ಛತ್ತೀಸ್ಗಢದಲ್ಲಿ ಕೇಂದ್ರ ಸರ್ಕಾರ ನಡೆಸಿರುವ ನಕ್ಸಲರ ಮತ್ತು ಆದಿವಾಸಿಗಳ ಮಾರಣಹೋಮವನ್ನು ‘ಶಾಂತಿಗಾಗಿ ನಾಗರೀಕರ ವೇದಿಕೆ’ ಖಂಡಿಸಿದೆ. ಮಾತುಕತೆ, ಶಾಂತಿ ಸಭೆಗಳ ಮೂಲಕ ಶಾಂತಿ ಮರುಸ್ಥಾಪಿಸಬೇಕೆಂದು ಆಗ್ರಹಿಸಿದೆ.
ಕೇಂದ್ರ ಸರ್ಕಾರದ CRPF, CoBRA, ಗ್ರೇ-ಹೌಂಡ್ ಪಡೆಗಳು ಛತ್ತೀಸ್ಗಢದಲ್ಲಿ ನಕ್ಸಲ್ ಹೋರಾಟಗಾರರನ್ನು ಕೊಲ್ಲುತ್ತಿರುವ ಕಾರ್ಯಾಚರಣೆಯನ್ನು ವೇದಿಕೆಯು ಖಂಡಿಸಿದೆ. ವೇದಿಕೆ ಪರವಾಗಿ ನೂರ್ ಶ್ರೀಧರ್, ನಗರಗೆರೆ ರಮೇಶ, ವಿ.ಎಸ್ ಶ್ರೀಧರ್, ತಾರಾ ರಾವ್ ಹಾಗೂ ಕೆ.ಪಿ. ಶ್ರೀಪಾಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಛತ್ತೀಸ್ಗಢದಲ್ಲಿ ಕಳೆದ ಆರು ತಿಂಗಳಿಂದ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ ಮೂಲಕ ನಕ್ಸಲ್ ಚಳವಳಿಯನ್ನು ಹತ್ತಿಕ್ಕಲು ತೀವ್ರತರವಾಗಿ ಪ್ರಯತ್ನಿಸುತ್ತಿದೆ. ಇದುವರೆಗೆ 300ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ ಕೆಲವರು ಪ್ರಮುಖ ನಕ್ಸಲರು ಇದ್ದಾರೆ. ಆದರೆ, ದೊಡ್ಡ ಸಂಖ್ಯೆಯಲ್ಲಿ ಆದಿವಾಸಿ ಯುವಕರನ್ನೂ ಸಹ ನಕ್ಸಲ್ ಹಣೆಪಟ್ಟಿ ಕಟ್ಟಿ ಕೊಲ್ಲಲಾಗಿದೆ” ಎಂದು ವೇದಿಕೆಯು ಆರೋಪಿಸಿದೆ.
“ಮಾರ್ಚ್ ಅಂತ್ಯದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ [ಮಾವೋಯಿಸ್ಸ್] ನಕ್ಸಲ್ ಸಂಘಟನೆಯು ಜನರ ಹಿತರಕ್ಷಣೆಯ ದೃಷ್ಟಿಯಿಂದ ತಾವು ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಂಘಟನೆಯು ತೆಲಂಗಾಣ, ಛತ್ತೀಸ್ಗಢ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಮಾತುಕತೆಯನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ ಏಪ್ರಿಲ್ 2೦ರಿಂದ ‘ಆಪರೇಷನ್ ಕಗಾರ್’ಅನ್ನು ಆರಂಭಿಸಿದೆ. 10,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ನಕ್ಸಲರ ಕೇಂದ್ರ ತಾಣವಾದ ಕಗಾರ್ ಗುಟ್ಟಲು ಪರ್ವತ ಶ್ರೇಣಿಗಳನ್ನು ಸುತ್ತುವರೆದು ನಕ್ಸಲರ ಮತ್ತು ಆದಿವಾಸಿಗಳ ಹತ್ಯೆಯನ್ನು ಮುಂದುವರೆಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಲೇಖನ ಓದಿದ್ದೀರಾ?: ಪಹಲ್ಗಾಮ್ ದಾಳಿಗೆ ಒಂದು ತಿಂಗಳು; ಸಿಂಧೂರ ಅಳಿಸಿದ ಹಂತಕರನ್ನು ಹಿಡಿದರೇ ಮೋದಿ?
“ಇತ್ತೀಚಿಗೆ, ಮಾವೋವಾದಿಗಳ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರನ್ನೂ ಒಳಗೊಂಡಂತೆ ಇನ್ನು ಅನೇಕರನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿದೆ. ಛತ್ತೀಸ್ಗಡದ ಮುಖ್ಯಮಂತ್ರಿ ವಿಷ್ಣು ದೇವ ಮತ್ತು ಕೇಂದ್ರ ಗೃಹ ಸಚಿವ ಅಮೀತ್ ಶಾ ಇಬ್ಬರೂ, ‘ಮಾತುಕತೆ ಇಲ್ಲ, ಕೇವಲ ನಿರ್ನಾಮ’ ಎಂದಿರುವುದು ಅವರ ರಕ್ತದಾಹಿ ಧೋರಣೆಯನ್ನು ಸೂಚಿಸುತ್ತದೆ” ಎಂದು ತೀವ್ರವಾಗಿ ಖಂಡಿಸಿದೆ.
“ಮಾತುಕತೆಗೆ ಮುಂದಾದವರನ್ನು ಹತ್ಯೆಗೈಯ್ಯುವುದು ಅನಾಕರೀಕ ಮತ್ತು ಫ್ಯಾಸಿಸ್ಟ್ ನಡೆಯಾಗಿದೆ. ಅಲ್ಲದೆ, ನಕ್ಸಲರು ಅನುಸರಿಸುತ್ತಿರುವ ಮಾರ್ಗವನ್ನು ನಾವು ಒಪ್ಪದಿರಬಹುದು. ಆದರೆ, ಅವರು ಸಾಮಾಜಿಕ ಬದಲಾವಣೆಗಾಗಿ ಸಶಸ್ತ್ರ ಹಿಡಿದಿರುವ ಸಾಮಾಜಿಕ ಹೋರಾಟಗಾರರು ಎಂಬುದನ್ನು ನಾವು ಮನಗಾಣಬೇಕು. ಹೋರಾಟಗಾರರನ್ನು ಕ್ರಿಮಿನಲ್ಗಳಂತೆ ನಡೆಸಿಕೊಳ್ಳುವುದು ಮಹಾಪರಾಧವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ದೊಡ್ಡ ಸಂಖ್ಯೆಯಲ್ಲಿ ಆದಿವಾಸಿ ಯುವಕರನ್ನು ಕೊಲ್ಲುವುದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿದೆ.
“ಕೇಂದ್ರ ಸರ್ಕಾರ ತನ್ನ ರಕ್ತ ಪಿಪಾಸುತನವನ್ನು ಬಿಡಬೇಕು. ನಕ್ಸಲರೊಂದಿಗೆ ಮಾತುಕತೆ ಆರಂಭಿಸಿ ಶಾಂತಿ ಸ್ಥಾಪನೆಗೆ ಮುಂದಾಗಬೇಕು. ಮಾತುಕತೆಗೆ ಪೂರ್ವಭಾವಿಯಾಗಿ ಕದನ ವಿರಾಮ ಜಾರಿಗೊಳ್ಳಬೇಕು. ಎರಡೂ ಕಡೆಯವರು ಶಸ್ತ್ರಗಳನ್ನು ಕೆಳಗಿಟ್ಟು ಮಾತುಕತೆಗಳಿಗೆ ಬೇಕಾದ ವಾತಾವರಣವನ್ನು ನಿರ್ಮಿಸಬೇಕು. ನಕ್ಸಲರನ್ನು ಪ್ರಜಾತಾಂತ್ರಿಕ ಮತ್ತು ಮಾನವೀಯ ನೆಲೆಯ ಮೇಲೆ ಮುಖ್ಯವಾಹಿನಿಗೆ ತರುವ ವಿಚಾರದಲ್ಲಿ ಕರ್ನಾಟಕ ಒಂದು ಉತ್ತಮ ಮಾದರಿಯನ್ನು ಕಟ್ಟಿಕೊಟ್ಟಿದೆ. ಅದೇ ಮಾದರಿಯಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಸಶಸ್ತ್ರ ಚಟುವಟಿಕೆ ಸಕರಾತ್ಮಕ ರೀತಿಯಲ್ಲಿ ಸಮಾರೋಪಗೊಂಡಿದೆ. ಕರ್ನಾಟಕದಿಂದ ಕೇಂದ್ರ ಸರ್ಕಾರ ಕಲಿಯಬೇಕು. ನಾಗರೀಕ ಸಮಾಜದ ಮಧ್ಯಸ್ತಿಕೆ ಮತ್ತು ಮಾತುಕತೆಯ ಮೂಲಕ ಸಂಘರ್ಷವನ್ನು ಸಮಾರೋಪಗೊಳಿಸಬೇಕು” ಎಂದು ವೇದಿಕೆಯು ಆಗ್ರಹಿಸಿದೆ.