ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಜಾತಿ ಸಂಕೋಲೆಯನ್ನು ದಲಿತರು ಮುರಿದಿದ್ದು, ಬರೋಬ್ಬರಿ 300 ವರ್ಷಗಳ ಬಳಿಕ ಶಿವನ ದೇವಾಲಯವನ್ನು ಪ್ರವೇಶಿಸಿದ್ದಾರೆ. ಪಶ್ಚಿಮ ಬಂಗಾಳದ ಪುರ್ಬ ಬರ್ಧಮಾನ್ ಜಿಲ್ಲೆಯ ಗಿಧೇಶ್ವರ ಶಿವ ದೇವಾಲಯಕ್ಕೆ 3 ಶತಮಾನಗಳ ಬಳಿಕ ಮೊದಲ ಬಾರಿಗೆ ದಲಿತರು ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುರ್ಬ ಬರ್ಧಮಾನ್ ಜಿಲ್ಲೆಯ ಗಿಧಗ್ರಾಮ್ ಗ್ರಾಮದಲ್ಲಿ ಗಿಧೇಶ್ವರ ಶಿವ ದೇವಾಲಯವಿದೆ. ಆದರೆ, 300 ವರ್ಷಗಳಿಂದ ದೇವಾಲಯಕ್ಕೆ ದಲಿತರಿಗೆ ಪ್ರವೇಶವಿರಲಿಲ್ಲ. ಗ್ರಾಮದಲ್ಲಿ ಸುಮಾರು 130 ದಲಿತ ‘ದಾಸ್’ ಸಮುದಾಯದ ಕುಟುಂಬಗಳಿದ್ದು, ಅವರ ಐದು ಮಂದಿ ಪ್ರತಿನಿಧಿಗಳು ಬುಧವಾರ ದೇವಾಲಯವನ್ನು ಪ್ರವೇಶಿಸಿದ್ದಾರೆ.
ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ದೇವಾಲಯದ ಮೆಟ್ಟಿಲುಗಳನ್ನು ಹತ್ತಿ, ದೇವಾಲಯವನ್ನು ಪ್ರವೇಶಿಸಿ, ಶಿವಲಿಂಗದ ಮೇಲೆ ಹಾಲು ಮತ್ತು ನೀರನ್ನು ಸುರಿದು ಅಭಿಷೇಕ ಮಾಡಿದ್ದಾರೆ. ಈ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿತ್ತು.
ಸುಮಾರು 300 ವರ್ಷಗಳ ಹಿಂದೆ ಸ್ಥಾಪಿತವಾದ ಗಿಧೇಶ್ವರ ಶಿವ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಗ್ರಾಮದಲ್ಲಿರುವ ‘ದಾಸ’ ಉಪನಾಮಗಳನ್ನು ಹೊಂದಿರುವ ಚಮ್ಮಾರಿಕೆ ಮತ್ತು ನೇಕಾರರಿಕೆ ಕೆಲಸ ಮಾಡುವ ದಲಿತ ಕುಟುಂಬಗಳು ದೇವಾಲಯದಲ್ಲಿ ಪೂಜೆ ಸಲ್ಲಿಸುವ ತಮ್ಮ ಮೂಲಭೂತ ಹಕ್ಕಿಗಾಗಿ ಹೋರಟ ನಡೆಸುತ್ತಿದ್ದರು.
ಈ ವರದಿ ಓದಿದ್ದೀರಾ?: ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು
ಫೆಬ್ರವರಿ 26ರಂದು ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ದಲಿತರು ಯೋಜಿಸಿದ್ದರು. ಆದರೆ, ‘ತಳ ಸಮುದಾಯ’ದವರು ಎಂಬ ಕಾರಣಕ್ಕೆ ಅವರನ್ನು ದೇವಾಲಯದ ಆವರಣದಿಂದ ಓಡಿಸಲಾಗಿತ್ತು. ಮಾತ್ರವಲ್ಲದೆ, ಬೆದರಿಕೆಯನ್ನೂ ಹಾಕಲಾಗಿತ್ತು.
ಇದೀಗ, ಆಡಳಿತ ಮತ್ತು ಪೊಲೀಸರ ‘ಸಕ್ರಿಯ ಹಸ್ತಕ್ಷೇಪ ಮತ್ತು ಸಹಕಾರ’ದಿಂದ ದೇವಾಲಯ ಪ್ರವೇಶಿಸಿದ್ದಾರೆ. ಶಿವನ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. “ದೇವಾಲಯದಲ್ಲಿ ಪೂಜೆ ಸಲ್ಲಿಸುವ ಹಕ್ಕು ನಮಗೆ ದೊರೆತಿರುವುದಕ್ಕೆ ನಾವು ಸಂತೋಷಗೊಂಡಿದ್ದೇವೆ. ಎಲ್ಲರ ಯೋಗಕ್ಷೇಮಕ್ಕಾಗಿ ನಾನು ದೇವರನ್ನು ಪ್ರಾರ್ಥಿಸಿದೆ” ಎಂದು ದೇವಾಲಯದ ಪ್ರವೇಶಿಸಿದ ಗ್ರಾಮದ ದಲಿತ ಮುಖಂಡ ಸಂತೋಷ್ ದಾಸ್ ಹೇಳಿದರು.
“ನಾವು ಈ ಹಿಂದೆಯೇ ಧ್ವನಿ ಎತ್ತಬೇಕಿತ್ತು. ಆಡಳಿತಾತ್ಮಕ ಒತ್ತಡದಿಂದಾಗಿ ದಲಿತರು ದೇವಾಲಯ ಪ್ರವೇಶಕ್ಕೆ ಗ್ರಾಮದ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಪೊಲೀಸ್ ನಿಯೋಜನೆಯನ್ನು ತೆಗೆದುಹಾಕಿದ ನಂತರವೂ ದೇವಾಲಯದ ಬಾಗಿಲುಗಳು ನಮಗಾಗಿ ತೆರೆದಿರುತ್ತವೆಯೇ ಎಂಬುದನ್ನು ಕಾದು ನೋಡಬೇಕು” ಎಂದಿದ್ದಾರೆ..