ಖಾಸಗಿ ಟಿವಿ ವಾಹಿನಿಯೊಂದರ ಚರ್ಚೆಯಲ್ಲಿ ‘ಎಲ್ಲ ಮುಸ್ಲಿಮರು ಭಯೋತ್ಪಾದಕರು’ ಎಂದು ಕೋಮುದ್ವೇಷ ಮತ್ತು ಸಮುದಾಯ ನಿಂದನೆ ಮಾಡಿದ್ದ ಬಿಜೆಪಿ ನಾಯಕ ಪಿ.ಸಿ ಜಾರ್ಜ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ‘ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ’ ಎಂದಿರುವ ನ್ಯಾಯಾಲಯ ಜಾರ್ಜ್ ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸಿದೆ.
ಇದೇ ವರ್ಷದ ಜನವರಿ 5ರಂದು ಟಿವಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪಿ.ಸಿ ಜಾರ್ಜ್, “ಭಾರತದಲ್ಲಿರುವ ಎಲ್ಲ ಮುಸ್ಲಿಮರು ಭಯೋತ್ಪಾದಕರು ಮತ್ತು ಕೋಮುವಾದಿಗಳು. ಭಾರತದಲ್ಲಿ ಭಯೋತ್ಪಾದಕರಲ್ಲದ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಮುಸ್ಲಿಮರು ದೇಶದ ಸಂಪತ್ತನ್ನು ಲೂಟಿ ಮಾಡುವ ಲೂಟಿಕೋರರು. ಮುಸ್ಲಿಂ ರಾಷ್ಟ್ರವನ್ನು ರಚಿಸಲು ಮುಸ್ಲಿಮರು ಲಕ್ಷಾಂತರ ಹಿಂದುಗಳು ಮತ್ತು ಕ್ರಿಶ್ಚಿಯನ್ನರನ್ನು ಹತ್ಯೆ ಮಾಡಿದ್ದಾರೆ. ಭಾರತದಲ್ಲಿರುವ ಎಲ್ಲ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಎಲ್ಲ ಮುಸ್ಲಿಮರು ಕೋಮು ರಾಕ್ಷಸರು ಮತ್ತು ದುಷ್ಟರು” ಎಂದು ಹೇಳಿದ್ದರು.
ಕೋಮುದ್ವೇಷದ ಹೇಳಿಕೆ ನೀಡಿದ್ದ ಜಾರ್ಜ್ ವಿರುದ್ಧ ಬಿಎನ್ಎಸ್ ಸೆಕ್ಷನ್ 196(1)(ಎ) ಮತ್ತು 299 ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120(ಒ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯನ್ನು ಆಲಿಸಿರುವ ನ್ಯಾಯಾಲಯ, “ರಾಜಕಾರಣಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಧರ್ಮ, ಜಾತಿ ಇತ್ಯಾದಿಗಳನ್ನು ಆಧರಿಸಿ ಹೇಳಿಕೆಗಳನ್ನು ನೀಡುವ ಇಂದಿನ ಪ್ರವೃತ್ತಿಯನ್ನು ಚಿಗುರಿನಲ್ಲೇ ಕಿತ್ತೊಗೆಯಬೇಕು. ಏಕೆಂದರೆ ಅವು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ” ಎಂದು ಹೇಳಿದೆ. ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಜಾರ್ಜ್ ಅವರಂತೆ ದ್ವೇಷದ ಹೇಳಿಕೆಗಳನ್ನು ನೀಡುವ ಪ್ರಕರಣಗಳಲ್ಲಿ ಕಡ್ಡಾಯವಾಗಿ ಜೈಲು ಶಿಕ್ಷೆ ವಿಧಿಸುವ ಅಗತ್ಯತೆಯ ಬಗ್ಗೆ ಉಲ್ಲೇಖಿಸಿರುವ ಕೋರ್ಟ್, “ಇಂತಹ (ದ್ವೇಷದ) ಹೇಳಿಕೆಗಳನ್ನು ನೀಡುವ ಅಪರಾಧಿಗೆ ಕೇವಲ ದಂಡ ವಿಧಿಸುವ ಮೂಲಕ ತಪ್ಪಿಸಿಕೊಳ್ಳಲು ಅವಕಾಶ ನೀಡಬೇಕೇ ಎಂಬುದರ ಬಗ್ಗೆ ಸಂಸತ್ತು ಮತ್ತು ಕಾನೂನು ಆಯೋಗ ತೀರ್ಮಾನಿಸಬೇಕು” ಎಂದು ಅಭಿಪ್ರಾಯಪಟ್ಟಿದೆ.
2022ರಲ್ಲಿ ಜಾರ್ಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗ, ಆಗಲೂ ಜಾರ್ಜ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಆ ವೇಳೆ, “ಐಪಿಸಿ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಅಪರಾಧಗಳಿಗೆ ಕಾರಣವಾಗುವ ಯಾವುದೇ ಹೇಳಿಕೆಯನ್ನು ನೀಡಬಾರದು” ಎಂದು ಷರತ್ತು ವಿಧಿಸಿದ್ದ ಕೋರ್ಟ್, ಜಾಮೀನು ನೀಡಿತ್ತು.
ಆದರೂ, ಜಾರ್ಜ್ ತಮ್ಮ ಕೋಮುದ್ವೇಷದ ಭಾಷಣವನ್ನು ಮುಂದುವರೆಸಿದ್ದಾರೆ. “ಜಾರ್ಜ್ ಅವರು 2022ರಲ್ಲಿ ನೀಡಲಾದ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ, ಈಗ ಜಾಮೀನು ಕೊಟ್ಟರೆ ‘ಸಮಾಜಕ್ಕೆ ತಪ್ಪು ಸಂದೇಶ’ ನೀಡಿದಂತಾಗುತ್ತದೆ” ಎಂದು ಹೈಕೋರ್ಟ್ ಹೇಳಿದೆ.
ಈ ವರದಿ ಓದಿದ್ದೀರಾ?: ಅನ್ನಭಾಗ್ಯದಲ್ಲಿ 10 ಕೆಜಿ ಅಕ್ಕಿಯೇ ಯಾಕೆ? ಉತ್ತಮ ಪರ್ಯಾಯಗಳೂ ಇವೆಯಲ್ಲವೇ?
“ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದರೂ, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಸಿಗುತ್ತದೆ ಎಂದು ಜನರು ಭಾವಿಸಬಹುದು. ಅಂತಹ ಸಂದೇಶ ಸಮಾಜಕ್ಕೆ ಹೋಗಬಾರದು. ಆದ್ದರಿಂದ, ಅರ್ಜಿದಾರರು (ಜಾರ್ಜ್) ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ” ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್ ತಿಳಿಸಿದ್ದಾರೆ.
“ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ನಿಂದನಾತ್ಮಕ ಹೇಳಿಕೆಗಳನ್ನು ನೀಡಿ, ಬಳಿಕ ಕ್ಷಮೆಯಾಚಿಸಿದರೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
“ಒಂದು ಚಾನೆಲ್ನ ನೇರ ಪ್ರಸಾರದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ, ಲಕ್ಷಾಂತರ ಜನರು ಇದನ್ನು ವೀಕ್ಷಿಸುತ್ತಿದ್ದಾರೆ ಎಂಬ ಪರಿಜ್ಞಾನ ಅರ್ಜಿದಾರರಿಗೆ (ಜಾರ್ಜ್) ಇರಬೇಕಿತ್ತು. ಅಲ್ಲದೆ, ಮರುದಿನ ಫೇಸ್ಬುಕ್ನಲ್ಲಿ ಕ್ಷಮೆಯಾಚಿಸಿ ಪೋಸ್ಟ್ ಹಾಕುವುದು ಅಲ್ಲ. ಆದ್ದರಿಂದ, ಅರ್ಜಿದಾರರು ಕ್ಷಮೆಯಾಚಿಸಿದ ಮಾತ್ರಕ್ಕೆ ಅಪರಾಧ ಅಳಿಸಿಹೋಗುತ್ತದೆ ಎಂಬುದನ್ನು ನಾನು ಒಪ್ಪಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್ ಹೇಳಿದ್ದಾರೆ.
ದೇಶದ ಕಾನೂನು ಇನ್ನೂ ಜೀವಂತ ಇದೆ
ಇನ್ನೂ ನ್ಯಾಯ ಕೊಡುವ ನ್ಯಾಯ ಅಧಿಕಾರಿ ಇದ್ದಾರೆ ಬಾಯಿಗೆ ಬಂದಾಗೆಲ್ಲ ಬೌಗಳುವ ಎಲ್ಲ ಕೋಮು ವಾದಿಗಳಿಗೆ ಎಚ್ಚರಿಕೆಯ ತೀರ್ಮಾನ