ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಮಗೆ ಪ್ರಶ್ನೆ ಕೇಳಿದ ಮಹಿಳಾ ವರದಿಗಾರ್ತಿಯೊಬ್ಬರಿಗೆ ತೋರಿದ ವರ್ತನೆ ವಿವಾದವನ್ನು ಹುಟ್ಟುಹಾಕಿದ್ದು, ಇದರಿಂದ ಪತ್ರಕರ್ತರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಕೊಯಮತ್ತೂರಿನ ಸುದ್ದಿಗೋಷ್ಠಿಯೊಂದರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಲ್ಲದಿದ್ದರೆ ನೀವು ಬಿಜೆಪಿಯಲ್ಲೇ ಇರುತ್ತೀರಾ ಎಂದು ವರದಿಗಾರ್ತಿಯೊಬ್ಬರು ಅಣ್ಣಾಮಲೈ ಅವರನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಈ ಪ್ರಶ್ನೆ ಕೇಳಿದ ವರದಿಗಾರ್ತಿ ತನ್ನ ಬಳಿ ಬಂದು ನಿಂತುಕೊಳ್ಳುವಂತೆ ಕರೆದಿದ್ದಾರೆ. ಟಿವಿ ಮೂಲಕ ತಮಿಳುನಾಡಿನ ಎಂಟು ಕೋಟಿ ಜನತೆಯೂ ಇಂತಹ ಪ್ರಶ್ನೆ ಕೇಳುವುದು ಯಾರು ಎನ್ನುವುದು ನೋಡಲಿ, ನೀವು ಬಂದು ನನ್ನ ಪಕ್ಕದಲ್ಲಿ ನಿಂತುಕೊಳ್ಳಿ ಎಂದು ವರದಿಗಾರ್ತಿಗೆ ಅವಮಾನವಾಗುವಂತೆ ಉತ್ತರಿಸಿದ್ದಾರೆ.
“ಬನ್ನಿ ನನ್ನ ಪಕ್ಕದಲ್ಲಿ ನಿಲ್ಲಿ ನನಗೆ ಇಂತಹ ಪ್ರಶ್ನೆಯನ್ನು ಯಾರು ಕೇಳಿದ್ದಾರೆ ಎಂದು ಜನರು ಟಿವಿ ಮೂಲಕ ನೋಡಲಿ. ಪ್ರಶ್ನೆಗಳನ್ನು ಕೇಳಲು ಒಂದು ಮಾರ್ಗವಿದೆ. ಅಂತಹ ಅದ್ಭುತ ಪ್ರಶ್ನೆಯನ್ನು ಕೇಳಿದ ವ್ಯಕ್ತಿ ಎಂಟು ಕೋಟಿ ಜನರಿಗೆ ತಿಳಿದಿರಬೇಕು” ಎಂದು ಅಣ್ಣಾಮಲೈ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇರಳ | ತಪ್ಪು ಮಾಹಿತಿ ನೀಡಿದ ಗೂಗಲ್ ಮ್ಯಾಪ್: ಕಾರು ನದಿಗೆ ಉರುಳಿ ಇಬ್ಬರು ವೈದ್ಯರ ಸಾವು
ಅಣ್ಣಾಮಲೈ ಪದೇ ಪದೇ ಮಹಿಳಾ ವರದಿಗಾರ್ತಿಗೆ ಕ್ಯಾಮೆರಾಗಳ ಮುಂದೆ ನಿಲ್ಲುವಂತೆ ಕೇಳಿದ್ದಾರೆ. ಅದಕ್ಕೆ ಸ್ಥಳದಲ್ಲಿದ್ದ ಪತ್ರಕರ್ತರು ಆಕ್ಷೇಪಿಸಿದ್ದಾರೆ.
ವರದಿಗಾರರು ಸರಿಯಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲು ಮಾತ್ರ ಸಲಹೆ ನೀಡುತ್ತಿದ್ದೇನೆ, ಒಳ್ಳೆಯ ಉದ್ದೇಶದಿಂದ ನಾನು ನಿಮಗೆ ಸಲಹೆ ನೀಡುತ್ತಿದ್ದೇನೆ ಸಹೋದರಿ ಎಂದು ಅಣ್ಣಾಮಲೈ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ಅಣ್ಣಾಮಲೈ ಅವರ ಕ್ರಮವನ್ನು ತಮಿಳುನಾಡಿನ ವಿವಿಧ ಪತ್ರಕರ್ತ ಸಂಘಗಳು ತೀವ್ರವಾಗಿ ಖಂಡಿಸಿವೆ. ಪತ್ರಿಕೋದ್ಯಮ ನೀತಿಯನ್ನು ಸಾರುವ ಮೊದಲು ಅಣ್ಣಾಮಲೈ ಅವರು ನಾಯಕರಾಗುವ ನೀತಿಯನ್ನು ಕಲಿತು ಗೌರವಯುತವಾಗಿ ನಡೆದುಕೊಳ್ಳಬೇಕು. ಪತ್ರಿಕೋದ್ಯಮವು ನಾಗರಿಕರು ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರ ನಡುವೆ ಸೇತುವೆಯಾಗಿ ನಿಂತಿದೆ ಎಂದು ಕೊಯಮತ್ತೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎ ಆರ್ ಬಾಬು ತಿಳಿಸಿದ್ದಾರೆ.