ಮೋದಿ ಸರ್ಕಾರದ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಖಂಡಿಸಿದ್ದು,ಶಿಕ್ಷಣದಲ್ಲಿ ಅಧಿಕಾರ ಕೇಂದ್ರೀಕರಣ, ಖಾಸಗಿ ವಲಯಗಳಿಗೆ ಹೊರ ಗುತ್ತಿಗೆ ನೀಡುವ ಮೂಲಕ ವಾಣಿಜ್ಯೀಕರಣ ಹಾಗೂ ಪಠ್ಯಪುಸ್ತಕಗಳು, ಪಠ್ಯ ಕ್ರಮ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕೋಮುವಾದೀಕರಣಗೊಳಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯಿಂದ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ಬೆಳಕು ಚಲ್ಲಿದ್ದಾರೆ.
‘ಇಂದು ಕಗ್ಗೊಲೆಯಾಗುತ್ತಿರುವ ಭಾರತೀಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಖಂಡಿತಾ ಅಂತ್ಯವಾಗಬೇಕು. ಮಕ್ಕಳು ಹಾಗೂ ಯುವಕರ ಬಗ್ಗೆ ಅಸಡ್ಡೆ ಹೊಂದಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ(2020)ಯಲ್ಲಿ ವಾಸ್ತವಾಂಶಗಳನ್ನು ಬಚ್ಚಿಟ್ಟು ತಪ್ಪುಗಳನ್ನು ಬಿಂಬಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹತ್ವದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಾಗ ರಾಜ್ಯ ಸರಕಾರಗಳನ್ನು ಕೈಬಿಡುವ ಮೂಲಕ, ಕೇಂದ್ರ ಸರ್ಕಾರ ಶಿಕ್ಷಣದ ಒಕ್ಕೂಟ ಸ್ವರೂಪವನ್ನು ಕಡೆಗಣಿಸಿದೆ’ ಎಂದು ಆರೋಪಿಸಿದ್ದಾರೆ.
ಕೇಂದ್ರೀಕರಣ ಈ ಸರಕಾರದ ಕಳೆದ 11 ವರ್ಷಗಳ ಕಾರ್ಯವೈಖರಿಯ ಗುಣಲಕ್ಷಣವಾಗಿದೆ. ಆದರೆ, ಇದರಿಂದ ತುಂಬಾ ಅಪಾಯಕಾರಿ ದುಷ್ಪರಿಣಾಮವಾಗಿರುವುದು ಶಿಕ್ಷಣ ವಲಯದ ಮೇಲೆ. ಕೇಂದ್ರ ಶಿಕ್ಷಣ ಸಚಿವರು ಹಾಗೂ ರಾಜ್ಯಗಳ ಶಿಕ್ಷಣ ಸಚಿವರನ್ನೊಳಗೊಂಡ ಕೇಂದ್ರ ಶಿಕ್ಷಣ ಸಲಹಾ ಸಮಿತಿಯ ಸಭೆ 2019ರಿಂದಾಚೆಗೆ ಆಯೋಜನೆಗೊಂಡಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!
ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸದೆ, ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಕೇಂದ್ರ ಸರಕಾರ ಏಕಪಕ್ಷೀಯವಾಗಿ ಜಾರಿಗೊಳಿಸಿದೆ. ಶಿಕ್ಷಣವನ್ನು ತಳಮಟ್ಟದಿಂದ ಮರು ರೂಪಿಸುವ ನೀತಿಯನ್ನು ಪರಿಚಯಿಸಲಾಗಿದ್ದರೂ, ಈ ನೀತಿಯ ಜಾರಿಯ ಕುರಿತು ಕೇಂದ್ರ ಸರಕಾರ ಒಮ್ಮೆಯೂ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಕಾಂಗ್ರೆಸ್ ನಾಯಕಿ ಟೀಕಿಸಿದ್ದಾರೆ.
ಶಿಕ್ಷಣವು ಸಂವಿಧಾನದ ಸಹವರ್ತಿ ಪಟ್ಟಿಯಡಿ ಬರುತ್ತದೆ ಎಂಬುದರತ್ತ ಬೊಟ್ಟು ಮಾಡಿರುವ ಅವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರಗಳ ನಡುವೆ ದೊಡ್ಡ ಪ್ರಮಾಣದ ಸಹಕಾರವಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕೇಂದ್ರ ಸರಕಾರವು ಪ್ರಜಾತಾಂತ್ರಿಕ ಸಮಾಲೋಚನೆಯನ್ನು ಅಗೌರವಿಸುತ್ತಿದೆ ಹಾಗೂ ವೈವಿಧ್ಯಮಯ ಪ್ರಾದೇಶಿಕ ಭಾವನೆಗಳನ್ನು ಪರಿಗಣಿಸದೆ ನೀತಿಗಳನ್ನು ಹೇರುತ್ತಿದೆ ಎಂದು ಸೋನಿಯಾ ಗಾಂಧಿ ದೂರಿದ್ದಾರೆ.