯಂತ ಎದುರಾಗಿದ್ದ ಬಿಕ್ಕಟ್ಟು, ನದಿಗಳನ್ನು ತೇಲಿದ ಮೃತದೇಹಗಳು, ಬೀದಿ-ಬೀದಿಯಲ್ಲಿ ಅಂತ್ಯಕ್ರಿಯೆಗಾಗಿ ಸಾಲುಗಟ್ಟಿದ್ದ ಆಂಬುಲೆನ್ಸ್ಗಳು ಹಾಗೂ ಡಬ್ಲ್ಯೂಟಿಒದ ವರದಿಗಳು ಕೇಂದ್ರ ಸರ್ಕಾರದ ನೀಡಿರುವ ಅಂಕಿಅಂಶಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿವೆ.
ಇನ್ನು, 2025ರ ಜನವರಿ 29ರಂದು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಆದಾಗ್ಯೂ, ಉತ್ತರ ಪ್ರದೇಶ ಸರ್ಕಾರವು 37 ಜನರು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ, ಬಿಬಿಸಿ ಇತ್ತೀಚೆಗೆ ಬಹಿರಂಗಪಡಿಸಿದ ವರದಿಯಲ್ಲಿ ಕನಿಷ್ಠ 82 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದೆ. ಅಲ್ಲದೆ, ಅನೇಕರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಕಾಣೆಯಾದವರ ಬಗ್ಗೆ ಸರ್ಕಾರ ಈವರೆಗೆ ಯಾವುದೇ ಮಾಹಿತಿ, ಅಂಕಿ-ಅಂಶ ನೀಡಿಲ್ಲ.
ಇಂತಹ ಹಲವಾರು ನಿದರ್ಶನಗಳು ಕೇಂದ್ರ ಸರ್ಕಾರವು ದುರಂತಗಳಲ್ಲಿ ಸತ್ತವರ ಮಾಹಿತಿಯನ್ನು ಮರೆಮಾಚುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮಾತ್ರವಲ್ಲ, ಈ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ದುರಂತಗಳ ಸಂದರ್ಭದಲ್ಲಿ ಸರ್ಕಾರದ ಮೌನ, ನಿರ್ಲಕ್ಷ್ಯ ಹಾಗೂ ಪಾರದರ್ಶಕತೆಯ ಕೊರತೆಯು ಸಾರ್ವಜನಿಕರಲ್ಲಿ ಭಯ, ಗೊಂದಲ ಮತ್ತು ಅಪನಂಬಿಕೆಯನ್ನು ಹುಟ್ಟುಹಾಕುತ್ತದೆ. ಸರ್ಕಾರವು ಸ್ಪಷ್ಟ ಮಾಹಿತಿ ನೀಡದೇ ಇರುವುದು ಮತ್ತು ಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಆಡಳಿತದ ಮೇಲಿನ ವಿಶ್ವಾಸಾರ್ಹತೆಯನ್ನು ಕುಂದಿಸುತ್ತಿದೆ ಎಂಬ ಮಾತುಗಳಿವೆ.
ಅಹಮದಾಬಾದ್ ವಿಮಾನ ದುರಂತದಲ್ಲಿ ಹತರಾದ ವೈದ್ಯಕೀಯ ವಿದ್ಯಾರ್ಥಿಗಳ ಮಾಹಿತಿ ನೀಡಲು ಕೇಂದ್ರ ಸರ್ಕಾರ ಮತ್ತು ಗುಜರಾತ್ ಬಿಜೆಪಿ ಸರ್ಕಾರ ಇನ್ನೂ ಎಷ್ಟು ದಿನಗಳು ಅಥವಾ ತಿಂಗಳುಗಳು ಅಥವಾ ವರ್ಷಗಳನ್ನು ತೆಗೆದುಕೊಳ್ಳಬಹುದು? ಕಾದು ನೋಡಬೇಕಷ್ಟೇ!